ಮೋದಿ ಅಯೋಧ್ಯೆಯತ್ತ ಗಮನಹರಿಸಲಿ: ಪೇಜಾವರಶ್ರೀ
ಮೈಸೂರು, ಮೇ 27: ಅನ್ಯ ಧರ್ಮದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗೋಹತ್ಯೆ ನಿಷೇಧ ಮತ್ತು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಶ್ರಮಿಸಬೇಕು ಎಂದು ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮೀಜಿಗಳು ಆಗ್ರಹಿಸಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಗಿಂತ ದೇವೇಗೌಡರ ಪಟ್ಟಿಯಲ್ಲಿ ಹೆಚ್ಚಿನ ದೇವಾಲಯದ ಲಿಸ್ಟು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಎಂದರೆ ಹಿಂದೂಗಳ ಪಕ್ಷವೆಂದೇ ವಿರೋಧ ಪಕ್ಷದವರು ಬಿಂಬಿಸುತ್ತಾ ಬಂದಿದ್ದಾರೆ. ಬಿಜೆಪಿಯನ್ನು ಸೋಲಿಸಲು ದೇಶದ ಎಲ್ಲಾ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಒಂದಾಗಿ ಮಹಾಘಟಬಂಧನ್ ಮಾಡಿಕೊಂಡಿದ್ದವು. ಆದರೆ ಬಿಜೆಪಿಗೆ ಮತ್ತೊಮ್ಮೆ ಸರ್ಕಾರ ಮುನ್ನಡೆಸಲು ದೇಶದ ಎಲ್ಲ ಧರ್ಮೀಯರು ಬೆಂಬಲ ನೀಡಿದ್ದಾರೆ. ಸರ್ಕಾರ ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಮತ್ತು ದೇಶದ ರಕ್ಷಣೆ ಮಾಡಲು ಕಟಿಬದ್ಧವಾಗಿರಬೇಕು ಎಂದರು.
ಬಹುಸಂಖ್ಯಾತರಿರುವ ಹಿಂದೂ ರಾಷ್ಟ್ರದಲ್ಲಿ ಅನ್ಯಧರ್ಮೀಯರ ಮನವೊಲಿಸುವ ಮೂಲಕ ಗೋಹತ್ಯೆ ನಿಷೇಧಕ್ಕೆ ಕಠಿಣ ಕಾನೂನಿನ ಅಗತ್ಯವಿದೆ. ಈ ಬಗ್ಗೆ ಪ್ರಧಾನಿಗಳು ದೃಢ ನಿಲುವು ತಳೆಯುವ ಮೂಲಕ ರಾಷ್ಟ್ರದಾದ್ಯಂತ ಗೋಹತ್ಯೆ ನಿಷೇಧಕ್ಕೆ ಮುಂದಾಗಬೇಕು. ಇದು ನಮ್ಮ ಆಶಯವೂ ಆಗಿದೆ ಎಂದರು. ಈ ಬಾರಿ ಎಲ್ಲ ಧರ್ಮೀಯರ ಮನವೊಲಿಸುವ ಮೂಲಕ ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಮಾಡುವಂತೆಯೂ ಆಗ್ರಹಿಸಿದ್ದಾರೆ.