ಸಿಎಂ, ಡಿಸಿಎಂ ಕಳೆದುಹೋಗಿದ್ದಾರೆ, ಹುಡುಕಿಕೊಡಿ ಎಂದು ದೂರು ಕೊಡಲು ಮುಂದಾದ ಮೈಸೂರಿನ ವಕೀಲ
ಮೈಸೂರು, ಅಕ್ಟೋಬರ್. 25: ವಾಲ್ಮೀಕಿ ಜಯಂತಿ ಉತ್ಸವದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಗೈರು ಹಾಜರಾದ ಹಿನ್ನೆಲೆಯಲ್ಲಿ ಅವರನ್ನು ಹುಡುಕಿಕೊಡಿ ಎಂದು ನಗರದ ವಕೀಲರೊಬ್ಬರು ಪೊಲೀಸರ ಮೊರೆ ಹೋಗಿದ್ದಾರೆ.
ಬುಧವಾರ ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಸಿಎಂ ಹಾಗೂ ಡಿಸಿಎಂ ಇಬ್ಬರು ಗೈರು ಹಾಜರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಹುಡುಕಿಕೊಡಿ ಎಂದು ಮೈಸೂರಿನ ಲಕ್ಷ್ಮೀಪುರಂ ಠಾಣೆಗೆ ದೂರು ನೀಡಲು ವಕೀಲ ಪಡುವಾರಹಳ್ಳಿ ರಾಮಕೃಷ್ಣ ಮುಂದಾಗಿದ್ದಾರೆ.
ಇಬ್ಬರು ನಾಯಕರು ಗೈರು ಹಾಜರಾಗುವ ಮೂಲಕ ಆ ಸಮುದಾಯದವರಿಗೆ ಅಪಮಾನ ಮಾಡಿದ್ದಾರೆ. ಆದ್ದರಿಂದ ಈ ಇಬ್ಬರೂ ರಾಜ್ಯದ ಜನತೆ, ವಾಲ್ಮೀಕಿ ಸಮುದಾಯಕ್ಕೆ ಕ್ಷಮೆ ಯಾಚಿಸಬೇಕು ಎಂದು ವಕೀಲರು ಆಗ್ರಹಿಸಿದ್ದಾರೆ.

ಸಿಎಂ ಕುಮಾರಸ್ವಾಮಿ ಅವರು ಬುಧವಾರ ಉದರಬೇನೆಯಿಂದ ಬಳಲುತ್ತಿದ್ದ ಕಾರಣ ಅಂದಿನ ಅವರ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿರುವ ಬಗ್ಗೆ ಸಿಎಂ ಕಚೇರಿ ನೀಡಿರುವ ಸ್ಪಷ್ಟನೆ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ, ಅದೇನೆ ಇರಲಿ ಸಮಾಜದ ಜನತೆ ಸಿಎಂ, ಡಿಸಿಎಂ ವರ್ತನೆಯಿಂದ ಅಸಮಧಾನಗೊಂಡಿದ್ದಾರೆ. ವಾಲ್ಮೀಕಿ ಬಗ್ಗೆ ನಿಜವಾದ ಗೌರವವಿದ್ದರೆ ತಮ್ಮ ಕಚೇರಿಯಲ್ಲೇ ಜಯಂತಿ ಆಚರಿಸಬೇಕು ಎಂದು ವಕೀಲ ರಾಮಕೃಷ್ಣ ಒತ್ತಾಯಿಸಿದರು.
ಮಾಜಿ ಪ್ರಧಾನಿ ದೇವೇಗೌಡರಿಗೆ ವಾಲ್ಮೀಕಿ ಪ್ರಶಸ್ತಿ ನೀಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ ದೇವೇಗೌಡರಿಗೆ ವಾಲ್ಮೀಕಿ ಪ್ರಶಸ್ತಿ ಕೊಟ್ಟಿರುವುದು ಸೂಕ್ತವಲ್ಲ. ಅವರಿಗೆ ವಾಲ್ಮೀಕಿ ಗೌರವ ನೀಡಿರುವುದಕ್ಕೆ ನನ್ನ ವಿರೋಧವಿದೆ. ನಾಯಕ ಸಮುದಾಯದಲ್ಲಿ ಅರ್ಹ ವ್ಯಕ್ತಿಗಳು ಇದ್ದಾರೆ. ಅವರಿಗೆ ನೀಡಿ ಗೌರವ ಒದಗಿಸಬೇಕಿತ್ತು ಎಂದು ವಕೀಲ ಪಡುವಾರಹಳ್ಳಿ ರಾಮಕೃಷ್ಣ ಸೂಚಿಸಿದ್ದಾರೆ.












Click it and Unblock the Notifications