ಸಂದೇಶ್ ನಾಗರಾಜ್ಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ್ದು ಏಕೆ?
ಮೈಸೂರು, ನವೆಂಬರ್ 23; ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ ಎಂದು ತಿಳಿಸಲು ವಿಷಾದಿಸುತ್ತೇನೆ. ಮತದಾರರು, ಅಭಿಮಾನಿ ದೇವರುಗಳು, ರಾಜಕೀಯ ನಾಯಕರುಗಳಿಗೆ ವಂದನೆಗಳು ಎಂದು ಸಂದೇಶ ನಾಗರಾಜ್ ಪ್ರಕಟಣೆ ಹೊರಡಿಸಿದ್ದಾರೆ.
25 ವಿಧಾನ ಪರಿಷತ್ ಸ್ಥಾನಗಳಿಗೆ ಡಿಸೆಂಬರ್ 10ರಂದು ಚುನಾವಣೆ ನಡೆಯಲಿದೆ. ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಮಂಗಳವಾರ ಕೊನೆಯ ದಿನವಾಗಿತ್ತು. ಹಾಲಿ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ.
ಜೆಡಿಎಸ್ ತೊರೆದು ಬಿಜೆಪಿ ಸೇರುವುದಾಗಿ ಘೋಷಣೆ ಮಾಡಿದ್ದ ಸಂದೇಶ್ ನಾಗರಾಜ್ಗೆ ಎರಡೂ ಪಕ್ಷಗಳಲ್ಲಿ ಟಿಕೆಟ್ ಸಿಕ್ಕಿಲ್ಲ. ಆದ್ದರಿಂದ ಮಂಗಳವಾರ ತಾವು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಎಂದು ಪ್ರಕಟಣೆ ಮೂಲಕ ಮಾಹಿತಿಯನ್ನು ನೀಡಿದ್ದಾರೆ.
ಮೈಸೂರು-ಚಾಮರಾಜನಗರ ಕ್ಷೇತ್ರದಿಂದ ಬಿಜೆಪಿ ರಘು ಕೌಟಿಲ್ಯಗೆ ಟಿಕೆಟ್ ನೀಡಿದೆ. ಜೆಡಿಎಸ್ ಪಕ್ಷದಿಂದ ಸಿ. ಎನ್. ಮಂಜೇಗೌಡ ಅಭ್ಯರ್ಥಿಯಾಗಿದ್ದಾರೆ. ಬಿಜೆಪಿ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧೆ ಮಾಡುವ ಸಂದೇಶ್ ನಾಗರಾಜ್ ಪ್ರಯತ್ನ ವಿಫಲವಾಗಿದೆ.

ಸಂದೇಶ್ ನಾಗರಾಜ್ ಪ್ರಕಟಣೆ
ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿಲ್ಲ ಎಂದು ತಿಳಿಸಲು ವಿಷಾದಿಸುತ್ತೇನೆ. 12 ವರ್ಷಗಳಿಂದ ವಿಧಾನ ಪರಿಷತ್ ಸದಸ್ಯನಾಗಿ ಜನಾನುರಾಗಿ ಕೆಲಸಗಳನ್ನು ಮಾಡಿದ ತೃಪ್ತಿ ನನಗಿದೆ. ಆ ಮೂಲಕ ಮತದಾರರು ಹಾಗೂ ಪಕ್ಷದ ಋಣ ತೀರಿಸಿದ್ದೇನೆ ಎಂದು ಸಂದೇಶ್ ನಾಗರಾಜ್ ಮಂಗಳವಾರ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ಬಿಜೆಪಿಯಿಂದ ಸ್ಪರ್ಧಿಸುವ ಇಚ್ಛೆ
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಇಚ್ಛೆ ವ್ಯಕ್ತಪಡಿಸಿದ್ದೆ. ಆದರೆ ಪಕ್ಷದ ನಿಯಮದಂತೆ ವಯೋಮಿತಿಯ ಕಾರಣಕ್ಕೆ ನನಗೆ ಟಿಕೆಟ್ ಕೈ ತಪ್ಪಿದೆ. ಆದರೂ ನನಗೆ ಒತ್ತಾಸೆಯಾಗಿ ಶ್ರಮಿಸಿದ ಬಿಜೆಪಿಯ ಎಲ್ಲಾ ಮುಖಂಡರಿಗೂ ವಂದನೆಗಳನ್ನು ಸಲ್ಲಿಸುತ್ತೇನೆ. ಬಿಜೆಪಿಯ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್, ಮೈಸೂರು ನಗರಾಧ್ಯಕ್ಷರಾದ ಶ್ರೀವತ್ಸ, ರವಿ ಶಂಕರ್, ಹೇಮಂತ್ ಕುಮಾರ್, ಫಣೀಶ್ ಸೇರಿದಂತೆ ಎಲ್ಲಾ ಮುಖಂಡರು, ಕಾರ್ಯಕರ್ತರಿಗೂ ಧನ್ಯವಾದಗಳು ಎಂದು ಸಂದೇಶ್ ನಾಗರಾಜ್ ಹೇಳಿದ್ದಾರೆ.

