ಬಿಎಸ್ವೈ ಪರ ನಿಂತ ಸ್ವಾಮೀಜಿಗಳ ವಿರುದ್ಧ ಗುಡುಗಿದ ಎಚ್. ವಿಶ್ವನಾಥ್
ಮೈಸೂರು, ಜುಲೈ 21: "ಮಠ ಮಾನ್ಯಗಳು, ಧರ್ಮಾಧಿಕಾರಿಗಳು ಸಮಾಜದ ಭಾಗವಾಗಬೇಕು. ಅದನ್ನು ಬಿಟ್ಟು ರಾಜಕಾರಣ ಹಾಗೂ ಅಧಿಕಾರದ ಭಾಗವಾಗಬಾರದು," ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಕಿಡಿಕಾರಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಶ್ವನಾಥ್, "ಮಠಾಧೀಶರು ರಾಜಕೀಯ ವಿಚಾರಕ್ಕೂ ತಲೆ ಹಾಕಬಾರದು, ಏಕವ್ಯಕ್ತಿ ಹಾಗೂ ಏಕಪಕ್ಷದ ಪರವಾಗಿ ಧರ್ಮಾಧಿಕಾರಿಗಳು ನಿಲ್ಲಬಾರದು. ಇದು ಯಾರಿಗೂ ಕೂಡ ಒಳ್ಳೆಯದಲ್ಲ,'' ಎಂದು ಟೀಕಿಸಿದರು.
"ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಜನ ಸಮುದಾಯದ ಏಳಿಗೆ ಆಗಬೇಕು. ಬಸವ ಪ್ರಶಸ್ತಿ ಪಡೆದ ಮುರುಘಾ ಶ್ರೀಗಳೇ ಬೀದಿಗಿಳಿದಿರುವುದು ನೋವಿನ ಸಂಗತಿ. 'ಸರ್ಕಾರದ ಕೆಲಸ ದೇವರ ಕೆಲಸ' ಎನ್ನುವುದು ಈಗ ಸ್ವಾಮಿಗಳ ಕೆಲಸವಾಗಿದೆ. ಯಡಿಯೂರಪ್ಪ ನಮ್ಮ ಜನ ನಾಯಕ, ನನಗೆ ಗೌರವ ಇದೆ. ಎರಡು ಸಾರಿ ಮುಖ್ಯಮಂತ್ರಿ ಆದರೂ ಬಿಎಸ್ವೈ ಪರಿಸ್ಥಿತಿ ಶಿಶು ಆಗಿದ್ದಾರೆ.''

ಮೊದಲ ಬಾರಿ ಸಿಎಂ ಆದಾಗ ಕುಟುಂಬದವರಿಂದ ಜೈಲು ಪಾಲಾದರು. ಇದರಿಂದ ಪಕ್ಷದಿಂದ ಉಚ್ಛಾಟನೆ ಮಾಡಲಾಯಿತು. ಆ ಸಂದರ್ಭದಲ್ಲಿ ಏಕೆ ಸ್ವಾಮೀಜಿಗಳು ಅವರ ಪರ ನಿಲ್ಲಲಿಲ್ಲ?. ನರೇಂದ್ರ ಮೋದಿ ಅವರ ತತ್ವಕ್ಕೆ ವಿರುದ್ಧವಾಗಿ ಆಡಳಿತ ನಡೆಸುತ್ತಿದ್ದೀರಾ?,'' ಎಂದು ಸಿಎಂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
17 ಜನ ಬಿಜೆಪಿಗೆ ಸೇರಿದ ಮೇಲೆ ಅಧಿಕಾರಕ್ಕೆ ಬಂತು
"ಬಿಜೆಪಿ ಸರ್ಕಾರ ರಚನೆ ಮಾಡಲು ಲಿಂಗಾಯತರು ಕಾರಣರಲ್ಲ, ನಾವು 17 ಮಂದಿ ಲಿಂಗಾಯತರಲ್ಲ, ನಮ್ಮಿಂದ ಸರ್ಕಾರ ರಚನೆಯಾಯಿತು. ಒಕ್ಕಲಿಗ, ಕುರುಬ, ಸೇರಿದಂತೆ ಬೇರೆ ಸಮುದಾಯದ ಶಾಸಕರ ಸಹಕಾರದಿಂದ ಸಿಎಂ ಆಗಿದ್ದಾರೆ. ಬಿಎಸ್ವೈರನ್ನು ಸಿಎಂ ಮಾಡಲು ಮಠಾಧೀಶರ ಕೊಡುಗೆ ಏನು?,'' ಎಂದು ಎಂಎಲ್ಸಿ ವಿಶ್ವನಾಥ್ ಪ್ರಶ್ನಿಸಿದರು.

