Get Updates
Get notified of breaking news, exclusive insights, and must-see stories!

ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್‌ಗಾಗಿ ಕಾದು ಕುಳಿತ ‘ಕೈ’ ನಾಯಕರು!

ಮೈಸೂರು, ಸೆಪ್ಟೆಂಬರ್‌ 08: ಮುಂದಿನ 2024ರ ಲೋಕಸಭಾ ಚುನಾವಣೆಯಲ್ಲಿ ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾ.. ಮುಂದು ತಾ.. ಮುಂದು ಎಂಬಂತೆ ಕಾಂಗ್ರೆಸ್ ನಾಯಕರು ತುದಿಗಾಲಿನಲ್ಲಿ ನಿಂತಿರುವುದು ಎದ್ದು ಕಾಣಿಸುತ್ತಿದೆ. ಜತೆಗೆ ಹಲವು ನಾಯಕರು ಇದನ್ನು ವಿವಿಧ ರೀತಿಯಲ್ಲಿ ತೋರ್ಪಡಿಸುವ ಮೂಲಕ ಪಕ್ಷದ ಹಿರಿಯ ನಾಯಕರ ಗಮನಸೆಳೆಯುವ ಪ್ರಯತ್ನ ಮಾಡುತ್ತಿರುವುದು ಗುಟ್ಟಾಗಿ ಉಳಿದಿಲ್ಲ.

ಕಳೆದ ಎರಡು ಅವಧಿಯಲ್ಲಿ ನಡೆದ ಚುನಾವಣೆಯನ್ನು ಗಮನಿಸಿದರೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಬಿಜೆಪಿ ಹೊರತುಪಡಿಸಿ ಬೇರೆ ಪಕ್ಷಗಳಿಗೆ ಸುಲಭ ಎನಿಸಿರಲಿಲ್ಲ. ಹೀಗಾಗಿ ಪೈಪೋಟಿ ನಡೆಸಿ ಟಿಕೆಟ್ ಪಡೆಯುವ ಪರಿಸ್ಥಿತಿಯಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಇರಲಿಲ್ಲ. ಕಳೆದ 2014 ಮತ್ತು 2019ರ ಲೋಕಸಭಾ ಚುನಾವಣೆಯನ್ನು ಗಮನಿಸಿದರೆ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜೆಡಿಎಸ್ ಮತ್ತು ಕಾಂಗ್ರೆಸ್ ನಿಂದ ಸಾಧ್ಯವಾಗಿರಲಿಲ್ಲ. ಹೀಗಾಗಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಗೆಲುವು ಸಾಧಿಸುತ್ತಾ ಬಂದಿದ್ದಾರೆ.

Lok Sabha Election 2024: Congress Leaders Waiting For Lok Sabha Tickets

ಈ ಹಿಂದೆ ಮೈಸೂರು ಕೊಡಗು ಸಂಸದರಾಗಿ ಕಾಂಗ್ರೆಸ್‍ ನ ಹೆಚ್.ವಿಶ್ವನಾಥ್ ಗೆಲುವು ಸಾಧಿಸಿದ್ದರು. ಅವರು ಐದು ವರ್ಷಗಳ ಕಾಲ ಸಂಸದರಾಗಿ ಕಾರ್ಯ ನಿರ್ವಹಿಸುವುದರೊಂದಿಗೆ ಮೈಸೂರು ಮತ್ತು ಕೊಡಗು ಮತದಾರರ ಒಲವು ಗಳಿಸಿದ್ದರು. ಆದರೆ 2014ರ ವೇಳೆಗೆ ಮೋದಿ ಮೇನಿಯಾ ಕರ್ನಾಟಕದಲ್ಲಿ ಬಿಜೆಪಿಯತ್ತ ಮತದಾರರು ಹೊರಳುವಂತೆ ಮಾಡಿತ್ತು.

ಆ ವೇಳೆಗೆ ಕೊಡಗಿನಲ್ಲಿಯೂ ಬಿಜೆಪಿ ಗಟ್ಟಿಯಾಗಿತ್ತು. ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳು ಬಿಜೆಪಿ ಹಿಡಿತದಲ್ಲಿದ್ದವು. ಜೆಡಿಎಸ್ ನಾಯಕರ ಕೃಪೆಯೂ ಅವತ್ತಿನ ಬಿಜೆಪಿ ಅಭ್ಯರ್ಥಿಯಾಗಿದ್ದ ಪ್ರತಾಪ್ ಸಿಂಹ ಅವರ ಮೇಲಿತ್ತು. ಹೀಗಾಗಿ ಪತ್ರಕರ್ತರಾಗಿದ್ದ ಪ್ರತಾಪ್ ಸಿಂಹ ಮೊದಲ ಬಾರಿಗೆ ಚುನಾವಣೆಗೆ ನಿಂತು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದ್ದರು.

