ರಾಮನವಮಿ; ಮಾಸ್ಕ್ ವಿತರಿಸಿದ ರಾಮವೇಷಧಾರಿ!
ಮೈಸೂರು, ಏಪ್ರಿಲ್ 21; ಕೋವಿಡ್ ಮಹಾಮಾರಿ ಸೋಂಕು ತೀವ್ರಗತಿಯಲ್ಲಿ ವ್ಯಾಪಿಸದಿದ್ದರೆ ಜನ ಪಾನೀಯ, ಮಜ್ಜಿಗೆ ವಿತರಿಸಿ ರಾಮನವಮಿಯನ್ನು ಆಚರಣೆ ಮಾಡುತ್ತಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ರಾಮನವಮಿಗೆ ಕೊರೊನಾದ ವಿಘ್ನ ಕಾಡುತ್ತಿದೆ.
ರಾಮನವಮಿಯಂದು ಬಿಸಿಲಿನ ಬೇಗೆಗೆ ಬಸವಳಿದ ಮಂದಿಗೆ ಪಾನಕ, ಮಜ್ಜಿಗೆ, ಕೋಸುಂಬರಿ ನೀಡಿ ತಂಪಾಗಿಸುವ ಕೆಲಸವನ್ನು ಮಾಡಲಾಗುತ್ತಿತ್ತು. ಆದರೆ ಈ ಬಾರಿ ಅದರ ಬದಲಿಗೆ ಜನರಲ್ಲಿ ಕೋವಿಡ್ ಸೋಂಕಿನ ಕುರಿತಂತೆ ಜಾಗೃತಿ ಮೂಡಿಸುವ ಕೆಲಸವನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಮಾಡಲಾಗುತ್ತಿದೆ.
ಶ್ರೀ ರಾಮನವಮಿ ಅಂಗವಾಗಿ ಮೈಸೂರು ಯುವ ಬಳಗದ ವತಿಯಿಂದ ನಾರಾಯಣ ಶಾಸ್ತ್ರಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ವಿಭಿನ್ನವಾಗಿ ಕೊರೊನಾ ಜಾಗೃತಿ ಮೂಡಿಸಲಾಗುತ್ತಿದೆ. ಪೌರಾಣಿಕ ಕಲಾವಿದರಾದ ಸುತ್ತೂರಿನ ಹೊಸಕೋಟೆ ಶಿವಮಲ್ಲು ರಾಮನ ವೇಷ ಧರಿಸಿ ಮಾಸ್ಕ್ ಧರಿಸದವರಿಗೆ ಮಾಸ್ಕ್ ಬಗೆಗೆ ಅರಿವು ಮೂಡಿಸುವುದರೊಂದಿಗೆ ಮಾಸ್ಕ್ ವಿತರಣೆ ಮಾಡಿ ಗಮನಸೆಳೆದಿದ್ದಾರೆ.

ಈ ವೇಳೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ಹಾಗೂ ಮೈಸೂರು ಯುವ ಬಳಗದ ಅಧ್ಯಕ್ಷರಾದ ಎಂ. ಎನ್. ನವೀನ್ ಕುಮಾರ್ ಮಾತನಾಡಿ, "ಪಿತೃವಾಕ್ಯ ಪರಿಪಾಲನೆಗಾಗಿ 14 ವರ್ಷ ವನವಾಸ ಅನುಭವಿಸಿ, ಪ್ರಜೆಗಳನ್ನು ದೇವರಂತೆ ಕಂಡ ಶ್ರೀರಾಮ ನಮ್ಮೆಲ್ಲರ ಆದರ್ಶ ಪುರುಷನಾಗಿದ್ದಾನೆ. ಹೀಗಾಗಿ ಶ್ರೀ ರಾಮನ ವೇಷ ಧರಿಸಿ ಜಾಗೃತಿ ಮೂಡಿಸುತ್ತಿದ್ದೇವೆ. ಕೊರೊನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ನಿರ್ಮೂಲನೆಗೆ ಜನ ನಿರ್ಲಕ್ಷ್ಯ ಮಾಡದೇ ಮಾಸ್ಕ್ ಧರಿಸಬೇಕು, ಲಸಿಕೆ ಪಡೆಯಬೇಕು, ಸಾಮಾಜಿಕ ಅಂತರ ಕಾಪಾಡಬೇಕು" ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ನಿರ್ದೇಶಕಿ ರೇಣುಕಾ ರಾಜ್, ಪರಮೇಶ್ ಗೌಡ, ವಿಕ್ರಂ ಅಯ್ಯಂಗಾರ್, ಲೋಹಿತ್, ನವೀನ್, ಪ್ರಮೋದ್ ಗೌಡ, ಕಾಂತಿಲಾಲ್ ಜೈನ್, ಕಿರಣ್, ರವಿ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಜನರಲ್ಲಿ ಜಾಗೃತಿ ಮೂಡಿಸಿದರು.












Click it and Unblock the Notifications