ಸಾವಿನ ಮನೆಯಲ್ಲೂ ಪುಂಡಾಟಿಕೆ; ಲಾಂಗ್ ಹಿಡಿದು ಬಂದ ಯುವಕರು
ಮೈಸೂರು, ಡಿಸೆಂಬರ್ 7: ವೃದ್ಧರೊಬ್ಬರು ನಿಧನರಾಗಿ ಮನೆಯ ಮುಂದೆ ಅವರ ಮೃತದೇಹವನ್ನು ಇರಿಸಿಕೊಂಡಿರುವಾಗಲೇ ಮೂವರು ಪುಂಡರು ಲಾಂಗ್ ಹಿಡಿದು ಮನೆಯವರಿಗೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ ಘಟನೆ ಇಲ್ಲಿನ ಚಾಮರಾಜ ಮೊಹಲ್ಲಾದ ಕಾಕರವಾಡಿಯಲ್ಲಿ ನಡೆದಿದೆ.
ಪ್ರೀತಿಸಿದ ಯುವತಿಯ ಕೈ ಬೆರಳಿಗೆ ಅಣ್ಣನಿಂದ ಮಚ್ಚಿನೇಟಿನ ಉಡುಗೊರೆ
ಪುಂಡಾಟಿಕೆ ಮೆರೆದ ಸಂತೋಷ್, ವಿಲ್ಸನ್ ಮತ್ತು ಆದರ್ಶ ಎಂಬುವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಲ್ಲಿನ ನಿವಾಸಿ ನವೀದ್ ಉಲ್ಲಾ ಎಂಬುವರು ತಮ್ಮ ಸಂಬಂಧಿಕರೊಬ್ಬರಿಗೆ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಎಂ.ಜಿ.ರಸ್ತೆಯಲ್ಲಿ ಈ ಮೂವರು ಆರೋಪಿಗಳು ತಡೆದು ಗಲಾಟೆ ನಡೆಸಿದ್ದಾರೆ.
ಆಸ್ಪತ್ರೆಯಲ್ಲಿ ಆ ಸಂಬಂಧಿ ಮೃತಪಟ್ಟ ನಂತರ ವಾಪಸ್ ಕಾಕರವಾಡಿಯ ಮೃತರ ನಿವಾಸಕ್ಕೆ ಶವ ತಂದಿರಿಸಿಕೊಂಡಿದ್ದರು. ಆಗಲೂ ಅವರ ಹಿಂದೆಯೇ ಬಂದ ಈ ಮೂವರು ಲಾಂಗ್ ಹಿಡಿದು ಹೊಡೆದಿದ್ದಾರೆ. ಈ ಸಮಯ ಸ್ಥಳೀಯರು ಕೂಡ ಆರೋಪಿಗಳಿಗೆ ಪ್ರತಿಯಾಗಿ ಹೊಡೆದು ಕಳುಹಿಸಿದ್ದಾರೆ. ಗಲಾಟೆಯಲ್ಲಿ ಸಯ್ಯದ್ ಅಜಂ ಎಂಬುವರು ತೀವ್ರವಾಗಿ ಗಾಯಗೊಂಡಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.