ಕೇಂದ್ರದ ನಡೆಗೆ ಅಸಮಾಧಾನ ಹೊರಹಾಕಿದ ಲಿಂಗಾಯತ ಮಹಾಸಭಾ
ಮೈಸೂರು, ಡಿಸೆಂಬರ್ 13: ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡುವಂತೆ ರಾಜ್ಯ ಸರ್ಕಾರ ಮಾಡಿದ್ದ ಶಿಫಾರಸ್ಸನ್ನು ತಿರಸ್ಕರಿಸಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಮೈಸೂರು ಜಾಗತಿಕ ಲಿಂಗಾಯತ ಮಹಾಸಭಾ ಅಸಮಾಧಾನ ವ್ಯಕ್ತಪಡಿಸಿದೆ.
ರಾಜ್ಯ ಸರ್ಕಾರದಿಂದ ನೇಮಿಸಲ್ಪಟ್ಟ ಕಾನೂನು ತಜ್ಞರ ಸಮಿತಿಯ ಕಾನೂನಾತ್ಮಕ ನಿಲುವನ್ನು ಪರಿಗಣಿಸದೆ ಅದನ್ನು ವಿಮರ್ಶಿಸಲು ಸಮಿತಿ ನೇಮಿಸದೆ ಕಾರ್ಯದರ್ಶಿ ಮಟ್ಟದಲ್ಲಿ ನಿರ್ಣಯ ತೆಗೆದುಕೊಂಡಿರುವುದು ರಾಜಕೀಯ ಅಷ್ಟೇ.
ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಗೆ ಶಿಫಾರಸು ತಿರಸ್ಕಾರ ಸತ್ಯಾಂಶಗಳನ್ನು ಹೊಂದಿಲ್ಲ ಎಂದು ಜಾಗತಿಕ ಲಿಂಗಾಯತ ಮಹಾಸಭಾದ ರಾಜ್ಯ ಕಾರ್ಯದರ್ಶಿ ಶರಣ ಮಹಾದೇವಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಮತ್ತು ಅಲ್ಪಸಂಖ್ಯಾತ ಸ್ಥಾನಮಾನ ಬೇಡಿಕೆಗಳು ನ್ಯಾಯಸಮ್ಮತ ಮತ್ತು ಕಾನೂನು ಸಮ್ಮತವಾಗಿವೆ. ಸಂಯಮ, ಸಮಾಧಾನ, ಸಂಘಟನಾ ಚತುರತೆ ಮತ್ತು ಎಲ್ಲರ ಭಾವನೆಗಳನ್ನು ಗೌರವಿಸಿ, ಎಲ್ಲರನ್ನು ಕರೆದುಕೊಂಡು ಹೋಗುವ ಹೋರಾಟವಾಗಬೇಕು.
ಭಾರತ ದೇಶಬುದ್ಧ, ಬಸವಣ್ಣನವರಂತಹ ಶ್ರೇಷ್ಠ ಮಾನವತಾವಾದಿಗಳನ್ನು ಕಂಡಿದೆ. ಬುದ್ಧ, ಮಹಾವೀರ, ಗುರುನಾನಕರು ಸ್ಥಾಪಿಸಿದ ಬೌದ್ಧ, ಜೈನ, ಸಿಖ್ ಧರ್ಮೀಯರಿಗೆ ಸಿಕ್ಕ ಧಾರ್ಮಿಕ ಗೌರವ ಲಿಂಗಾಯತರಿಗೆ ಸಿಗಬೇಕು ಎಂದು ಶರಣ ಮಹಾದೇವಪ್ಪ ಒತ್ತಾಯಿಸಿದರು.












Click it and Unblock the Notifications