ಚುನಾವಣೆ ಅನ್ನುವುದು ಹಾವು- ಏಣಿ ಆಟ; ಮೈಸೂರಿನಲ್ಲಿ ಜೆಡಿಎಸ್ ಜಯಭೇರಿ!
ಮೈಸೂರು, ಡಿಸೆಂಬರ್ 15: ಚುನಾವಣೆ ಅನ್ನುವುದು ಹಾವು- ಏಣಿ ಆಟ ಅಂತ ಮತ್ತೊಮ್ಮೆ ಸಾಬೀತಾಗಿದೆ. ಕೊನೆ ಕ್ಷಣದವರೆಗೂ ಕುತೂಹಲ ಮೂಡಿಸಿದ್ದ ಮೈಸೂರು- ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ರೋಚಕ ತಿರುವು ಪಡೆದು ಅಂತ್ಯ ಕಂಡಿದೆ.
ಕೊನೆ ಕ್ಷಣದ ಮತ ಎಣಿಕೆಯಲ್ಲಿ ಜೆಡಿಎಸ್ ಅಭ್ಯರ್ಥಿ ಸಿ.ಎನ್. ಮಂಜೇಗೌಡ ಎರಡನೇ ಪ್ರಾಶಸ್ತ್ಯದ ಮತಗಳನ್ನು ಪಡೆದು ರೋಚಕ ಗೆಲುವು ಪಡೆದರು. ಇದಕ್ಕೂ ಮುನ್ನ ಕಾಂಗ್ರೆಸ್ ಅಭ್ಯರ್ಥಿ ಡಾ. ತಿಮ್ಮಯ್ಯ ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದ್ದರು.
ಮೈಸೂರಿನ ಪಡುವಾರಹಳ್ಳಿಯ ಮಹಾರಾಣಿ ಕಾಲೇಜಿನಲ್ಲಿ ನಡೆದ ಮತ ಎಣಿಕೆ ಪ್ರಕ್ರಿಯೆಗೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿತ್ತು. ಜಿಲ್ಲಾಧಿಕಾರಿ ಬಗಾದಿ ಗೌತಮ್ ನೇತೃತ್ವದಲ್ಲಿ ಮಂಗಳವಾರ ಬೆಳಗ್ಗೆ 8ಕ್ಕೆ ಸ್ಟ್ರಾಂಗ್ ರೂಂ ತೆರೆದು ಎಣಿಕೆ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.

ಆರಂಭಿಕ ಸುತ್ತುಗಳಿಂದಲೂ ಕಾಂಗ್ರೆಸ್ ಅಭ್ಯರ್ಥಿ ಡಿ. ತಿಮ್ಮಯ್ಯ ಮುನ್ನಡೆ ಕಾಯ್ದುಕೊಳ್ಳುವ ಮೂಲಕ 2800 ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆದು ಜಯಭೇರಿ ಬಾರಿಸಿದರು. ಈ ಮೂಲಕ ಮೈಸೂರು ಜಿಲ್ಲೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಪತ್ಯಕ್ಕೆ ಮುನ್ನುಡಿ ಬರೆಯಿತು.
ಗೆಲುವು ಖಾತ್ರಿ ಆಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಅಭ್ಯರ್ಥಿ ತಿಮ್ಮಯ್ಯ, ""ಇದು ನನ್ನ ಗೆಲುವಲ್ಲ ಪಕ್ಷದ ಗೆಲುವಾಗಿದ್ದು, ನಾಯಕರಾದ ಸಿದ್ದರಾಮಯ್ಯನವರ ಶೇ.100ರಷ್ಟು ಪ್ರಯತ್ನ ಹಾಗೂ ನನಗೆ ಟಿಕೆಟ್ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ರಾಷ್ಟ್ರೀಯ ಅಧ್ಯಕ್ಷರು ನನಗೆ ಕೊಟ್ಟ ಅವಕಾಶದಿಂದ ಈ ಚುನಾವಣೆ ಗೆದ್ದಿದ್ದೇನೆ. ನನ್ನ ಗೆಲುವಿನಲ್ಲಿ ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡರ ಸಹಕಾರವೂ ಇದೆ. ಅವರಿಗೆ ನಾನು ಅಭಾರಿಯಾಗಿದ್ದೇನೆ,'' ಎಂದರು.
ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಖಚಿತ ಆಗುತ್ತಿದ್ದಂತೆ ಮತ ಎಣಿಕೆ ಕೇಂದ್ರದಿಂದ ಹೊರಬಂದ ವಿಜೇತ ಕಾಂಗ್ರೆಸ್ ಅಭ್ಯರ್ಥಿ ಡಾ.ತಿ ಮ್ಮಯ್ಯಗೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಬೆಂಬಲಿಗರು ಹಾರ ಹಾಕಿ, ಹೂ ಗುಚ್ಚ ನೀಡಿ, ಭರ್ಜರಿ ಸ್ವಾಗತ ಕೋರಿದರು. ಅಷ್ಟೇ ಅಲ್ಲದೆ ಗೆಲುವಿನ ಜೈಕಾರ ಹಾಕಿದ ಕಾರ್ಯಕರ್ತರು, ತಿಮ್ಮಯ್ಯರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದರು.
ತೆನೆ- ಕಮಲ ಟಫ್ ಫೈಟ್
ವಿಧಾನ ಪರಿಷತ್ ಚುನಾವಣೆಯಲ್ಲಿ ಮೊದಲ ಪ್ರಾಶಸ್ತ್ಯದ ಮತಗಳನ್ನು ಪಡೆಯಲು ವಿಫಲರಾದ ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ಎರಡನೇ ಪ್ರಾಶಸ್ತ್ಯದ ಮತ ಎಣಿಕೆಯಲ್ಲಿ ಪ್ರಬಲ ಪೈಪೋಟಿ ಏರ್ಪಟ್ಟಿತು. ಕೊನೆ ಹಂತದವರೆಗೂ ಪ್ರಾಬಲ್ಯ ಸಾಧಿಸಿದ್ದ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ, ಗೆಲುವಿನತ್ತ ದಾಪುಗಾಲಿಟ್ಟಿದ್ದರು.
ಆದರೆ ಅಂತಿಮವಾಗಿ ಎರಡನೇ ಪ್ರಾಶಸ್ತ್ಯದ ಮತಗಳಿಗೆ ವ್ಯಾಲ್ಯೂ ಫಿಕ್ಸ್ ಮಾಡಿದಾಗ ಸಿ.ಎನ್. ಮಂಜೇಗೌಡರು 42 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಕೊನೆ ಕ್ಷಣದಲ್ಲಿ ಎದುರಾದ ಅಚ್ಚರಿಯ ಬೆಳವಣಿಗೆಯಲ್ಲಿ ಜೆಡಿಎಸ್ ಅಭ್ಯರ್ಥಿ ಮಂಜೇಗೌಡ ಗೆಲುವು ಸಾಧಿಸುವ ಮೂಲಕ ಬಿಜೆಪಿ ಗೆಲುವಿನ ಆಸೆಗೆ ತಣ್ಣೀರೆರಚಿದರು.
ಒಂದು ಹಂತದಲ್ಲಿ ರಘು ಕೌಟಿಲ್ಯ ಗೆಲುವು ಅಧಿಕೃತ ಘೋಷಣೆ ಆಗುವ ಮೊದಲೇ ಬಹುತೇಕ ಬಿಜೆಪಿ ಕಾರ್ಯಕರ್ತರು ಗೆಲುವಿನ ಸಂಭ್ರಮದಲ್ಲಿ ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯಗೆ ಶುಭಾಶಯ ಕೋರಿದ್ದರು. ಆದರೆ ಆರಂಭದಿಂದ ಮುನ್ನಡೆ ಸಾಧಿಸುತ್ತಾ ಬಂದ ಬಿಜೆಪಿಯ ರಘು ಕೌಟಿಲ್ಯ ಕೊನೆ ಹಂತದಲ್ಲಿ ಸೋತು ಭಾರೀ ನಿರಾಸೆ ಅನುಭವಿಸಿದರು.












Click it and Unblock the Notifications