ಎಚ್.ವಿಶ್ವನಾಥ್ ಅವರನ್ನು ಮಣಿಸಿದ ಪ್ರತಾಪ್ ಸಿಂಹ

ಅವತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿತ್ತು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ಆದರೆ ಅವರ ತವರು ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲು ಕಂಡಿತ್ತು. ಅರ್ಥಾತ್ ಹಾಲಿ ಸಂಸದರಾಗಿದ್ದ ಎಚ್.ವಿಶ್ವನಾಥ್ ಅವರಿಗೆ ಮತ್ತೊಮ್ಮೆ ಸಂಸತ್ ಪ್ರವೇಶ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಎಚ್.ವಿಶ್ವನಾಥ್ ಅವರ ಆ ಸೋಲಿಗೆ ಅವರು ದೇವೇಗೌಡರ ಕುಟುಂಬದ ವಿರುದ್ಧ ಸದಾ ಆರೋಪ ಮಾಡುತ್ತಿದ್ದದ್ದು ಕೂಡ ಕಾರಣವಾಗಿತ್ತು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

Lok Sabha Election 2024: Congress Leaders Waiting For Lok Sabha Tickets

ಯಾವಾಗ ಲೋಕಸಭಾ ಚುನಾವಣೆಯಲ್ಲಿ ಎಚ್.ವಿಶ್ವನಾಥ್ ಅವರು ಸೋಲು ಕಂಡರೋ ಅವರನ್ನು ಕಾಂಗ್ರೆಸ್ ಪಕ್ಷವೂ ದೂರವಿಟ್ಟಿತು. ಸ್ವತಃ ಸಿದ್ದರಾಮಯ್ಯರವರೇ ಮಣೆ ಹಾಕಲಿಲ್ಲ. ಯಾವಾಗ ತನ್ನನ್ನು ಕಾಂಗ್ರೆಸ್ ನಲ್ಲಿ ಮೂಲೆ ಗುಂಪು ಮಾಡುತ್ತಿದ್ದಾರೆ ಎಂಬುದು ಗೊತ್ತಾಯಿತೋ ಕಾಂಗ್ರೆಸ್ ವಿರುದ್ಧವೇ ಧ್ವನಿ ಎತ್ತಿದ ವಿಶ್ವನಾಥ್ ಪಕ್ಷದಿಂದ ಅಂತರ ಕಾಪಾಡಿಕೊಳ್ಳಲಾರಂಭಿಸಿದರು. 2018ರ ವಿಧಾನಸಭಾ ಚುನಾವಣೆ ಹೊತ್ತಿಗೆ ಮತ್ತೆ ಜೆಡಿಎಸ್ ಗೆ ಮುಖ ಮಾಡಿ ರಾಜ್ಯಾಧ್ಯಕ್ಷರಾಗುವುದರೊಂದಿಗೆ ಹುಣಸೂರು ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ಶಾಸಕರಾದರು.

ಚುನಾವಣೆಯ ಟಿಕೆಟ್ ಆಕಾಂಕ್ಷಿ ಹಳ್ಳಿಹಕ್ಕಿ

ಅವತ್ತಿನ ಸಮ್ಮಿಶ್ರ ಸರ್ಕಾರದಲ್ಲಿ ಎಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಸಿಗಬಹುದೆಂದು ಕಾದು ಕುಳಿತಿದ್ದರಾದರೂ ಅಂತಹ ಯಾವುದೇ ಸೂಚನೆ ಕಂಡು ಬಾರದೆ ಇದ್ದಾಗ ಪಕ್ಷಾಂತರ ಮಾಡಿದ ಅವರು ಮೈತ್ರಿ ಸರ್ಕಾರ ಕೆಡವಿ ಬಿಜೆಪಿ ಸರ್ಕಾರದ ಅಸ್ತಿತ್ವಕ್ಕೂ ಕಾರಣರಾದರು. ಆದರೆ ರಾಜೀನಾಮೆ ನೀಡಿ ಮತ್ತೊಮ್ಮೆ ಸ್ಪರ್ಧಿಸಿದ ಅವರಿಗೆ ಹುಣಸೂರಿನ ಜನ ಮತ ನೀಡದೆ ಸೋಲಿಸಿದರು. ಆದರೂ ಬಿಜೆಪಿ ಅವರನ್ನು ವಿಧಾನಪರಿಷತ್ ಸದಸ್ಯನನ್ನಾಗಿ ಘೋಷಣೆ ಮಾಡಿತು. ಆದರೆ 2023ರ ವಿಧಾನ ಸಭಾ ಚುನಾವಣೆ ವೇಳೆಗೆ ಬಿಜೆಪಿಯಿಂದ ದೂರವಾದ ಅವರು ಕಾಂಗ್ರೆಸ್ ಗೆ ಹತ್ತಿರವಾದರು.

