ಕಾಂಗ್ರೆಸ್ ನಾಯಕರು ಶವ ಪೆಟ್ಟಿಗೆಗೆ ಕೊನೆ ಮೊಳೆ ಹೊಡೆಯುತ್ತಿದ್ದಾರೆ: ರಾಮದಾಸ್
ಮೈಸೂರು, ಸೆಪ್ಟೆಂಬರ್ 5: "ಕಾಂಗ್ರೆಸ್ ನಾಯಕರು ಶವಪೆಟ್ಟಿಗೆಗೆ ಕೊನೆ ಮೊಳೆ ಹೊಡೆಯುವ ಸಂದರ್ಭ ಈಗ ಎದುರಾಗಿದೆ" ಎಂದು ಶಾಸಕ ರಾಮದಾಸ್ ವ್ಯಂಗ್ಯವಾಡಿದ್ದಾರೆ.
ಯಡಿಯೂರಪ್ಪ ಮೈಸೂರಿಗೆ ಬಂದಾಗ ಪ್ರತ್ಯಕ್ಷವಾದ ಶಾಸಕ ರಾಮದಾಸ್
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಡಿಕೆಶಿ ಹಾಗೂ ಚಿದಂಬರಂ ಬಂಧನದಿಂದ ಕಾಂಗ್ರೆಸ್ ನಾಯಕರು ವಿಚಲಿತರಾಗಿದ್ದಾರೆ. ಸಾರ್ವಜನಿಕ ಆಸ್ತಿಪಾಸ್ತಿ ನಷ್ಟ ಮಾಡುವುದು ಸರಿಯಲ್ಲ. 72 ವರ್ಷ ಕಾಂಗ್ರೆಸ್ ಬಳಿ ಇಡಿ, ಐಟಿ ಇತ್ತು ಎಂದು ಒಪ್ಪಿಕೊಂಡರೆ ಇದೀಗ ಐಟಿ, ಇಡಿ ಬಿಜೆಪಿ ಬಳಿ ಇದೆ ಅಂತ ನಾವು ಒಪ್ಪಿಕೊಳ್ಳುತ್ತೇವೆ" ಎಂದರು.
"ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನಕ್ಕೆ ಕಾಂಗ್ರೆಸ್ಸಿಗರು ರಾಜಕೀಯದ ಬಣ್ಣ ಕೊಡುತ್ತಿದ್ದಾರೆ. ಈ ಪ್ರಕ್ರಿಯೆಗಳು ಕಾನೂನು ಅಷ್ಟೇ. ಈ ಹಿಂದೆ ಸದನದಲ್ಲಿ, ನಾನು ತಪ್ಪು ಮಾಡಿದ್ದರೆ ಶಿಕ್ಷೆಯಾಗುತ್ತದೆ. ಬಂಧನವಾದರೆ ನೀವು ನೋಡೋಕೆ ಬರ್ತೀರಾ? ಎಂದು ಅಧ್ಯಕ್ಷರನ್ನು ಡಿ.ಕೆ. ಶಿವಕುಮಾರ್ ಅವರೇ ಕೇಳಿದ್ದರು. ಇದೆಲ್ಲವನ್ನೂ ನೋಡಿದರೆ ಅವರು ಮಾನಸಿಕವಾಗಿ ಸಿದ್ಧವಾಗಿದ್ದರು ಎಂದು ಅರಿವಾಗುತ್ತದೆ" ಎಂದಿದ್ದಾರೆ.