ರೋಹಿಣಿ ಸಿಂಧೂರಿ ಸಿಂಗಂ ಅಲ್ಲ, ಜನರನ್ನು ಮಂಗಂ ಮಾಡಲು ಹೊರಟಿದ್ದ ಪ್ರಚಾರ ಪ್ರಿಯೆ
ಮೈಸೂರು, ಜುಲೈ 30: "ರೋಹಿಣಿ ಸಿಂಧೂರಿ ಅವರು ಸಿಂಗಂ ಅಲ್ಲ, ಮೈಸೂರು ಜನರನ್ನು ಮಂಗಂ ಮಾಡಲು ಹೊರಟಿದ್ದ ಪ್ರಚಾರ ಪ್ರಿಯೆ," ಎಂದು ಜೆಡಿಎಸ್ ಶಾಸಕ ಸಾ.ರಾ. ಮಹೇಶ್ ಕಿಡಿಕಾರಿದರು.
ಮೈಸೂರು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಆಸ್ತಿ ವ್ಯಾಜ್ಯ ಸಂಬಂಧ ಸುಪ್ರೀಂ ಕೋರ್ಟ್ವರೆಗೂ ಹೋದವರು ಮೂರನೇ ದಿನದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಪ್ರಮೋದಾ ದೇವಿ ಜೊತೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಜಗತ್ತಿನ ಎಲ್ಲಿಯಾದರೂ ಹೀಗೆ ನಡೆಯುತ್ತಾ,'' ಎಂದು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಹಾಗೂ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಫೋಟೋ ತೋರಿಸಿ ವಾಗ್ದಾಳಿ ನಡೆಸಿದರು.
"ಸರ್ವೇ ನಂ. 4 ವ್ಯಾಜ್ಯದಲ್ಲಿ ಡಿಸಿ ವಾದಿ ಮತ್ತು ರಾಜವಂಶಸ್ಥರು ಪ್ರತಿವಾದಿ. ಆ ಪ್ರಕರಣ ಸುಪ್ರೀಂ ಕೋರ್ಟ್ನಲ್ಲಿ ಅಡ್ಮಿಟ್ ಆಗಲಿಲ್ಲ. ಕೇಸ್ ವಜಾಗೊಂಡ ಮೂರನೇ ದಿನದಲ್ಲಿ ವಾದಿ, ಪ್ರತಿವಾದಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈಗ ಫೋಟೋ ತೆಗೆಸಿಕೊಳ್ಳುವ ನಿಮಗೆ ರಾಜವಂಶದವರ ಇತಿಹಾಸ ಗೊತ್ತಿರಲಿಲ್ಲವೇ,'' ಎಂದು ರೋಹಿಣಿ ಅವರನ್ನು ಪ್ರಶ್ನಿಸಿದರು.

"ಒಂದು ಕೋಟಿ ರೂ. ದುರ್ಬಳಕೆ ಮಾಡಿಕೊಂಡಿರುವ ಕಾರಣಕ್ಕಾಗಿ ನಿಮ್ಮ ಮೇಲೆ ಕ್ರಮ ಆಗಬೇಕು. ರಾಜಮನೆತನ ಮತ್ತು ಅವರ ಕೊಡುಗೆ ಬಗ್ಗೆ ಈ ರೋಹಿಣಿ ಅವರು ಪುಸ್ತಕ ಓದಿಕೊಂಡಿರಬೇಕು. ರಾಜಮನೆತನ ಏನು, ಮೈಸೂರು ಜನ ಏನು ಎಂದು ಅವರಿಗೆ ಈಗ ಗೊತ್ತಾದಂತಿದೆ.''
"ರಾಜ ಮನೆತನದವರ ಮೇಲೆ ಅಡ್ಮಿಟ್ ಆಗದ ಕೇಸ್ನ್ನು ಹಾಕಿದ್ದಾರೆ. ಇದಕ್ಕೆ 24 ಲಕ್ಷ ರೂ. ಹಣವನ್ನು ವ್ಯರ್ಥ ಮಾಡಿದರು. ಇದು ಮುಡಾ ಸಿಬ್ಬಂದಿ ನಿವೃತ್ತರಾದ ನಂತರ ಅವರಿಗೆ ಕೊಡುವ ಪಿಂಚಣಿ ಹಣವನ್ನು ಯಾರ ಅನುಮತಿ ಪಡೆಯದೆಯೇ ವ್ಯರ್ಥ ಮಾಡಿದ್ದಾರೆ,'' ಎಂದು ಹರಿಹಾಯ್ದರು.
"ಭೂ ಹಗರಣದಿಂದ ನನ್ನ ವರ್ಗಾವಣೆ ಮಾಡಿದರು ಎಂಬ ರೋಹಿಣಿ ಸಿಂಧೂರಿ ಆರೋಪ ಸುಳ್ಳು. ಅವರು ಯಾವುದೇ ಭೂಮಿ ಉಳಿಸುವ ಕೆಲಸ ಮಾಡಿಲ್ಲ. ದಲಿತ ಸಮುದಾಯದ ಶರತ್ರನ್ನು 28 ದಿನಗಳಲ್ಲಿ ವರ್ಗಾವಣೆ ಮಾಡಿಸಿದರು. ವಾಲ್ಮೀಕಿ ಜಯಂತಿಯಂದು ನಾಗರಹೊಳೆಯ ರೆಸಾರ್ಟ್ನಲ್ಲಿ ವಾಸ್ತವ್ಯ ಹೂಡಿದ್ದರು. ದಸರಾ ಸಂದರ್ಭದಲ್ಲೂ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದರು. ಕೋವಿಡ್ ಸಾವಿನ ಸಂಬಂಧ ತಪ್ಪು ಲೆಕ್ಕ ನೀಡಿದ್ದರು. ಸಾ.ರಾ. ಚೌಲ್ಟ್ರಿ ರಾಜಕಾಲುವೆ, ಗೋಮಾಳದಲ್ಲಿ ನಿರ್ಮಾಣ ಮಾಡಿದೆ ಅಂತ ಆರೋಪ ಮಾಡಿದ್ದರು. ಉಲ್ಲಂಘನೆ ಆಗಿಲ್ಲ ಎಂದು ಜಿಲ್ಲಾಧಿಕಾರಿಗಳಿಂದಲೇ ವರದಿ ಬಂದಿದೆ,'' ಎಂದು ಸಾ.ರಾ. ಮಹೇಶ್ ಸ್ಪಷ್ಟಪಡಿಸಿದರು.

ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ
ಕೊರೊನಾ ಸೋಂಕು ಹಿನ್ನೆಲೆ ಅಷಾಢ ಶುಕ್ರವಾರದಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದ್ದು, ಈ ನಡುವೆಯೂ ಚಾಮುಂಡಿ ಬೆಟ್ಟದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತ ಸಮೂಹವೇ ಬಂದಿದೆ.
ಚಾಮುಂಡೇಶ್ವರಿ ವರ್ಧಂತಿ ಹಿನ್ನೆಲೆ, ನಿರ್ಬಂಧದ ನಡುವೆಯೂ ಸಾವಿರಾರೂ ಸಂಖ್ಯೆಯ ಜನಸ್ತೋಮ ಸೇರಿದ್ದು, ಗಣ್ಯರಿಗೆ ಮಾತ್ರ ಪ್ರವೇಶವಿದ್ದರೂ, ಇಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿದ್ದಾದರು ಹೇಗೆ? ಎಂಬ ಪ್ರಶ್ನೆ ಉದ್ಬವಿಸಿದೆ. ಪ್ರೊಟೊಕಾಲ್ ಇರುವ ವ್ಯಕ್ತಿಗಳು, ಕೆಲಸದ ನಿಮಿತ್ತ ಬೆಟ್ಟಕ್ಕೆ ತೆರಳುವ ಅಧಿಕಾರಿಗಳಿಗೆ ಮಾತ್ರ ಆಷಾಢ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ಪ್ರವೇಶವಿರುತ್ತದೆ ಎಂದು ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಮೈಸೂರು ಜಿಲ್ಲಾಧಿಕಾರಿಗಳ ಆದೇಶಕ್ಕೂ ಡೋಂಟ್ ಕೇರ್ ಎಂದು ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದು, ಕೊರೊನಾ ನಡವೆಯೂ ಸಾಮಾಜಿಕ ಅಂತರ ಮರೆತು ಚಾಮುಂಡೇಶ್ವರಿ ದರ್ಶನಕ್ಕೆ ಮುಂದಾಗಿದ್ದಾರೆ. ಬೆಟ್ಟಕ್ಕೆ ಮಾಧ್ಯಮಗಳಿಗೆ ನಿರ್ಭಂದವಿದೆ. ಆದರೆ ಗಣ್ಯರ ಹೆಸರಿನಲ್ಲಿ ಸಾವಿರ ಜನ ಸಮೂಹ ಆಗಮಿಸಿದ್ದು, ಪೊಲೀಸರು ಒತ್ತಡಕ್ಕೆ ಮಣಿದು ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರಿಗೆ ಪ್ರವೇಶ ಕೊಟ್ಟಿದ್ದಾರಾ ಎಂಬ ಶಂಕೆ ವ್ಯಕ್ತವಾಗಿದೆ.
ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ ಹಿನ್ನೆಲೆ ಬೆಟ್ಟದ ತಪ್ಪಲಲ್ಲಿ ಪೊಲೀಸರು ವಾಹನಗಳನ್ನು ತಡೆ ಹಿಡಿಯುತ್ತಿದ್ದರು. ಆದರೆ ಇಂದು ಬೆಟ್ಟಕ್ಕೆ ನೂರಾರು ಸಂಖ್ಯೆಯ ವಾಹನಗಳು ಆಗಮಿಸುತ್ತಿದ್ದು, ಗಣ್ಯರ ಹೆಸರಿನಲ್ಲಿ ಆಗಮಿಸಿದ್ದು ಯಾರು? ಜಿಲ್ಲಾಧಿಕಾರಿ ಆದೇಶಕ್ಕೂ ಕಿಮ್ಮತ್ತು ಇಲ್ಲವಾ ಎಂಬ ಪ್ರಶ್ನೆ ಎದ್ದಿದೆ.












Click it and Unblock the Notifications