ತಮ್ಮನ ಆತ್ಮಹತ್ಯೆ ವಿಷಯ ತಿಳಿದು ಅಣ್ಣನೂ ನೇಣಿಗೆ ಶರಣು!
ಮೈಸೂರು, ಫೆಬ್ರವರಿ 26: ಮೈಸೂರು ಜಿಲ್ಲೆಯ ಹೆಚ್. ಡಿ. ಕೋಟೆಯಲ್ಲಿ ತಮ್ಮ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದು ಅಣ್ಣನೂ ನೇಣು ಬಿಗಿದುಕೊಂಡು ಸಾವಿಗೆ ಶರಣಾದ ಘಟನೆ ನಡೆದಿದೆ.
ಇಲ್ಲಿನ ಎಲೆಗುಂಡಿ ಗ್ರಾಮದ ಸಹೋದರರಾದ ವೆಂಕಟೇಶ್ (28), ಹರೀಶ್ (25) ಪ್ರತ್ಯೇಕ ಸ್ಥಳಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬಳಿಕ ಗ್ರಾಮದಲ್ಲಿ ಮೌನ ಆವರಿಸಿದೆ.
ಟ್ಯಾಕ್ಟರ್ ಅನ್ನು ರಸ್ತೆಯಲ್ಲಿ ಸರಿಯಾಗಿ ಓಡಿಸಿಕೊಂಡು ಬರುವಂತೆ ಹರೀಶ್ಗೆ ತಂದೆ ಬುಧವಾರ ರಾತ್ರಿ ಬುದ್ಧಿವಾದ ಹೇಳಿದ್ದಾರೆ. ತಂದೆಯ ಮಾತುಗಳಿಂದ ಮನನೊಂದ ಹರೀಶ್ ಗುರುವಾರ ಬೆಳಗ್ಗೆ ಎಲೆಹುಂಡಿ ಸಮೀಪದ ಕೆರೆ ಬಳಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ವಿಚಾರವನ್ನು ಮೈಸೂರಿಗೆ ಹೋಗಿದ್ದ ವೆಂಕಟೇಶ್ಗೆ ಸ್ನೇಹಿತರು ತಿಳಿಸಿದ್ದಾರೆ. ಅಣ್ಣ-ತಮ್ಮಂದಿರ ನಡುವೆ ಹೊಂದಾಣಿಕೆ ಮತ್ತು ಪ್ರೀತಿ ಹೆಚ್ಚಾಗಿದ್ದರಿಂದ ವೆಂಕಟೇಶ್, ಮನೆಗೆ ಬರದೆ ತನ್ನ ಕಾರಿನಲ್ಲಿ ಸರಗೂರು ಕಡೆಗೆ ಹೋಗಿ ನಾಲೆಯ ಸಮೀಪ ಮರವೊಂದಕ್ಕೆ ನೇಣು ಹಾಕಿಕೊಂಡಿದ್ದಾರೆ.
ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777












Click it and Unblock the Notifications