ಜೆಡಿಎಸ್ಸಿನ ಕೆಲ ಅಭ್ಯರ್ಥಿಗಳು ಅನ್ಯ ಪಕ್ಷಗಳತ್ತ?
ಮೈಸೂರು, ಏ.7: ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಹಿಡಿತದಲ್ಲಿರುವ ಜೆಡಿಎಸ್ ಪಕ್ಷದಲ್ಲಿ ಚುನಾವಣೆಗಳ ಸಂದರ್ಭಗಳಲ್ಲಿ ಕೇಳಿಬರುವ ಮಾತುಗಳೇ ಈಗಲೂ ಕೇಳಿಬಂದಿದೆ. ಅಂದರೆ 'ಗೌಡರು ಬಿ ಫಾರಂ ಕೊಡ್ತಾರೆ ಅಷ್ಟೇ, ಆದ್ರೆ ಚುನಾವಣಾ ಪ್ರಚಾರ ಖರ್ಚಿಗೆ ಅಭ್ಯರ್ಥಿಗಳಿಗೆ ದುಡ್ಡು ಕೊಡುವುದಿಲ್ಲ' ಎಂಬುದು ಅಭ್ಯರ್ಥಿಗಳಾದವರ ದುಃಖದುಮ್ಮಾನ.
ಈ ಬಾರಿಯೂ ಅಷ್ಟೇ ಸುಮಾರು ಆರೇಳು ಕ್ಷೇತ್ರಗಳ ಅಭ್ಯರ್ಥಿಗಳು ಲೋಕಸಭಾ ಚುನಾವಣಾ ಕಣದಿಂದ ಹಿಂದೆ ಸರಿಯುವ ಬೆದರಿಕೆಯೊಡ್ಡಿದ್ದಾರೆ. ಚುನಾವಣೆಗಾಗಿ ಖರ್ಚು ಮಾಡಲು ನಮ್ಮಲ್ಲಿ ದುಡ್ಡೇ ಇಲ್ಲ. ಇದ್ದದ್ದೆಲ್ಲಾ ಖರ್ಚು ಮಾಡಿ ಕುಳಿತಿದ್ದೇವೆ. ಚುನಾವಣೆಗೆ ಇನ್ನೂ ಒಂದು ವಾರ ಹತ್ತು ದಿನ ಇದೆ. ದುಡ್ಡಿಲ್ದೆ ಕಾರ್ಯಕರ್ತರನ್ನು ಸಂಭಾಳಿಸುವುದು ಕಷ್ಟವಾಗ್ತಿದೆ ಎಂದು ಕೆಲ ಅಭ್ಯರ್ಥಿಗಳು ಅಸಮಾಧಾನದ ಮೊಟ್ಟೆಯಾಗಿದ್ದಾರೆ. ಇದು ಜೆಡಿಎಸ್ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.
ಗೆಲ್ಲುವ ಕ್ಷೇತ್ರಗಳ ಖಾತ್ರಿಯಿರುವ ನಾಲ್ಕೈದು ಕ್ಷೇತ್ರಗಳ ಅಭ್ಯರ್ಥಿಗಳಿಗೆ ಮಾತ್ರ ಹಣಕಾಸು ನೆರವು ನೀಡಲು ಪಕ್ಷ ಮುಂದಾಗಿದ್ದು, ಉಳಿದ ಕ್ಷೇತ್ರಗಳ ಅಭ್ಯರ್ಥಿಗಳಿಗೆ ಪಾರ್ಟಿ ಫಂಡಿಂಗ್ ಮರೀಚಿಕೆಯಾಗಿದೆ. ಹಾಗಾಗಿ ಮತದಾನದ ವೇಳೆಗೆ ಜೆಡಿಎಸ್ಸಿನ ಎಲ್ಲ 25 ಕ್ಷೇತ್ರಗಳ ಅಭ್ಯರ್ಥಿಗಳೂ ಕಣದಲ್ಲಿ ಉಳಿಯುವುದು ಅನುಮಾನವಾಗಿದೆ.

ಉತ್ತರ ಕರ್ನಾಟಕ ಭಾಗದ 6-7 ಕ್ಷೇತ್ರಗಳ ಅಭ್ಯರ್ಥಿಗಳು ಕಣದಿಂದ ಸ್ವಯಂ ನಿವೃತ್ತಿ ಪಡೆದು ಅನ್ಯ ಪಕ್ಷಗಳ ಅಭ್ಯರ್ಥಿಗಳಿಗೆ ಬೆಂಬಲ ಸೂಚಿಸಿವ ಸಾಧ್ಯತೆಯಿದೆ. ಹಾಗಾಗಿ ಈಗ ಅಭ್ಯರ್ಥಿಗಳನ್ನು ಕಣದಲ್ಲಿ ಉಳಿಯುವಂತೆ ಮಾಡಲು ಜೆಡಿಎಸ್ ವರಿಷ್ಠರು ಹರಸಾಹಸ ಪಡುತ್ತಿದ್ದಾರೆ.