"ಯಡಿಯೂರಪ್ಪನವರ ನಾಲಿಗೆ ಮತ್ತು ಕೈ ಅವರ ಮಗನ ಕೈಯಲ್ಲಿದೆ. ಈ ಕಾರಣಕ್ಕೆ ಹೈಕಮಾಂಡ್ ತೀರ್ಮಾನ ತೆಗೆದುಕೊಂಡಿದೆ. ಬಿಜೆಪಿ ಕಟ್ಟಿದ್ದು ಬಿ.ಎಸ್. ಯಡಿಯೂರಪ್ಪ ಅಲ್ಲ, ಅನೇಕ ನಾಯಕರ ಶ್ರಮದಿಂದ ಕಟ್ಟಿರುವುದು. ನೀವು ಅಧಿಕಾರಿ ಅನುಭವಿಸಿದಿರಿ ಅಷ್ಟೇ. ರಾಜ್ಯದ ಅಭಿವೃದ್ಧಿಗಾಗಿ, ಬಿಜೆಪಿ ಭವಿಷ್ಯದ ದೃಷ್ಟಿಯಿಂದ, ಗೌರವಯುತವಾಗಿ ರಾಜೀನಾಮೆ ಕೊಡಿ. ರಾಜ್ಯದಲ್ಲಿ ಅನೇಕ ನಾಯಕರು ತಮ್ಮದೆ ದಾರಿಯಲ್ಲಿ, ಆಡಳಿತ ನಡೆಸಿ ರಾಜ್ಯದ ಪ್ರಗತಿಗೆ ಶ್ರಮಿಸಿ, ಗೌರವಯುತವಾಗಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ,'' ಎಂದು ಹೇಳಿದರು.
"ಯಡಿಯೂರಪ್ಪನವರೇ... ನೀವು 2 ಬಾರಿ ಸಿಎಂ ಆದರೂ, ನಿಮ್ಮ ನಿರ್ಗಮನ ಗೌರವಯುತವಾಗಿ ಆಗುತ್ತಿಲ್ಲ. ಸ್ವಾಮೀಜಿಗಳು ನಡೆದಾಡುವ ದೇವರಾಗಬೇಕು ಹೊರತು, ನಡೆದಾಡುವ ರಾಜಕಾರಣಿಗಳು ಆಗಬಾರದು,'' ಅಂತ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು, ನಾಯಕತ್ವ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ನಿಲುವಿನ ಬಗ್ಗೆ ಕಿಡಿಕಾರಿದ ಎಚ್. ವಿಶ್ವನಾಥ್, "ಒಂದೆಡೆ ಸಿದ್ದರಾಮಯ್ಯ ಭ್ರಷ್ಟ ಸರ್ಕಾರ ಹೋಗಬೇಕು ಅಂದರೆ, ಶಾಮನೂರು ಶಿವಶಂಕರಪ್ಪ ಬಿಎಸ್ವೈ ಸಿಎಂ ಆಗಿ ಮುಂದುವರೆಯಲಿ ಅಂತಿದ್ದಾರೆ. ಹಾಗಿದರೆ ನಿಮ್ಮ ನಿಲುವು ಏನು ಎಂಬುವುದನ್ನು ಸ್ಪಷ್ಟಪಡಿಸಿ.''
ಶಾಮನೂರು ಶಿವಶಂಕರಪ್ಪ ಹಾಗೂ ಎಂ.ಬಿ. ಪಾಟೀಲ್ ವಿರುದ್ಧ ವಾಗ್ದಾಳಿ ನಡೆಸಿದ ವಿಶ್ವನಾಥ್, "ನೀವು ವ್ಯಾಪಾರಿಗಳು, ಯಾರಾದರೂ ಬಡ ಲಿಂಗಾಯತರಿಗೆ ಎಂಬಿಬಿಎಸ್ ಸೀಟ್ ಕೊಟ್ಟಿದ್ದೀರಾ? ನಿಮಗೆ ಯಾವ ಜಾತಿ ಇದೆ,'' ಅಂತ ಪ್ರಶ್ನಿಸಿದರು.












Click it and Unblock the Notifications