ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ ಬಿಜೆಪಿ ನಾಯಕರ ಭೇಟಿ
ಮೈಸೂರು, ಜೂನ್ 2: ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ಕೇಳಿ ಬಂದ ಬೆನ್ನಲ್ಲೇ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಮಂಗಳವಾರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಸಚಿವರಾದ ಸಿ.ಪಿ ಯೋಗೇಶ್ವರ್, ಎಸ್.ಸುರೇಶ್ ಕುಮಾರ್ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದರು.
ಇದರ ನಡುವೆ ಇಂದು ಬಿಜೆಪಿ ಎಂಎಲ್ಸಿ ಎಚ್.ವಿಶ್ವನಾಥ್, ಸಂಸದ ಶ್ರೀನಿವಾಸ್ ಪ್ರಸಾದ್ ನಿವಾಸಕ್ಕೆ ಭೇಟಿ ನೀಡಿರುವುದು ಮೈಸೂರು ಭಾಗದ ಬಿಜೆಪಿ ನಾಯಕರ ಜೊತೆಗೆ ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳಿಸಿದೆ.

ಸಿಪಿವೈ ಬಂದ ಮೇಲೆ ಬಿಜೆಪಿ ಗೊಂದಲದಲ್ಲಿದೆ
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್, ಸಿ.ಪಿ ಯೋಗೇಶ್ವರ್ ಬಂದ ಮೇಲೆ ರಾಜ್ಯ ಬಿಜೆಪಿ ಸ್ವಲ್ಪ ಗೊಂದಲದಲ್ಲಿದೆ. ಮೊದಲು ಯತ್ನಾಳ್ ಹೀಗೆ ಗೊಂದಲ ಮೂಡಿಸಿದ್ದರು. ಇದೀಗ ಸಿ.ಪಿ ಯೋಗೇಶ್ವರ್ ಈ ಗೊಂದಲ ಶುರುಮಾಡಿದ್ದಾರೆ. ಆದರೆ ನಾಯಕತ್ವ ಬದಲಾವಣೆಯ ವಿಚಾರದಲ್ಲಿ ಚರ್ಚೆ ಬೇಡ. ಅಲ್ಲದೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹ ಈ ಮಾತನ್ನು ಎಲ್ಲರಿಗೂ ಹೇಳಿದ್ದಾರೆ ಎಂದರು.
ರಾಜ್ಯ ಹಾಗೂ ಸ್ಥಳೀಯ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿರುವ ಸಂಸದ ಶ್ರೀನಿವಾಸ್ ಪ್ರಸಾದ್ ನಿವಾಸ ಮತ್ತೊಂದು ಮಹತ್ವದ ರಾಜಕೀಯ ಬದಲಾವಣೆಗೆ ವೇದಿಕೆ ಆಗಲಿದೆಯೇ? ಎಂಬ ದೊಡ್ಡ ಕುತೂಹಲ ಮೂಡಿಸಿದೆ.

ಈ ಬಗ್ಗೆ ಸಣ್ಣ ಸುಳಿವು ನೀಡಿರುವ ಎಂಎಲ್ಸಿ ಎಚ್.ವಿಶ್ವನಾಥ್, ""ಶ್ರೀನಿವಾಸ್ ಪ್ರಸಾದ್ ಮನೆಯಲ್ಲಿ ಹಲವು ವಿಚಾರಕ್ಕೆ ಮೂಹೂರ್ತ ಇಟ್ಟಿದ್ದೇವೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲಿಗೆ, ಸಮ್ಮಿಶ್ರ ಸರ್ಕಾರ ಪತನಕ್ಕೂ ಇಲ್ಲೆ ಮುಹೂರ್ತ ಇಟ್ಟಿದ್ದೇವು. ಅಲ್ಲದೇ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗುವುದಕ್ಕೂ ಇಲ್ಲೇ ಮುಹೂರ್ತ ಇಟ್ಟಿದ್ದೇವು. ನಂತರದ ಹಲವು ಬೆಳವಣಿಗೆಗೆ ಪ್ರಸಾದ್ ಅವರ ಮನೆ ಸಾಕ್ಷಿ ಆಗಿದೆ'' ಎಂದರು.

ಈಗಲೂ ಶ್ರೀನಿವಾಸ್ ಪ್ರಸಾದ್ ಭೇಟಿಯ ಜೊತೆ ರಾಜಕೀಯ ಹಾಗೂ ಜಿಲ್ಲೆಯ ವಿದ್ಯಮಾನದ ಮಾತನಾಡಿದ್ದೇವೆ. ಸದ್ಯಕ್ಕೆ ಯಾವ ವಿಚಾರಕ್ಕೆ ಮುಹೂರ್ತ ಅಂತ ಹೇಳುವುದಿಲ್ಲ. ಕಾದು ನೋಡೋಣ ಏನಾಗುತ್ತದೆ ಎಂದು ಶ್ರೀನಿವಾಸ್ ಪ್ರಸಾದ್ ಭೇಟಿ ನಂತರ ಎಚ್.ವಿಶ್ವನಾಥ್ ಮಾರ್ಮಿಕವಾಗಿ ಹೇಳಿಕೆ ನೀಡಿದರು.












Click it and Unblock the Notifications