ಮೀನುಪ್ರಿಯರ ಜಿಹ್ವಾ ಚಾಪಲ್ಯ ತಣಿಸಲು ಮತ್ಸ್ಯ ಭವನ
ಮೈಸೂರು, ಏ. 29 : ಮೀನು ಸಾರು, ಮೀನಿನ ಉಪ್ಪಿನಕಾಯಿ, ಫಿಶ್ ಕಬಾಬ್ ಮುಂತಾದ ಫಿಶ್ ಖಾದ್ಯಗಳನ್ನು ಇಷ್ಟಪಡುವವರಿದ್ದರೆ ಸದ್ಯದಲ್ಲಿಯೇ ಸಂತಸದ ಸುದ್ದಿ ಸಿಗಲಿದೆ. ದೇಶದ ಎರಡನೇ 'ಮತ್ಸ್ಯ ಭವನ' ಮೈಸೂರಿನ ವಿಶ್ವೇಶ್ವರ ನಗರದಲ್ಲಿ ಉದ್ಘಾಟನೆಗೊಳ್ಳಲಿದೆ. ಮೊದಲ ಮತ್ಸ್ಯ ಭವನ ದೆಹಲಿಯಲ್ಲಿದೆ.
ಮೈಸೂರು ಮಾತ್ರವಲ್ಲ ಬೆಂಗಳೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಮತ್ತು ಅನೇಕ ನಗರಗಳಲ್ಲಿ ಸದ್ಯದಲ್ಲಿಯೇ ಮೀನು ಪ್ರಿಯರಿಗೆಂದೇ ವಿಶೇಷವಾದ 'ಮತ್ಸ್ಯ ಭವನ' ತಲೆಯೆತ್ತಿ ನಿಲ್ಲಲಿದೆ. ಉತ್ತರ ಕರ್ನಾಟಕದಲ್ಲಿಯೂ ಮೀನಿನ ಸಾರಿನ ವಾಸನೆ ಬಡಿಯಲಿದೆ. [ಮಂಗಳೂರಿನಲ್ಲಿ ತಿನ್ನಲು ಮೀನು ಸಿಕ್ತಿಲ್ಲ!]

ಕರ್ನಾಟಕ ರಾಜ್ಯ ಮೀನುಗಾರಿಕೆ ಸಹಕಾರಿ ಮಹಾಮಂಡಳಿ ಸುಮಾರು 23 ಕೋಟಿ ರು. ವೆಚ್ಚದಲ್ಲಿ ಮತ್ಸ್ಯ ಭವನಗಳನ್ನು ರಾಜ್ಯಾದ್ಯಂತ ನಿರ್ಮಿಸಲಿದ್ದು, ಮೀನಿನ ಖಾದ್ಯಗಳನ್ನು ಚಪ್ಪರಿಸುವವರಿಗೆ ಸರದೌತಣ ಬಡಿಸಲಿದೆ. ಮೀನು ಇಷ್ಟಪಡುವವರು ಜೊಲ್ಲು ಸುರಿಸಬಹುದು, ಇಷ್ಟಪಡದವರು ಮೂಗು ಮುಚ್ಚಿಕೊಳ್ಳಬಹುದು.
ಇಲ್ಲಿಯವರೆಗೆ, ಸಹಕಾರಿ ಮಂಡಳಿಯ ಮೀನಿನ ಕ್ಯಾಂಟೀನುಗಳಲ್ಲಿ ಫಿಶ್ ಕರಿ ಮತ್ತು ಡ್ರೈ ಪದಾರ್ಥಗಳು ಮಾತ್ರ ಸಿಗುತ್ತಿದ್ದವು. ಇನ್ನು ಮುಂದೆ... ಫಿಶ್ ಕಟ್ಲೆಟ್, ಫಿಶ್ ಬರ್ಗರ್, ಫಿಶ್ ಉಪ್ಪಿನಕಾಯಿ, ಫಿಶ್ ಕಬಾಬ್, ಫಿಶ್ ಮಂಚೂರಿ, ಫಿಶ್ ಫಿಂಗರ್ಸ್, ಫಿಶ್ ಪಕೋಡೆ, ಗ್ರಿಲ್ಡ್ ಫಿಶ್... ಏನು ಬೇಕು ಹೇಳಿ ಅದೆಲ್ಲ ಇಲ್ಲಿ ಲಭ್ಯವಿರಲಿದೆ.

ಮೇ ತಿಂಗಳಲ್ಲಿ ಮತ್ಸ್ಯ ಭವನದ ಉದ್ಘಾಟನೆ ಮಾಡಲಿರುವುದಾಗಿ ಮಹಾಮಂಡಳಿಯ ಅಧ್ಯಕ್ಷ ಎಸ್ ಮಾದೇಗೌಡ ಮಾಧ್ಯಮಗಳಿಗೆ ತಿಳಿಸಿದರು. ಜನದಟ್ಟಣೆಯಿರುವ ಪ್ರದೇಶಗಳಲ್ಲಿ ಜನರಿಗೆ ಅನುಕೂಲವಾಗಲೆಂದು ಮೊಬೈಲ್ ಕ್ಯಾಂಟೀನುಗಳನ್ನು ಕೂಡ ಆರಂಭಿಸುವ ಯೋಜನೆ ಇದೆ ಎಂದು ತಿಳಿಸಿದರು.
ರಾಜ್ಯದಲ್ಲಿ 560ಕ್ಕೂ ಹೆಚ್ಚು ಮೀನುಗಾರಿಕೆ ಸಹಕಾರಿ ಸಂಘಗಳಿದ್ದು, ಲಕ್ಷಾಂತರ ಮೀನುಗಾರರು ಮೀನುಗಾರಿಕೆ ವೃತ್ತಿಯನ್ನು ಅವಲಂಬಿಸಿಕೊಂಡಿದ್ದಾರೆ. ಈ ಮತ್ಸ್ಯ ಭವನದಿಂದ ಮೀನುಗಾರರಿಗೆ ಹೆಚ್ಚಿನ ಉತ್ಪಾದನೆ ಸಿಗಲಿದೆ ಎಂಬುದು ಮಾದೇಗೌಡರ ಅನಿಸಿಕೆ. [ಮುಕ್ಕಾ ಸೀಫುಡ್ ಕಂಪನಿಗೆ ಜಾಗತಿಕ ಮನ್ನಣೆ]












Click it and Unblock the Notifications