ಕರಾವಳಿ ರಂಗಾಯಣ ನಿರ್ದೇಶಕರಾಗ್ತಾರಾ ಮೈಸೂರಿನ ಮೈಮ್ ರಮೇಶ್ ?
ಮೈಸೂರು, ಜನವರಿ 17: ಕರಾವಳಿ ರಂಗಾಯಣದ ನಿರ್ದೇಶಕರಾಗಿ ರಂಗಭೀಷ್ಮ ಬಿ.ವಿ. ಕಾರಂತರ ನೇರ ಶಿಷ್ಯರೂ ಆದ ಮೈಸೂರು ರಂಗಾಯಣದ ಹಿರಿಯ ಕಲಾವಿದ ಮೈಮ್ ರಮೇಶ್ ಅವರ ಹೆಸರು ಮುಂಚೂಣಿಯಲ್ಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಅವರು ಉಡುಪಿಯಲ್ಲಿ ಕರಾವಳಿ ರಂಗಾಯಣ ಆರಂಭಕ್ಕೆ ವಿಶೇಷ ಒತ್ತು ನೀಡಿರುವ ಸಂದರ್ಭದಲ್ಲಿ ರಂಗ ಸಮಾಜ ಕರಾವಳಿ ರಂಗಾಯಣದ ನಿರ್ದೇಶಕರಾಗಿ ಮೈಮ್ ರಮೇಶ್ ಮತ್ತು ಎನ್ಎಸ್ಡಿಯ ಸುರೇಶ್ ಆನಗಳ್ಳಿ ಹೆಸರನ್ನು ಅಂತಿಮಗೊಳಿಸಿದೆ.
ಕರಾವಳಿ ರಂಗಾಯಣದ ನಿರ್ದೇಶಕರನ್ನಾಗಿ ಮೈಮ್ ರಮೇಶ್ ಅವರನ್ನು ನಿಯೋಜಿಸಬೇಕೆಂದು ಮೈಸೂರು ಮತ್ತು ಕರಾವಳಿ ಭಾಗದ ರಂಗಭೂಮಿಯ ಹಿರಿಯ ಕಲಾವಿದರು ರಂಗ ಸಮಾಜವನ್ನು ಒತ್ತಾಯಿಸಿದ್ದಾರೆ. ಮೈಮ್ ರಮೇಶ್ ಅವರು 30 ವರ್ಷಗಳಿಂದ ರಂಗಭೂಮಿಯಲ್ಲಿ ದುಡಿದು ರಂಗಭೂಮಿಯ ಒಳ-ಹೊರಗನ್ನು ಬಲ್ಲವರು.

ಸಾಮುದಾಯಿಕವಾಗಿ ರಂಗಭೂಮಿಯನ್ನು ಕಟ್ಟಬಲ್ಲ ಸಾಮರ್ಥ್ಯವುಳ್ಳವರು. ಅಲ್ಲದೇ, ರಂಗಾಯಣದಲ್ಲಿ ಕರ್ತವ್ಯ ನಿರ್ವಹಿಸುತ್ತಲೇ ಕರಾವಳಿ ಭಾಗದಲ್ಲಿ ರಂಗಭೂಮಿ ಅಭಿವೃದ್ಧಿಗಾಗಿ ಶ್ರಮಿಸಿದವರು. ರಂಗಾಯಣ ಕಟ್ಟುವುದು ಹೇಗೆಂದು ಮೈಮ್ ರಮೇಶ್ ಗೆ ತಿಳಿದಿದೆ. ರಂಗಭೂಮಿಗೆ ಬೇಕಾದ ಸೂಕ್ಷ್ಮತೆಯೂ ಅವರಲ್ಲಿದೆ.
ಬರೀ ಡಿಗ್ರಿ ಪಡೆದಿರುವುದನ್ನು ಮಾನದಂಡವಾಗಿಸಿಕೊಂಡು ನಿರ್ದೇಶಕ ಸ್ಥಾನಕ್ಕೆ ಆಯ್ಕೆ ಮಾಡುವುದು ಸರಿಯಲ್ಲ. ಕರಾವಳಿ ರಂಗಾಯಣಕ್ಕೆ ಮೈಮ್ ರಮೇಶ್ ನಿರ್ದೇಶಕರಾದರೆ ಖಂಡಿತ ಸಂತೋಷವಿದೆ ಎಂದು ಹಿರಿಯ ರಂಗಕರ್ಮಿ ತಿಳಿಸಿದ್ದಾರೆ.
ನಾಲ್ಕು ರೆಪರ್ಟರಿ
ಬಿ.ವಿ.ಕಾರಂತರು 1989 ರಲ್ಲಿ ಮೈಸೂರಿನಲ್ಲಿ ರಂಗಾಯಣ ಸ್ಥಾಪಿಸಿದಾಗ ನಾಲ್ಕು ರೆಪರ್ಟರಿಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದ್ದರು. ಕರಾವಳಿ, ಮಲೆನಾಡು, ಹೈದರಾ ಬಾದ್ ಭಾಗಗಳಲ್ಲಿ ರಂಗಾಯಣ ಸ್ಥಾಪಿಸಿ ಪ್ರಾದೇಶಿಕ ಭಾಷೆ, ಸಂಸ್ಕೃತಿ ಸೊಗಡನ್ನು ಜೀವಂತವಾಗಿಸುವ ಆಶಯ ಹೊಂದಿದ್ದರು. ಈಗ ಕರಾವಳಿ ಭಾಗದ ರಂಗಾಯಣವನ್ನು ಉಡುಪಿಯಲ್ಲಿ ಸ್ಥಾಪಿಸಲು ರಂಗಾಯಣ ನಿರ್ಧರಿಸಿದೆ.












Click it and Unblock the Notifications