ಜನ ಸೇವೆ ಹೀಗೆಯೇ ಮುಂದುವೆಯಲಿದೆ
ನನ್ನ ಚುನಾವಣೆ ಸ್ಪರ್ಧೆಗೆ ಜೆಡಿಎಸ್ನಿಂದಲೂ ಒಲವು ತೋರಿದ್ದ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಹಾಗೂ ಎಚ್. ಡಿ. ರೇವಣ್ಣ ಅವರಿಗೂ ಧನ್ಯವಾದಗಳು. ಎಲ್ಲಾ ಅಭಿಮಾನಿ ದೇವರುಗಳಿಗೂ ಕೃತಜ್ಞತೆಗಳು. ನನ್ನ ಜನ ಸೇವೆ ಹೀಗೆಯೇ ಮುಂದುವರೆಯಲಿದೆ ಎಂದು ಸಂದೇಶ ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೆಸರನ್ನು ಅವರು ಎಲ್ಲಿಯೂ ಸಹ ಉಲ್ಲೇಖಿಸಿಲ್ಲ.

ಜೆಡಿಎಸ್ಗೆ ರಾಜೀನಾಮೆ ನೀಡುತ್ತೇನೆ
ವಿಧಾನ ಪರಿಷತ್ ಚುನಾವಣೆ ಘೋಷಣೆಗೂ ಮೊದಲೇ ಸಂದೇಶ್ ನಾಗರಾಜ್ ಜೆಡಿಎಸ್ ಬಿಡುತ್ತೇನೆ ಎಂದು ಘೋಷಣೆ ಮಾಡಿದ್ದರು. ನವೆಂಬರ್ 12ರಂದು ಮೈಸೂರಿನಲ್ಲಿ ಮಾತನಾಡಿದ ಸಂದೇಶ್ ನಾಗರಾಜ್, "ಎಚ್. ಡಿ. ಕುಮಾರಸ್ವಾಮಿಗೆ ನನ್ನ ಅಗತ್ಯ ಇದ್ದಂತೆ ಕಾಣುತ್ತಿಲ್ಲ. ಹೀಗಾಗಿ ಮೂರು ದಿನದಲ್ಲಿ ಜೆಡಿಎಸ್ಗೆ ಅಧಿಕೃತವಾಗಿ ರಾಜೀನಾಮೆ ನೀಡುತ್ತೇನೆ" ಎಂದು ಹೇಳಿದ್ದರು.
"ಕಳೆದ ಮೂರು ವರ್ಷಗಳಿಂದ ಮಾನಸಿಕವಾಗಿ ನಾನು ಬಿಜೆಪಿಯಲ್ಲಿ ಇದ್ದೇನೆ. ಎಚ್. ಡಿ. ಕುಮಾರಸ್ವಾಮಿಗೆ ನನ್ನ ಅಗತ್ಯ ಇಲ್ಲ ಎಂಬುದು ಅವರ ಮಾತು, ನಡೆಯಲ್ಲಿ ಗೊತ್ತಾಗುತ್ತಿದೆ. ಅಗತ್ಯ ಇಲ್ಲದ ಕಡೆ ಯಾಕೆ ಇರಲಿ?" ಎಂದು ಸಂದೇಶ್ ನಾಗರಾಜ್ ಪ್ರಶ್ನೆ ಮಾಡಿದ್ದರು.
Recommended Video

ಜೆಡಿಎಸ್ ಅಭ್ಯರ್ಥಿ ನಾಮಪತ್ರ ಸಲ್ಲಿಕೆ
ಮೈಸೂರು-ಚಾಮರಾಜನಗರ ಕ್ಷೇತ್ರದಿಂದ ಪರಿಷತ್ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಸಿ. ಎನ್. ಮಂಜೇಗೌಡ ಮಂಗಳವಾರ ನಾಮಪತ್ರವನ್ನು ಸಲ್ಲಿಕೆ ಮಾಡಿದರು. ಶಾಸಕ ಸಾ. ರಾ. ಮಹೇಶ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಸಂದೇಶ ನಾಗಾರಾಜ್ ಜೆಡಿಎಸ್ ತೊರೆಯುತ್ತೇನೆ ಎಂದು ಘೋಷಣೆ ಮಾಡಿ ಹಲವು ದಿನಗಳು ಕಳೆದಿವೆ. ಆದರೆ ಸೋಮವಾರ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಜೊತೆ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದರು.












Click it and Unblock the Notifications