ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ: ಬುಧವಾರ ಮತ ಎಣಿಕೆ
ಮೈಸೂರು, ಜೂ14: ನಗರದ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ದಕ್ಷಿಣ ಪದವೀಧರರ ಕ್ಷೇತ್ರದ ಮತ ಎಣಿಕೆ ಜೂನ್ 15ರಂದು ನಗರದಲ್ಲಿ ನಡೆಯಲಿದೆ.
ಪ್ರಾದೇಶಿಕ ಆಯುಕ್ತರೂ ಆದ ಚುನಾವಣಾಧಿಕಾರಿ ಡಾ. ಜಿ. ಸಿ. ಪ್ರಕಾಶ್ ಈ ಕುರಿತು ಮಾಹಿತಿ ನೀಡಿದರು. ಮತ ಎಣಿಕೆ ಕಾರ್ಯಕ್ಕೆ 28 ಟೇಬಲ್ಗಳನ್ನು ಅಳವಡಿಸಲಾಗಿದ್ದು, ಪ್ರತಿಯೊಂದಕ್ಕೂ ಒಬ್ಬರು ಮೇಲ್ವಿಚಾರಕರು, ಇಬ್ಬರು ಮತ ಎಣಿಕೆ ಸಹಾಯಕರಂತೆ 90 ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.
ಕಣದಲ್ಲಿರುವ ಅಭ್ಯರ್ಥಿಗಳ ಪರವಾಗಿ ಮತ ಎಣಿಕೆ ಟೇಬಲ್ಗಳಿಗೆ ಒಬ್ಬರಂತೆ ಏಜೆಂಟರನ್ನು ನೇಮಕ ಮಾಡಲಾಗಿದೆ. ಮತ ಎಣಿಕೆ ಬೆಳಗ್ಗೆ 8ಕ್ಕೆ ಆರಂಭವಾಗಲಿದೆ. ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಶೇ.30ರಷ್ಟು ಹೆಚ್ಚಿನ ಮತದಾನ; ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಈ ಬಾರಿ ಶೇ.30ರಷ್ಟು ಹೆಚ್ಚಿನ ಮತದಾನವಾಗಿದೆ. ಒಟ್ಟು ಶೇ. 69.95 ಮತದಾನವಾಗಿದ್ದು, ಮೈಸೂರು ಶೇ. 67.55, ಮಂಡ್ಯ ಶೇ. 69.88, ಹಾಸನ 74.22, ಚಾಮರಾಜನಗರದಲ್ಲಿ ಶೇ. 73.21 ಮತದಾನವಾಗಿದೆ. ಇದಕ್ಕೆ ಜಾಗೃತಿ ಕಾರ್ಯಕ್ರಮ, ನೋಂದಣಿ , ಪ್ರಚಾರ ಕಾರ್ಯಕ್ರಮ ಸಹಕಾರಿಯಾಗಿದೆ.
ಮತ ಎಣಿಕೆ ಕೇಂದ್ರದಲ್ಲಿ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ವ್ಯವಸ್ಥೆಗೆ ಮೂವರು ಎಪಿಸಿ, 8 ಪಿಐ, 12 ಪಿಎಸ್ಐ, 15 ಎಎಸ್ಐ, 75 ಎಚ್ಸಿ, ಪಿಸಿ, 15 ಪಿಸಿ (ಮ), 10 ಕೆಎಸ್ಆರ್ಪಿ, 20 ಸಿಎಆರ್ ಸೇರಿ ಒಟ್ಟು 158 ಸಿಬ್ಬಂದಿ ನಿಯೋಜಿಸಲಾಗಿದೆ.

ಫಲಿತಾಂಶ ಸಿಗುವುದೇ?; ದಕ್ಷಿಣ ಪದವೀಧರರ ಕ್ಷೇತ್ರದ ಮತ ಎಣಿಕೆ ಬುಧವಾರ ಆರಂಭವಾಗಲಿದ್ದು, ಅದೇ ದಿನ ಫಲಿತಾಂಶ ಘೋಷಣೆಯಾಗುವುದು ಅನುಮಾನವಾಗಿದೆ. ಏಕೆಂದರೆ ಮತಗಳ ಬಂಡಲ್ ಗಳನ್ನು ಸಿದ್ಧಪಡಿಸಲು ನಾಲ್ಕು ಗಂಟೆ ಬೇಕಾಗಲಿದ್ದು, ಮಧ್ಯಾಹ್ನದ ನಂತರ ಎಣಿಕೆ ಆರಂಭವಾಗುವ ಸಾಧ್ಯತೆ ಇದೆ ಎಂದು ಪ್ರಾದೇಶಿಕ ಆಯುಕ್ತರೂ ಆದ ಚುನಾವಣಾಧಿಕಾರಿ ಡಾ. ಜಿ. ಸಿ. ಪ್ರಕಾಶ್ ತಿಳಿಸಿದರು.

28 ಟೇಬಲ್ಗಳಲ್ಲಿ ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆ ಕಾರ್ಯ ನಡೆಯಲಿದೆ. 2ನೇ ಪ್ರಾಶಸ್ತ್ಯದ ಮತಗಳ ಎಣಿಕೆಯನ್ನು ಅಭ್ಯರ್ಥಿಗಳ ಮುಂದೆ ಒಂದೇ ಟೇಬಲ್ನಲ್ಲಿ ನಡೆಸಬೇಕಾಗಿರುವುದರಿಂದ ಫಲಿತಾಂಶ ಪ್ರಕಟಗೊಳ್ಳಲು ಗುರುವಾರ ಬೆಳಗ್ಗೆ ಅಥವಾ ಸಂಜೆಯಾಗಬಹುದು ಎಂದು ಮಾಹಿತಿ ನೀಡಿದರು.












Click it and Unblock the Notifications