ಥೂ.. ನಿನ್ನ ಜನ್ಮಕ್ಕೆ ನಾಚಿಕೆ ಆಗಬೇಕು: ಮೈಸೂರು ಪೊಲೀಸ್ ಆಯುಕ್ತರ ವಿರುದ್ಧ ಎಂಎಲ್ಸಿ ಎಚ್.ವಿಶ್ವನಾಥ್ ಆಕ್ರೋಶ
ಮೈಸೂರು, ಮಾರ್ಚ್ 25: ಮೈಸೂರು ನಗರದ ಬೋಗಾದಿ-ಹಿನಕಲ್ ವರ್ತುಲ ರಸ್ತೆಯಲ್ಲಿ ಪೊಲೀಸರು ವಾಹನ ತಪಾಸಣೆ ವೇಳೆ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದರು. ನಂತರ ಜನರು ಅಪಘಾತಕ್ಕೆ ಪೊಲೀಸರೇ ಕಾರಣವೆಂದು ಪೊಲೀಸರ ಮೇಲೆ ಹಲ್ಲೆ ನಡೆಸಿ, ಪೊಲೀಸ್ ಕಾರನ್ನು ಜಖಂಗೊಳಿಸಿದ್ದರು.
ಈ ಘಟನೆಯಲ್ಲಿ ಜನರನ್ನು ನಿಯಂತ್ರಿಸಿದ್ದ ಪೊಲೀಸರಿಗೆ ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ ಪ್ರಶಂಸನಾ ಪತ್ರ ನೀಡಿರುವುದಕ್ಕೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ""ಬೈಕ್ ಸವಾರನನ್ನು ಸಾಯಿಸಿದ್ದಕ್ಕೆ ಪೊಲೀಸರಿಗೆ ಪ್ರಶಂಸನಾ ಪತ್ರ ಕೊಡ್ತಿಯಾ, ನೀನು ಯಾವ ಸೀಮೆ ಕಮಿಷನರಯ್ಯ..? ಥೂ.. ನಿನ್ನ ಜನ್ಮಕ್ಕೆ ನಾಚಿಕೆ ಆಗಬೇಕು'' ಎಂದು ಕಿಡಿಕಾರಿದರು.

"ಸಿಟಿ ಪೊಲೀಸ್ ಕಾಯ್ದೆ ಏನ್ ಹೇಳುತ್ತೆ? ಓಡಿಸಿಕೊಂಡು ಬೈಕ್ ಹಿಡಿ ಅಂತ ಹೇಳುತ್ತಾ? ಸರ್ಕಾರದ ದುಡ್ಡಿನಲ್ಲಿ ಕ್ಯಾಮೆರಾ, ಉಪಕರಣಗಳನ್ನು ಕೊಟ್ಟಿದ್ದೀವಿ. ಈ ವರ್ತನೆಯನ್ನು ಯಾರೂ ಕ್ಷಮಿಸಲು ಸಾಧ್ಯವಿಲ್ಲ'' ಎಂದರು.
ಮೈಸೂರಿನಲ್ಲಿ ಪೊಲೀಸರು ದಾರಿ ತಪ್ಪುತ್ತಿದ್ದಾರೆ. ಓಡಾಡಿಸಿಕೊಂಡು ವಾಹನ ಹಿಡಿಯೋದನ್ನು ಬಿಡಬೇಕು. ತಪ್ಪಿಸಿಕೊಂಡು ಓಡಿ ಹೋದರೆ ಕ್ಯಾಮೆರಾ, ಸಿಸಿ ಕ್ಯಾಮೆರಾ ಬಳಕೆ ಮಾಡಬೇಕು. ಘಟನೆ ಕುರಿತು ಗೃಹ ಸಚಿವ ಗಮನ ಸೆಳೆಯಲಾಗುವುದು ಎಂದರು.
ಪೊಲೀಸ್ ಕಮಿಷನರ್ ಬೀದಿಗೆ ಬರಲ್ಲ, ಸಿಟಿ ರೌಂಡ್ ಹಾಕಲ್ಲ. ಎಷ್ಟು ವರ್ಷ ಆಯ್ತು ಬಂದು? ಎಷ್ಟು ಜನ ಡಿಸಿಪಿ, ಎಸಿಪಿಗಳಿದ್ದೀರಿ ಏನ್ ಮಾಡ್ತಿದ್ದೀರಿ? ಕೇವಲ ಟ್ರಾಫಿಕ್ ಪೊಲೀಸರಿಂದ ಟ್ರಾಫಿಕ್ ಕಂಟ್ರೋಲ್ ಆಗಲ್ಲ. ಜನಪ್ರತಿನಿಧಿಗಳು, ಜನರ ಬಗ್ಗೆ ಗೌರವ ಇಲ್ಲ ಎಂದು ಆಯುಕ್ತರ ವಿರುದ್ಧ ಎಂಎಲ್ಸಿ ಎಚ್.ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications