ಚಾಮುಂಡಿ ಬೆಟ್ಟದಲ್ಲಿ ಪ್ರವಾಸಿಗರಿಗೆ ಇನ್ಮುಂದೆ ಊಟ, ಬಗೆಬಗೆ ತಿಂಡಿ
Recommended Video

ಮೈಸೂರು, ಫೆಬ್ರವರಿ 23 : ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಹೊಸ ಕಾಯಕಲ್ಪ ನೀಡಿದ್ದು, ದೇವಸ್ಥಾನದಲ್ಲಿ ಡಬ್ಬಲ್ ಮಂಗಳಾರತಿ ತಟ್ಟೆಗೆ ಬ್ರೇಕ್ ಬಿದ್ದಿದೆ. ಅರ್ಚಕರು, ಸನ್ನಿಧಿ ಪರಿಚಾರಕ ಬೇರೆ - ಬೇರೆ ಮಂಗಳಾರತಿ ಕಾಸಿನ ತಟ್ಟೆಗೆ ಅವಕಾಶವಿಲ್ಲ.
ಚಾಮುಂಡೇಶ್ವರಿ ದೇವಿ ಆರ್ಚಕರು, ಮತ್ತೊಬ್ಬ ಆಗಮಿಕರ ನಡುವೆ ಇದ್ದ ಸ್ಪರ್ಧೆ ಸ್ಥಗಿತಗೊಳ್ಳಲಿದೆ. ಅರ್ಚಕರು ಮತ್ತು ಆಗಮಿಕರ ಸ್ಪರ್ಧೆಯಿಂದಾಗಿ ದೇವಾಲಯಕ್ಕೆ ಬರುವ ಭಕ್ತರಿಗೆ ನಿತ್ಯ ಇರಿಸುಮುರಿಸು ಉಂಟಾಗಿತ್ತು. ಈ ಅನಾನುಕೂಲಕ್ಕೆ ಬ್ರೇಕ್ ಹಾಕಲು ಜಿಲ್ಲಾಡಳಿತದಿಂದ ಕ್ರಮ ಕೈಗೊಳ್ಳಲಾಗಿದ್ದು, ಇನ್ಮುಂದೆ ಒಂದೇ ಮಂಗಳಾರತಿ ಕಾಸಿನ ತಟ್ಟೆ ಇಡುವಂತೆ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ.
ಚಾಮುಂಡಿ ಬೆಟ್ಟದಲ್ಲಿರುವ ದಾಸೋಹ ಭವನದಲ್ಲಿ ಮಧ್ಯಾಹ್ನದ ದಾಸೋಹದ ಜೊತೆಗೆ ಮಾರ್ಚ್ 1ರಿಂದ ಬೆಳಗ್ಗೆ ಮತ್ತು ಸಂಜೆ ವೇಳೆ ಭಕ್ತಾದಿಗಳು ಮತ್ತು ಪ್ರವಾಸಿಗರಿಗೆ ಪ್ರಸಾದ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿ ರಂದೀಪ್ ತಿಳಿಸಿದ್ದಾರೆ.

ಚಾಮುಂಡೇಶ್ವರಿ ಬೆಟ್ಟಕ್ಕೆ ಭಕ್ತರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೊಸ ಮೆನು ಜಾರಿಗೆ ಬರಲಿದ್ದು, ಅದರಂತೆ ಬೆಳಗ್ಗೆ 7:30 ರಿಂದ 10 ಗಂಟೆ ಹಾಗೂ ರಾತ್ರಿ 7:30 ರಿಂದ 9ರವರೆಗೆ ಪ್ರಸಾದ ನೀಡಲು ವೇಳಾಪಟ್ಟಿ ಮಾಡಲಾಗಿದೆ.
ಹೊಸ ಮೆನು ಹೀಗಿದೆ
ಸೋಮವಾರ: ತರಕಾರಿ ಉಪ್ಪಿಟ್ಟು ಹಾಗೂ ರವೆ ಕೇಸರಿ ಬಾತ್
ಮಂಗಳವಾರ: ಖಾರ ಪೊಂಗಲ್ ಮತ್ತಿ ಸಿಹಿ ಪೊಂಗಲ್
ಬುಧವಾರ: ಬಿಸಿಬೇಳೆ ಬಾತ್ ಮತ್ತು ಕೇಸರಿ ಬಾತ್
ಗುರುವಾರ: ಅವಲಕ್ಕಿ ಉಪ್ಪಿಟ್ಟು ಮತ್ತು ಸಿಹಿ ಅವಲಕ್ಕಿ
ಶುಕ್ರವಾರ: ತರಕಾರಿ ಬಾತ್ ಹಾಗೂ ಬೆಲ್ಲದ ಅನ್ನ
ಶನಿವಾರ: ವಾಂಗೀಬಾತ್ ಹಾಗೂ ರವೆ ಸಜ್ಜಿಗೆ
ಭಾನುವಾರ: ಟೊಮೆಟೊ ಬಾತ್ ಹಾಗೂ ರವೆ ಸಜ್ಜಿಗೆ
ಭಕ್ತಾದಿಗಳು, ಪ್ರವಾಸಿಗರಿಗೆ ಮಾತ್ರ ಪ್ರಸಾದ ನೀಡಬೇಕು. ಸ್ಥಳೀಯರಿಗೆ ಮತ್ತು ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದು. ನಿತ್ಯ ಇಬ್ಬರು ಸೆಕ್ಯೂರಿಟಿ ಗಾರ್ಡ್ ಗಳನ್ನು ಪ್ರವೇಶ ದ್ವಾರದಲ್ಲಿ ನಿಲ್ಲಿಸಿ, ಭಕ್ತಾದಿಗಳು ಮತ್ತು ಪ್ರವಾಸಿಗರನ್ನು ಮಾತ್ರ ಒಳಗೆ ಬಿಡಬೇಕು. ಸಿಸಿ ಟಿವಿ ಕ್ಯಾಮೆರಾವನ್ನು ಅಡುಗೆ ಮನೆ, ಲಾಡು ತಯಾರಿಕೆ, ಡೈನಿಂಗ್ ಹಾಲ್, ಪ್ರವೇಶ ದ್ವಾರದ ಬಳಿ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ರಂದೀಪ್ ಆದೇಶಿಸಿದ್ದಾರೆ.












Click it and Unblock the Notifications