'ಮೋದಿ ವಿದೇಶಿ ಪ್ರವಾಸಕ್ಕೆ 2 ಸಾವಿರ ಕೋಟಿ ಖರ್ಚು ಮಾಡಿರುವುದೇ ಸಾಧನೆ'
ಮೈಸೂರು, ಏಪ್ರಿಲ್ 11:ಐದು ವರ್ಷದ ಅವಧಿಯಲ್ಲಿ ಮೋದಿ ರಾಮ ಮಂದಿರ ಕಟ್ಟಲಿಲ್ಲವೇಕೆ? ಇಂತಹ ಭಾವನಾತ್ಮಕ ವಿಷಯವನ್ನು ಚುನಾವಣಾ ಬಂಡವಾಳವನ್ನಾಗಿಸಿಕೊಂಡು ವೋಟಿಗಾಗಿ ರಾಮ ಜನರಿಗೆ ನಾಮ ಎಂದು ಮೋದಿ ಜನರನ್ನು ಮೋಸ ಮಾಡುತ್ತಿದ್ದಾರೆಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಖ್ಯಮಂತ್ರಿ ಚಂದ್ರು ವಾಗ್ದಾಳಿ ನಡೆಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಂಬಿಕೆಗೆ ಅರ್ಹರಲ್ಲದವರ ಕೈಯ್ಯಲ್ಲಿ ಸದ್ಯ ಅಧಿಕಾರವಿದ್ದು, ಪ್ರಜಾಪ್ರಭುತ್ವದ ಹೆಸರಿನಲ್ಲಿ ಸರ್ವಾಧಿಕಾರ, ದಬ್ಬಾಳಿಕೆ ನಡೆಯುತ್ತಿದೆ. ಇದರಿಂದ ಪ್ರಜಾಪ್ರಭುತ್ವ ದಾರಿ ತಪ್ಪುತ್ತಿದೆ ಎಂದು ಪ್ರಧಾನಿ ವಿರುದ್ಧ ಹರಿಹಾಯ್ದರು.
ಸ್ವಾತಂತ್ರ್ಯ ನಂತರ ದೇಶವನ್ನು ಗಟ್ಟಿಯಾಗಿ ನಿಲ್ಲಿಸಿದ್ದೆ ಕಾಂಗ್ರೆಸ್.ಇಲ್ಲವಾದರೆ ತಾವೆಲ್ಲಿ ಪ್ರಧಾನಿಯಾಗುತ್ತಿದ್ದಿರಿ?ನೆಹರು ಕಾಲದಲ್ಲಿ ಸಾಕ್ಷರತೆ ಪ್ರಮಾಣ ಶೇ.80 ರಷ್ಟು ಏರಿಸಿದ್ದು ಯಾರು? ಮಾಹಿತಿ ಹಕ್ಕು, ಬಿಸಿಯೂಟ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್, 72 ಸಾವಿರ ಕೋಟಿ ರೈತರ ಸಾಲ ಮನ್ನಾ ಇಂತಹ ಯೋಜನೆಗಳಿಗೆ ಸಂಸ್ಕೃತ ಪದಗಳನ್ನು ಸೇರಿಸಿ ಹೆಸರು ಬದಲಿಸಿ ತಮ್ಮ ಯೋಜನೆ ಎಂದು ಘೋಷಿಸಿಕೊಂಡಿದ್ದಾರೆ ಎಂದು ಖಾರವಾಗಿ ಟೀಕಿಸಿದರು.

ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಆಧಾರ್ ಕಾರ್ಡ್ ಯೋಜನೆ , ಜಿಎಸ್ಟಿ ಬಗ್ಗೆ ತಕರಾರು ತೆಗೆದಿದ್ದ ಮೋದಿ ಈಗ ಅದನ್ನೇ ಸೂಕ್ತವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಿಲ್ಲ. ರಫೇಲ್ ಹಗರಣದಲ್ಲಿ ದೇಶದ ರಕ್ಷಣಾ ವಿಷಯ ಸೋರಿಕೆ, ಪೆಟ್ರೋಲ್ ತೆರಿಗೆಯಲ್ಲಿ ಬಂದ ಸಾವಿರ ಕೋಟಿ ಹಣ ಎಲ್ಲಿ ಹೋಯಿತು ? ಹಸಿ ಸುಳ್ಳಿನ ಮೂಲಕ ಬುಲೆಟ್ ಟ್ರೈನ್ ಬಿಡುತ್ತಾರೆ ಎಂದು ಲೇವಡಿ ಮಾಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಮಯ್ಯ, ಪ್ರಗತಿಪರರಾದ ರಾಮಚಂದ್ರೇಗೌಡ , ಪ್ರೊ ರುದ್ರಪ್ಪ ಅರಗೂಡು ಸೇರಿದಂತೆ ಹಲವರು ಉಪಸ್ಥಿತರಿದ್ದರು.












Click it and Unblock the Notifications