ಮೈಸೂರಿನಿಂದ ಲೋಕಸಭಾ ಚುನಾವಣೆಗೆ ಸ್ಫರ್ಧಿಸುತ್ತಾರಾ ಎಚ್ಡಿಕೆ ಪುತ್ರ ನಿಖಿಲ್ ?
ಮೈಸೂರು, ಮಾರ್ಚ್ 2 : ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನಟ ಕುಮಾರ್ ನಿಖಿಲ್ ಕುಮಾರಸ್ವಾಮಿ ಅವರನ್ನು ಚುನಾವಣೆ ಕಣಕ್ಕಿಳಿಸಬೇಕು ಎಂಬ ಮನದ ಇಂಗಿತವನ್ನು ಸಚಿವ ಜಿ. ಟಿ ದೇವೇಗೌಡ ಮುಖ್ಯಮಂತ್ರಿಗಳ ಮುಂದೆ ವ್ಯಕ್ತಪಡಿಸಿದ್ದಾರೆ.
ಮೈಸೂರಿನ ಮೈಸೂರಿನಲ್ಲಿ ಏರ್ಪಡಿಸಿದ್ದ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ ಎದುರು ಮಾತನಾಡಿದ ಅವರು, ಮೈಸೂರಿನಿಂದ ಜಾತ್ಯತೀತ ಜನತಾದಳಕ್ಕೆ ಯಾವುದೇ ಮೋಸ ಆಗಿಲ್ಲ.
ಮೋಸವಾಗಿರುವುದು ಒಂದೇ ಅದು ಲೋಕಸಭಾ ಅಭ್ಯರ್ಥಿಯನ್ನು ನಿಲ್ಲಿಸದಿರುವುದು. ಈ ಬಾರಿ ನಿಖಿಲ್ ಕುಮಾರಸ್ವಾಮಿ ಅವರನ್ನು ನಮ್ಮ ಜಿಲ್ಲೆಗೆ ನೀಡಿದರೆ ನಾವು ಗೆಲ್ಲಿಸಿ ದೇವೇಗೌಡರೊಂದಿಗೆ ಸಂಸತ್ತಿನಲ್ಲಿ ಕೂರುವಂತೆ ಮಾಡುತ್ತೇವೆ ಎಂದು ಹೇಳಿದರು.

ನಾನು 11 ಸಾವಿರ ಮತಗಳಿಂದ ಸೋತೆ. ಅಲ್ಲಿಂದೀಚೆಗೆ ನಮ್ಮ ಪಕ್ಷದಿಂದ ಯಾರೂ ಗೆದ್ದಿಲ್ಲ. ಈ ಸಲ ನಿಖಿಲ್ ಅವರನ್ನು ಗೌರವವಾಗಿ ನಡೆಸಿಕೊಂಡು ದೇವೇಗೌಡರಿಗೆ ಶಕ್ತಿ ತುಂಬುತ್ತೇವೆ ಎಂದ ಅವರು, ನಾವೆಲ್ಲ ಒತ್ತಾಯ ಮಾಡಿದ್ದೇವೆ ಪಕ್ಷದ ದೊಡ್ಡವರು ಬರಲಿಲ್ಲ ಅಂದರೇ ನಿಖಿಲ್ ಕಳುಹಿಸಿ, ನಾವು ಗೆಲ್ಲಿಸಿ ಕೊಡ್ತೀವಿ ಎಂದು ಹೇಳುವ ಮೂಲಕ ಬಹಿರಂಗ ಸಭೆಯಲ್ಲಿ ನಿಖಿಲ್ ಗೆ ಲೋಕಸಭಾ ಕ್ಷೇತ್ರದ ಆಫರ್ ನೀಡಿದರು.
ಜಾ.ದಳದ ಪಕ್ಷದ ಪರವಾಗಿ ಯಾರನ್ನೇ ಅಭ್ಯರ್ಥಿಯಾಗಿ ಘೋಷಣೆ ಮಾಡಿದರೂ ಗೆಲ್ಲಿಸಿಕೊಂಡು ಬರುತ್ತೇವೆ. ದೇವೇಗೌಡರ ಶಕ್ತಿಯನ್ನು ಬಲಪಡಿಸಲು ಕ್ಷೇತ್ರದಲ್ಲಿ ಪ್ರತಿಯೊಬ್ಬರೂ ಕೆಲಸ ಮಾಡಲು ಸಿದ್ಧರಿದ್ದಾರೆ ಎಂದು ಹೇಳುವ ಮೂಲಕ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕೊಡಗು ಕ್ಷೇತ್ರವನ್ನು ದಳಕ್ಕೆ ನೀಡಬೇಕು ಎಂಬ ಹಂಬಲವನ್ನು ಹೊರ ಹಾಕಿದರು.
ನಂತರ ನಟ ನಿಖಿಲ್ ಕುಮಾರ್ ಮಾತನಾಡಿ, ನಮ್ಮ ತಂದೆಯನ್ನು ನೀವು ಬೆಳೆಸಿದ್ದೀರಿ. ಅವರು ನಿಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ನಾನು ತಮ್ಮ ಸೇವೆ ಮಾಡಲು ಸಿದ್ಧ .ನಾನು ರಾಜಕೀಯದಲ್ಲಿ ಈಗ ಕಣ್ಣು ಬಿಡುತ್ತಿದ್ದೇನೆ.
ನಾನೇನಾದರೂ ತಪ್ಪು ಮಾತನಾಡಿದ್ದರೆ ಕ್ಷಮಿಸಿ.. ಇಂತಹ ಕುಟುಂಬದಲ್ಲಿ ಹುಟ್ಟಿ ಜನರ ಸೇವೆ ಮಾಡದೇ ಇರೋಕೆ ಆಗುತ್ತಾ ? ಇಂತಹ ತಂದೆ ಹೊಟ್ಟೆಯಲ್ಲಿ ಹುಟ್ಟಿರೋದು ನನ್ನ ಪುಣ್ಯ. ಮತ್ತೆ ಬರುತ್ತೇನೆ ನಿಮ್ಮ ಜೊತೆ ಇರ್ತೀನಿ ನನಗೆ ಅವಕಾಶ ಮಾಡಿಕೊಡಿ ಎಂದು ಸ್ಪರ್ಧೆಯ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ.
ಈ ವೇಳೆ ನಿಖಿಲ್ ಕುಮಾರಸ್ವಾಮಿ ಅವರ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಸಮಾರಂಭದಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಹರ್ಷೋದ್ಗಾರ ಮೊಳಗಿತು. ಈ ಮೂಲಕ ಮಂಡ್ಯ ಲೋಕಸಭಾ ಕ್ಷೇತ್ರ ಬಿಟ್ಟು ಮೈಸೂರು ಕ್ಷೇತ್ರದಿಂದ ನಿಖಿಲ್ ರನ್ನು ಕಣಕ್ಕಿಳಿಸುವ ತೆರೆ ಮರೆಯ ಪ್ರಯತ್ನಗಳು ನಡೆಯುತ್ತಿದೆ ಎನ್ನಲಾಗಿದೆ.












Click it and Unblock the Notifications