ರಾಜ್ಯ ರಾಜಕಾರಣವನ್ನು ಬದಿಗೆ ಸರಿಸಿ ಕೇಂದ್ರದತ್ತ ಮುಖ ಮಾಡಿರುವ ಅವರು ಈಗ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಜತೆಗೆ ಸದಾ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿದ್ದಾರೆ. ಬಿಜೆಪಿ ನಡೆಯನ್ನು ವಿರೋಧಿಸುತ್ತಾ ಬರುತ್ತಿರುವ ಅವರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ತನಗೆ ಕಾಂಗ್ರೆಸ್ ನಿಂದ ಟಿಕೆಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಕಾಂಗ್ರೆಸ್‌ನಲ್ಲಿ ಹೆಚ್ಚಿದ ಟಿಕೆಟ್ ಆಕಾಂಕ್ಷಿಗಳು

ಆದರೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ನಿಂದ ಸ್ಪರ್ಧಿಸಲು ಬಯಸುವ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದು ಕಂಡು ಬರುತ್ತಿದೆ. ತಮ್ಮ ಬಯಕೆಯನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೊರಹಾಕುತ್ತಿದ್ದಾರೆ. ಬಹಳಷ್ಟು ಮಂದಿ ಕಾರ್ಯಕ್ರಮಗಳ ಫ್ಲೆಕ್ಸ್ ಗಳಲ್ಲಿ ನಾಯಕರಿಗೆ ಶುಭಾಶಯ, ಅಭಿನಂದರೆ ಕೋರುತ್ತಾ ತಮ್ಮ ಹೆಸರ ಹಿಂದೆ ಮೈಸೂರು ಕೊಡಗು ಲೋಕಸಭಾ ಟಿಕೆಟ್ ಆಕಾಂಕ್ಷಿ ಎಂಬುದಾಗಿ ಪ್ರಕಟಿಸುತ್ತಿರುವುದು ಕಂಡು ಬರುತ್ತಿದೆ. ಇದು ತಾವು ಟಿಕೆಟ್ ಆಕಾಂಕ್ಷಿಗಳು ಎಂಬುದನ್ನು ಹಿರಿಯ ನಾಯಕರ ಗಮನಕ್ಕೆ ತರುವ ಪ್ರಯತ್ನವಾಗಿದೆ.

ಹಾಗೆನೋಡಿದರೆ ಮೇಲ್ನೋಟಕ್ಕೆ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಂಸದ ಹಾಲಿ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್, ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್, ಮುಖಂಡರಾದ ಡಾ.ಶುಶ್ರುತ್ ಗೌಡ, ಜೆ.ಜೆ. ಆನಂದ್, ಗುರುಪಾದಸ್ವಾಮಿ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತಿದೆ. ಚುನಾವಣೆಗೆ ದಿನಗಳು ಹತ್ತಿರವಾದಂತೆಲ್ಲ ಇನ್ನಷ್ಟು ನಾಯಕರ ಹೆಸರು ಮುನ್ನಲೆಗೆ ಬಂದರೂ ಅಚ್ಚರಿಯಿಲ್ಲ.

ಕಾದು ನೋಡುವ ತಂತ್ರ

ಇನ್ನು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ನಾಯಕರು ಹಾತೊರೆಯುವುದರ ಹಿಂದೆಯೂ ಕಾರಣವಿದೆ. ಕೊಡಗು ಮತ್ತು ಮೈಸೂರಿನಲ್ಲಿ ಕಾಂಗ್ರೆಸ್ ಪ್ರಾಬಲ್ಯ ಸಾಧಿಸಿರುವುದರಿಂದ ಮತದಾರರು ಕಾಂಗ್ರೆಸ್ ನತ್ತ ಒಲವು ತೋರುತ್ತಾರೆ. ಹೀಗಾಗಿ ಗೆಲುವು ಸುಲಭವಾಗಿರುತ್ತದೆ ಎಂಬ ಲೆಕ್ಕಚಾರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವುದು ಗೆಲುವಿಗೆ ಪೂರಕವಾಗಬಹುದು ಎಂಬ ನಂಬಿಕೆಯೂ ಕೈ ನಾಯಕರಲ್ಲಿ ಮನೆಮಾಡಿದೆ. ಹೀಗಾಗಿಯೇ ಸಂಸದ ಸ್ಥಾನಕ್ಕೆ ಸ್ಪರ್ಧಿಸುವ ಆಕಾಂಕ್ಷಿಗಳು ಹುಟ್ಟಿಕೊಳ್ಳುತ್ತಲೇ ಇದ್ದಾರೆ. ಮುಂದೇನು ಎನ್ನುವುದನ್ನು ಕಾದು ನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+