ಪಠ್ಯದಿಂದ ಟಿಪ್ಪು ವಿಷಯ ಕೈಬಿಡುವ ವಿಚಾರ: ಶಿಕ್ಷಣ ಸಚಿವರ ಸ್ಪಷ್ಟನೆ
ಮೈಸೂರು, ಫೆಬ್ರವರಿ 10: ಪಠ್ಯದಿಂದ ಟಿಪ್ಪು ವಿಷಯ ಕೈ ಬಿಡುವು ವಿಚಾರಕ್ಕೆ ಸಂಬಂಧಪಟ್ಟಂತೆ ಸ್ಪಷ್ಟನೆ ನೀಡಿರುವ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಈ ಶೈಕ್ಷಣಿಕ ವರ್ಷದಲ್ಲಿ ಅದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಮೈಸೂರು ವಿಶ್ವವಿದ್ಯಾಲಯ ಹಾಗೂ ದೂರದರ್ಶನ ಕೇಂದ್ರದ ಸಹಯೋಗದೊಂದಿಗೆ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ವಿದ್ಯಾರ್ಥಿಗಳೊಂದಿಗೆ "ವಿಜ್ಞಾನ ಸಂವಾದ" ಕಾರ್ಯಕ್ರಮದಲ್ಲಿ ಮಾತನಾಡಿದರು.
ಟಿಪ್ಪು ವಿಷಯವನ್ನು ಕೈ ಬಿಡುವ ಬಗ್ಗೆ ವಿಸ್ತೃತ ಚರ್ಚೆಯಾಗಬೇಕಿದೆ, ಈ ಬಗ್ಗೆ ಸಮಿತಿಯವರು ತಿಳಿಸಿದ್ದಾರೆ. ವಿಸ್ತೃತವಾದ ಇನ್ನೊಂದು ಸಮತಿ ಮಾಡಿ ಚರ್ಚೆ ಮಾಡಲಾಗುವುದು ಎಂದು ಹೇಳಿದರು.

ಈ ಬಾರಿ ಶಾಲೆಯ ಆರಂಭದ ದಿನದಿಂದಲೇ ಪುಸ್ತಕ, ಸಮವಸ್ತ್ರ ನೀಡಲಾಗುವುದು. ಈ ಹಿನ್ನೆಲೆಯಲ್ಲಿ ಈ ಬಾರಿ ಪಠ್ಯದಿಂದ ಟಿಪ್ಪು ವಿಷಯ ಕೈ ಬಿಡಲು ಸಾಧ್ಯವಿಲ್ಲ ಎಂದು ಮೈಸೂರಿನಲ್ಲಿ ಸಚಿವ ಎಸ್.ಸುರೇಶ್ ಕುಮಾರ್ ಸ್ಪಷ್ಟನೆ ಕೊಟ್ಟಿದ್ದಾರೆ.
ಪರೀಕ್ಷಾ ಹಿತದೃಷ್ಟಿಯಿಂದ ರಾಜ್ಯದ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಟಿವಿ ಕ್ಯಾಮರಾ ಕಡ್ಡಾಯವಾಗಿ ಹಾಕಲಾಗುವುದು ಎಂದು ತಿಳಿಸಿದರು. ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಕುರಿತು ಪ್ರತಿಕ್ರಿಯಿಸಿ 10600 ಶಿಕ್ಷಕರನ್ನು ತೆಗೆದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಮೊದಲನೆ ಲಿಸ್ಟ್ ಹಾಕಿದ್ದೇವೆ. ಎರಡನೇ ಲಿಸ್ಟ್ ನಲ್ಲಿ ತಾಂತ್ರಿಕ ಸಮಸ್ಯೆ ಬಂದಿದೆ. ಅದನ್ನು ಚರ್ಚಿಸ್ತೇನೆ ಎಂದು ತಿಳಿಸಿದರು.
ವಿದ್ಯಾರ್ಥಿಯ ಪಕ್ಕೆಲುಬು ವಿಡಿಯೋ ವೈರಲ್ ವಿಚಾರಕ್ಕೆ ಮಾತನಾಡಿದ ಸಚಿವ ಸುರೇಶ್ ಕುಮಾರ್, ""ಇದು ಶಿಕ್ಷಕರ ಮನಸ್ಥತಿಯ ಪ್ರಶ್ನೆ, ಅಮಾನತು ವಾಪಸ್ಸು ಪಡೆಯಿರಿ ಅಂತಾ ಆ ಶಿಕ್ಷಕರು ನನ್ನ ಬಳಿ ಬಂದಿದ್ದರು, ಅವರಿಂದ ಸಂಪೂರ್ಣ ಮಾಹಿತಿ ಪಡೆದಿದ್ದೇನೆ'' ಎಂದು ತಿಳಿಸಿದರು.

ಇದಾದ ಮೇಲೂ ಪುಳಿಯೊಗರೆ, ನಪುಂಸಕದಂತಹ ವಿಡಿಯೋ ಬಂದಿದೆ. ಕೆಲವರಿಗೆ ರಾಜ್ಯೋತ್ಸವ ಅಂತಾ ಹೇಳಲು ಬರುವುದಿಲ್ಲ.
ಕೆಲವರಿಗೆ ಕೊರತೆಗಳಿರುತ್ತವೆ. ಅದನ್ನು ಈ ರೀತಿ ಮಾಡುವುದು ಸರಿಯಲ್ಲ. ಈಗಾಗಲೇ ಶಾಲೆಯಲ್ಲಿ ಯಾರು ಮೊಬೈಲ್ ಬಳಸದಂತೆ ಸೂಚಿಸಲಾಗಿದೆ ಎಂದರು.
ವಿದ್ಯಾರ್ಥಿಗಳೊಂದಿಗೆ ಶಿಕ್ಷಣ ಸಚಿವರ ಸಂವಾದ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾಲಯವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಕುಲಸಚಿವ ಪ್ರೊ.ಆರ್.ಶಿವಪ್ಪ ಸೇರಿ ಇತರರು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಖಾತೆ ಹಂಚಿಕೆ ವಿಚಾರವಾಗಿ ಮಾತನಾಡಿದ ಸುರೇಶ್ ಕುಮಾರ್, ಖಾತೆ ಹಂಚಿಕೆ ಸಿಎಂ ಯಡಿಯೂರಪ್ಪ ಅವರಿಗೆ ಬಿಟ್ಟದ್ದು, ಇವತ್ತು ಖಾತೆ ಹಂಚಿಕೆಯಾಗಲಿದೆ ಎಂದು ತಿಳಿಸಿದರು.












Click it and Unblock the Notifications