ಮಾತಾ ಅಮೃತಾನಂದಮಯಿ, ಕರಿವೃಷಭಾ ಶ್ರೀಗಳಿಗೆ ಮೈಸೂರು ವಿವಿ ಡಾಕ್ಟರೇಟ್
ಮೈಸೂರು, ಮಾರ್ಚ್ 15:ಮೈಸೂರು ವಿಶ್ವವಿದ್ಯಾನಿಲಯದ 99ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವು ಮಾರ್ಚ್ 17ರಂದು ವಿವಿಯ ಕ್ರಾಫರ್ಡ್ ಭವನದಲ್ಲಿ ನಡೆಯಲಿದೆ ಎಂದು ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಯಕ್ರಮವನ್ನು ಉನ್ನತ ಶಿಕ್ಷಣ ಸಚಿವ ಜಿ. ಟಿ ದೇವೇಗೌಡರು ಉದ್ಘಾಟಿಸಲಿದ್ದಾರೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಅಧ್ಯಕ್ಷರಾದ ಡಾ.ಅನಿಲ್ ಡಿ.ಸಹಬುಧೆ ಅವರಿಂದ ಪದವಿ ಪ್ರಧಾನ ನಡೆಯಲಿದೆ ಎಂದರು.
ಒಟ್ಟು 28,163 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಗುವುದು. ಅದರಲ್ಲಿ 18, 127ಮಹಿಳಾ ವಿದ್ಯಾರ್ಥಿಗಳು, 10, 036 ಪುರುಷ ವಿದ್ಯಾರ್ಥಿಗಳು ಭಾಗಿಯಾಗಲಿದ್ದಾರೆ. ಅಲ್ಲದೇ 384 ವಿದ್ಯಾರ್ಥಿಗಳಿಗೆ ವಿವಿಧ ವಿಷಯಗಳಿಗೆ ಪಿಹೆಚ್ ಡಿ ಪದವಿ ಪ್ರಧಾನ ಮಾಡಲಾಗುವುದು. ಒಟ್ಟಾರೆಯಾಗಿ ಒಟ್ಟು 206 ವಿದ್ಯಾರ್ಥಿಗಳಿಗೆ 368 ಪದಕಗಳು, 182 ಬಹುಮಾನಗಳ ವಿತರಣೆಯಾಗಲಿದೆ ಎಂದು ತಿಳಿಸಿದರು.

ಮೈಸೂರು ವಿಶ್ವ ವಿದ್ಯಾನಿಲಯ ಈ ಬಾರಿ ಅಮೃತ ವಿಶ್ವ ವಿದ್ಯಾಪೀಠಮ್ ಅಮೃತಪುರಿ ಅಧ್ಯಕ್ಷರಾದ ಮಾತಾ ಅಮೃತಾನಂದಮಯಿ ಮತ್ತು ಕಾಡಸಿದ್ಧೇಶ್ವರ ಮಠದ ಶ್ರೀಗಳಾದ ಕರಿವೃಷಭಾ ದೇಶಿಕೇಂದ್ರ ಶಿವಯೋಗೀಶ್ವರ ಮಹಾ ಸ್ವಾಮೀಜಿಗೆ ಗೌರವ ಡಾಕ್ಟರೇಟ್ ನೀಡುತ್ತಿದೆ.

ಚುನಾವಣಾ ನೀತಿ ಸಂಹಿತೆ ಇರುವುದರಿಂದ ಘಟಿಕೋತ್ಸವಕ್ಕೆ ಶಿಕ್ಷಣ ಸಚಿವರು ಹೇಗೆ ಪಾಲ್ಗೊಳ್ಳಲು ಸಾಧ್ಯ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪ್ರೊ.ಹೇಮಂತ್ ಕುಮಾರ್, ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವ ಜಿ. ಟಿ ದೇವೇಗೌಡ ಅಧ್ಯಕ್ಷೀಯ ಭಾಷಣ ಮಾಡಬೇಕಿತ್ತು. ಆದರೆ ನೀತಿ ಸಂಹಿತೆ ಇದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಭಾಗಿಯಾಗುವುದಕ್ಕೆ ಅಡ್ಡಿಯಾಗದಂತೆ ಚುನಾವಣಾ ಆಯೋಗದ ಅನುಮತಿಗೆ ಪತ್ರ ಬರೆಯಲಾಗಿದೆ. ಭಾಷಣವಿಲ್ಲದೆ ಕೇವಲ ಪದವಿ ಪ್ರಧಾನ ಮಾಡಲು ಅನುಮತಿ ನೀಡುವಂತೆ ಪತ್ರ ಬರೆಯಲಾಗಿದೆ ಎಂದರು.












Click it and Unblock the Notifications