ಮೈಸೂರಿನಲ್ಲಿ ಪ್ರತಿಭಟನೆಯೊಂದಿಗೆ ಭಾರತ್ ಬಂದ್ ಶುರು
ಮೈಸೂರು, ಜನವರಿ 8 : ಮೋಟಾರ್ ವಾಹನ ಮಸೂದೆ (ತಿದ್ದುಪಡಿ) ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಇಂದು ಹಾಗೂ ನಾಳೆ ವಿವಿಧ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನೀಡಿದ್ದು, ಬಂದ್ ಗೆ ಮೈಸೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿ ಗ್ರಾಮಾಂತರ ಸಾರಿಗೆ ಹಾಗೂ ಮೈಸೂರು ನಗರ ಸಾರಿಗೆ ಸಂಚಾರ ವಿರಳವಾಗಿವೆ. ಈ ಮಧ್ಯೆ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಎಐಟಿಯುಸಿ, ಸಿಐಟಿಯು, ಐಎನ್ಟಿಯುಸಿ, ಎಲ್ಪಿಎಫ್ ಸೇರಿದಂತೆ ಹಲವು ಕಾರ್ಮಿಕ ಸಂಘಟನೆಗಳು ಇಂದು ಬಂದ್ ಗೆ ಕರೆ ಕೊಟ್ಟಿವೆ.
ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿ ಇರುವ ಕಾರ್ಮಿಕರು ಬೆಳ್ಳಂಬೆಳಗ್ಗೆ ಮೈಸೂರು ಊಟಿ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದರು. ಈ ವೇಳೆ ಮಧ್ಯಪ್ರವೇಶಿಸಿದ ಪೊಲೀಸರ ಜೊತೆ ಪ್ರತಿಭಟನಾಕಾರರು ವಾಗ್ವಾದಕ್ಕಿಳಿದರು.
ನಗರದ ಪ್ರಮುಖ ರಸ್ತೆಯಲ್ಲಿ ಕ್ಯಾಬ್ ಗಳು ಹಾಗೂ ಆಟೋಗಳು ಸಂಚರಿಸುತ್ತಿದೆ. ಇಂದು ಮುಂಜಾನೆಯೇ ವಿವಿಧ ಜಿಲ್ಲೆಗಳಿಗೆ ಸಾರಿಗೆ ಬಸ್ ಗಳು ಸಂಚಾರ ಆರಂಭಿಸಿವೆ. ಮುಂದೆ ಓದಿ...

ವಾಹನ ಸಂಚಾರ ಎಂದಿನಂತೆ ಆರಂಭ
ಈಗಾಗಲೇ ಬಂದ್ ಗೆ ಬೆಂಬಲ ನೀಡುವುದಿಲ್ಲ ಎಂದಿರುವ ಹೋಟೆಲ್ ಮಾಲೀಕರ ಸಂಘ, ಹೋಟೆಲ್ ಗಳನ್ನು ತೆರೆದಿವೆ. ಸದ್ಯ ನಗರದಲ್ಲಿ ವಾಹನ ಸಂಚಾರ ಎಂದಿನಂತೆ ಆರಂಭವಾಗಿದೆ.

ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ
ಇತ್ತ ರೈಲ್ವೆ ಪ್ರಯಾಣಿಕರ ಸಂಖ್ಯೆಯಲ್ಲಿ ಬಹುತೇಕ ಇಳಿಮುಖವಾಗಿದೆ. ದಿನನಿತ್ಯ ತುಂಬಿ ತುಳುಕುತ್ತಿದ್ದ ಮೈಸೂರಿನಿಂದ ಬೆಂಗಳೂರಿಗೆ ತೆರಳುವ ಚಾಮುಂಡಿ ರೈಲಿನಲ್ಲಿ ಪ್ರಯಾಣಿಕರು ವಿರಳವಾಗಿ ಕಂಡುಬಂದರು. ನಿತ್ಯ ಮೈಸೂರಿನಿಂದ ಕಾರ್ಮಿಕ ವರ್ಗ ಹೆಚ್ಚು ಪ್ರಯಾಣ ಮಾಡುವ ರೈಲು ಇದಾಗಿದ್ದು, ಇಂದು ಕೇವಲ ಶೇಕಡ 30 ರಷ್ಟು ಮಂದಿ ಪ್ರಯಾಣಿಕರು ಮಾತ್ರ ಕಾಣಸಿಕ್ಕರು.

ಸಾರಿಗೆ ಬಸ್ ಗಳು ತೆರಳುತ್ತಿಲ್ಲ
ಮೈಸೂರಿನಿಂದ ಈವರೆಗೆ ಯಾವುದೇ ಅಂತರ್ ರಾಜ್ಯಕ್ಕೆ ಸಾರಿಗೆ ಬಸ್ ಗಳು ತೆರಳುತ್ತಿಲ್ಲ. ಬೇರೆ ರಾಜ್ಯಗಳಿಂದ ಬಂದಿರುವ ಬಸ್ ಗಳು ಮಾತ್ರ ವಾಪಾಸ್ ಆಗುತ್ತಿದೆ ಎಂದು ಒನ್ ಇಂಡಿಯಾಗೆ
ಕೆಎಸ್ ಆರ್ ಟಿಸಿ ಟ್ರಾಫಿಕ್ ಕಂಟ್ರೋಲ್ ಅಧಿಕಾರಿ ಮಾಹಿತಿ ನೀಡಿದ್ದಾರೆ.

ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸಲಿವೆ
ಮೈಸೂರು ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಯಾವುದೇ ಪರೀಕ್ಷೆ ಜನವರಿ 8 ಮತ್ತು 9ರಂದು ನಡೆಯುವುದಿಲ್ಲ. ಎಂದಿನಂತೆ ವಿಶ್ವವಿದ್ಯಾನಿಲಯಗಳು ಕಾರ್ಯ ನಿರ್ವಹಿಸಲಿವೆ. ಹಾಲು, ಪತ್ರಿಕೆ, ದಿನ ಬಳಕೆ ವಸ್ತುಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದಿಲ್ಲ. ಮಲ್ಟಿಪ್ಲೆಕ್ಸ್, ಚಲನಚಿತ್ರ ಮಂದಿರಗಳಲ್ಲಿ ಎಂದಿನಂತೆ ಪ್ರದರ್ಶನವಿರುತ್ತದೆ.












Click it and Unblock the Notifications