ಇನ್ಮುಂದೆ ಮೊಬೈಲ್ ಟವರ್ ನಿರ್ಮಾಣಕ್ಕೆ ಲೈಸನ್ಸ್ ಕಡ್ಡಾಯ: ಸಚಿವ ಖಾದರ್
ಮೈಸೂರು, ನವೆಂಬರ್ 29: ಎಲ್ಲೆಂದರಲ್ಲಿ ತಲೆ ಎತ್ತುವ ಮೊಬೈಲ್ ಟವರ್ ಹಾವಳಿಯನ್ನು ತಪ್ಪಿಸುವ ಸಲುವಾಗಿ ಇನ್ಮುಂದೆ ಟವರ್ ನಿರ್ಮಾಣ ಮಾಡುವವರು ಕಡ್ಡಾಯವಾಗಿ ನೋಂದಣಿ ಮಾಡಿಸಬೇಕೆಂದು ನಗರಾಭಿವೃದ್ದಿ ಸಚಿವ ಯು. ಟಿ ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಟ್ಟಡಗಳ ಮೇಲೆ ಟವರ್ ನಿರ್ಮಾಣ ಮಾಡುವಾಗ ಕಟ್ಟಡಗಳ ಸಾಮರ್ಥ್ಯ ನೋಡಿಯೇ ನಿರ್ಮಾಣ ಮಾಡಬೇಕು ಹಾಗೂ ವರ್ಷ ವರ್ಷ ಕಟ್ಟಡದ ಮಾಲೀಕರೇ ಅದರ ತೆರಿಗೆ ಕಟ್ಟಬೇಕು. ಶಾಲಾ ಕಾಲೇಜುಗಳ ಆವರಣದಲ್ಲಿ 50 ಮೀಟರ್ ದೂರದಲ್ಲಿಯೇ ಟವರ್ ನಿರ್ಮಾಣ ಮಾಡಬೇಕು.
ಈ ಎಲ್ಲ ಕಾನೂನನ್ನು ಶೀಘ್ರವಾಗಿ ಜಾರಿಗೊಳಿಸುವಂತೆ ಆದೇಶ ಹೊರಡಿಸುತ್ತೇವೆ. ಈ ಬಗ್ಗೆ ಸಭೆ ನಡೆಸಿ ತೀರ್ಮಾನ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ನಂತರ ಮೈಸೂರಿನಲ್ಲಿ ಮುಡಾ ಅದಾಲತ್ ಬಗ್ಗೆ ಮಾತನಾಡಿದ ಖಾದರ್, ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಗಳನ್ನು ಇಂದು ಅದಾಲತ್ ಮಾಡುವ ಮೂಲಕ ಪರಿಹಾರ ನೀಡಿದ್ದೇವೆ. ಮೈಸೂರು ನಗರ ನೂರು ವರ್ಷಗಳ ಹಿಂದೆಯೇ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯ ಯೋಜನೆಯಿಂದ ಕೂಡಿದೆ. ಇಂದು ನಾವು ಮಾಡಬೇಕಿದ್ದ ಕೆಲಸವನ್ನು ಅಂದೇ ಅವರು ಮಾಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಇದೇ ವೇಳೆ ಖಾದರ್ ಅವರು ಮೈಸೂರಿನ ಪ್ರತಿಷ್ಠಿತ ಲ್ಯಾನ್ಸ್ ಡೌನ್ ಬಿಲ್ಡಿಂಗ್ ಕಟ್ಟಡಕ್ಕೆ ಭೇಟಿ ನೀಡಿ ವೀಕ್ಷಿಸಿದರು. ಬಳಿಕ ಮಾತನಾಡಿ ನಾನು ಪಾರಂಪರಿಕ ಕಟ್ಟಡ ಲ್ಯಾನ್ಸ್ ಡೌನ್ ವೀಕ್ಷಣೆ ಮಾಡಿದ್ದೇನೆ. ನನ್ನ ಮಟ್ಟಿಗೆ ಈ ಕಟ್ಟಡ ಗಟ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಪಾರಂಪರಿಕತೆಗೆ ಧಕ್ಕೆಯಾಗದಂತೆ ಇಲ್ಲಿಯೇ ನಾವು ಉತ್ತಮ ಕಟ್ಟಡ ನಿರ್ಮಾಣ ಮಾಡಲಾಗುವುದು.
ಕಟ್ಟಡ ನೆಲಸಮ ಮಾಡಬೇಕೋ, ಇದೇ ಕಟ್ಟಡ ದುರಸ್ಥಿ ಮಾಡಬೇಕೋ ಎನ್ನುವುದನ್ನು ಸರ್ಕಾರದ ಮಟ್ಟದಲ್ಲಿ ತೀರ್ಮಾನ ಮಾಡುತ್ತೇನೆ ಎಂದು ತಿಳಿಸಿದರು.












Click it and Unblock the Notifications