ಟ್ರಿಣ್ ಟ್ರಿಣ್ ಪರಿಸರ ಸ್ನೇಹಿ ಸೈಕಲ್ ತುಳಿದ ಮೈಸೂರಿನ ಡಿಸಿ
ಮೈಸೂರು, ಜನವರಿ 12 : ಟ್ರಿಣ್ ಟ್ರಿಣ್ ಪರಿಸರ ಸ್ನೇಹಿ ಬೈಸಿಕಲ್ ಯೋಜನೆಯನ್ನು ಜಿಲ್ಲಾಧಿಕಾರಿ ಡಿ.ರಂದೀಪ್ ಹಾಗೂ ಪಾಲಿಕೆ ಆಯುಕ್ತ ಜೆ.ಜಗದೀಶ್ ಬೈಸಿಕಲ್ ತುಣಿದು ಪರಿಶೀಲಿಸಿದರು.
ಖಾಸಗಿ ಸಂಸ್ಥೆಯ ಸಹಭಾಗಿತ್ವದಲ್ಲಿ ನಡೆಸಲಾಗುತ್ತಿರುವ ಪರಿಸರ ಸ್ನೇಹಿ ಬೈಸಿಕಲ್ ಯೋಜನೆಯನ್ನು ಜಿಲ್ಲಾಧಿಕಾರಿ ರಂದೀಪ್, ಪಾಲಿಕೆ ಆಯುಕ್ತರಾದ ಜಗದೀಶ್ ಹಾಗೂ ಮೇಯರ್ ರವಿಕುಮಾರ್ ಅವರು ಮೈಸೂರಿನ ಆರ್ ಟಿಓ ವೃತ್ತದ ಬಳಿ ಇರುವ ಸೈಕಲ್ ಪಾಯಿಂಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇವೇಳೆ ಯೋಜನೆಯ ಮುಖ್ಯಸ್ಥ ಚಿರಂತ್ ಬಳಿ ಚರ್ಚಿಸಿ ಸ್ವತ: ಜಿಲ್ಲಾಧಿಕಾರಿ,ಪಾಲಿಕೆ ಆಯುಕ್ತರು ಸೇರಿದಂತೆ ಮೇಯರ್ ರವಿಕುಮಾರ್ ಅವರು ಸೈಕಲ್ ಹೊಡೆಯುವ ಮೂಲಕ ಪರಿಶೀಲನೆ ನಡೆಸಿದರು.[ಮಂಗಳೂರು : ಸೆ.22ರಂದು ಕಾರು ಬಿಡಿ, ಸೈಕಲ್ ತುಳಿಯಿರಿ]
ನೂತನ ಯೋಜನೆಯಲ್ಲಿ 450 ಸೈಕಲ್ ಗಳಿದ್ದು, 20ಕ್ಕೂ ಹೆಚ್ಚು ಸೈಕಲ್ ಕೇಂದ್ರಗಳನ್ನು ತೆರೆಯಲಾಗಿದೆ. ಸೈಕಲ್ ಕೊಳ್ಳಲು ಮಾನದಂಡಗಳಿದ್ದು, ಅದು ತುಂಬ ಸುಲಭವಾಗಿದೆ. ವರ್ಷಕ್ಕೆ ಸದಸ್ಯರು ರು 1000 ಪಾವತಿಸಿದರೆ ಅವರಿಗೆ ಆಕರ್ಷಕ ರಿಯಾಯಿತಿಯೊಂದಿಗೆ ನೀಡಲಾಗುತ್ತಿದೆ. ಸೈಕಲ್ ಪಾಯಿಂಟ್ ಗಳಲ್ಲೇ ಸೈಕಲ್ ಗಳಿದ್ದು ಕಳ್ಳತನವಾಗುವ ಭಯವೂ ಇಲ್ಲ. ಎಲ್ಲವೂ ತಂತ್ರಜ್ಞಾನದ ಮೂಲಕ ಅಳವಡಿಸಿದ್ದು, ಕೇಂದ್ರ ಸುತ್ತ ಸಿಸಿಟಿವಿ ಅಳವಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಇದೊಂದು ವಿನೂತನ ಯೋಜನೆ. ಮೊದಲಿಗೆ ಎಲ್ಲರಿಗೂ ರಿಯಾಯಿತಿ ದರದಲ್ಲಿ ಈ ಯೋಜನೆ ನೀಡುತ್ತಿದ್ದೇವೆ. ಚಾಮುಂಡಿ ಬೆಟ್ಟಕ್ಕೆ ಗೇರ್ ಸೈಕಲ್ ನೀಡಿದ್ದು, ನಗರಕ್ಕೆ ಮಾತ್ರ ವಿತೌಟ್ ಗೇರ್ ಸೈಕಲ್ ಇದೆ. ಇದೇ ತಿಂಗಳ ಕೊನೆಯಲ್ಲಿ ಈ ಯೋಜನೆ ಜನಸಾಮಾನ್ಯರನ್ನು ತಲುಪಿಸಲಿದ್ದೇವೆ. ಸೈಕಲ್ ಏರಿ ತಮ್ಮ ಬಾಲ್ಯದ ನೆನಪು ಹಾಗೂ ಆರೋಗ್ಯ ವೃದ್ಧಿಸಿಕೊಳ್ಳುವ ಅವಕಾಶ ಜನರಿಗೆ ಸಿಗಲಿದೆ. ಆಧಾರ ಕಾರ್ಡ್ ಲಿಂಕ್ ಮಾಡುವ ವ್ಯವಸ್ಥೆ ಇದ್ದು, ಮನಿ ಕಾರ್ಡ್ ರೀತಿಯಲ್ಲಿ ಸೈಕಲ್ ಪಡೆಯುವುದಕ್ಕೂ ಕಾರ್ಡ್ ನೀಡಲಾಗುತ್ತದೆ ಸಂಸ್ಥೆಯ ಚಿರಂತ್ ತಿಳಿಸಿದರು.