ಪಕ್ಷದ ವತಿಯಿಂದ ಕನಿಷ್ಠ 5 ಕೋಟಿ ರೂ. ಕೊಡಬೇಕು. ಅದರ ಜತೆಗೆ ಸಾಲದ ರೂಪದಲ್ಲಿ 3 ಕೋಟಿ ರೂ ಕೊಟ್ಟರೆ ಮಾತ್ರ ಕಾಂಗ್ರೆಸ್- ಬಿಜೆಪಿಯಂತಹ ಬಲಿಷ್ಠ ಎದುರಾಳಿಗಳನ್ನು ಎದುರಿಸಲು ಯತ್ನಿಸಬಹುದು. ಕಾಂಗ್ರೆಸ್- ಬಿಜೆಪಿ ಅಭ್ಯರ್ಥಿಗಳು ತಲಾ 20 ರಿಂದ 25 ಕೋಟಿ ರೂ ಖರ್ಚು ಮಾಡುತ್ತಿದ್ದಾರೆ.
ನಾವು ಈಗಾಗಲೇ ನಾಲ್ಕೈದು ಕೋಟಿ ಖರ್ಚು ಮಾಡಿ ಬರಿಗೈದಾಸರಾಗಿದ್ದೇವೆ. ಇನ್ನೂ ಕನಿಷ್ಠ 10 ಕೋಟಿ ರೂ. ಆದರೂ ಖರ್ಚು ಮಾಡಿದರೆ ಪಕ್ಷದ ಘಟನೆ/ ಗೌರವ ಉಳಿಯುತ್ತಿದೆ. ಇಲ್ಲಾಂದ್ರೆ ನಮಗೆ ಠೇವಣಿಯೂ ಬರುವುದಿಲ್ಲ' ಎಂದು ಈ ಅಭ್ಯರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]
ಇದರಿಂದ ಇಪ್ಪತ್ತೆಂಟೂ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳಿಲ್ಲದೆ ಪರದಾಡುತ್ತಿರುವ ಜೆಡಿಎಸ್ಸಿಗೆ ಕಣದಲ್ಲಿಳಿದಿರುವ ಅಭ್ಯರ್ಥಿಗಳನ್ನು ಉಳಿಸಿಕೊಳ್ಳುವುದೇ ದುಸ್ತರವಾಗಿದೆ; ವರಿಷ್ಠರಿಗೆ ನುಂಗಲಾರದ ತುತ್ತಾಗಿದೆ. ಸಮರ್ಥ ಅಭ್ಯರ್ಥಿಗಳಿಲ್ಲದ ಕಡೆ ಖರ್ಚಿಗೆ ಹಣ ಕೊಡುವುದಾಗಿ ಆಮಿಷ ತೋರಿಸಿ, ಟಿಕೆಟ್ ಕೊಡಲಾಗಿತ್ತು. ಆದರೆ ಪಕ್ಷದ ವತಿಯಿಂದ ಹಣ ಖರ್ಚು ಮಾಡಲು ಜೆಡಿಎಸ್ ವರಿಷ್ಠರು ಹಿಂದೇಟು ಹಾಕುತ್ತಿದ್ದಾರೆ.
ಗೆಲ್ಲುವ ಕ್ಷೇತ್ರಗಳ ಖಾತ್ರಿಯಿರುವ ನಾಲ್ಕೈದು ಕ್ಷೇತ್ರಗಳ ಅಭ್ಯರ್ಥಿಗಳಿಗೆ ಮಾತ್ರ ಹಣಕಾಸು ನೆರವು ನೀಡಲು ಪಕ್ಷ ಮುಂದಾಗಿದ್ದು, ಉಳಿದ ಕ್ಷೇತ್ರಗಳ ಅಭ್ಯರ್ಥಿಗಳಿಗೆ ಪಾರ್ಟಿ ಫಂಡಿಂಗ್ ಮರೀಚಿಕೆಯಾಗಿದೆ. ಹಾಗಾಗಿ ಮತದಾನದ ವೇಳೆಗೆ ಜೆಡಿಎಸ್ಸಿನ ಎಲ್ಲ 25 ಕ್ಷೇತ್ರಗಳ ಅಭ್ಯರ್ಥಿಗಳೂ ಕಣದಲ್ಲಿ ಉಳಿಯುವುದು ಅನುಮಾನವಾಗಿದೆ.












Click it and Unblock the Notifications