ಮಳೆ ಅವಾಂತರ: ಚಾಮುಂಡಿ ಬೆಟ್ಟದಲ್ಲಿ ಮತ್ತೆ ರಸ್ತೆ ಭೂ ಕುಸಿತ
ಮೈಸೂರು, ಅಕ್ಟೋಬರ್ 22: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದ ಚಾಮುಂಡಿಬೆಟ್ಟದಲ್ಲಿ ಮತ್ತೆ ಭೂ ಕುಸಿತ ಉಂಟಾಗಿದೆ. ಈ ನಡುವೆ ನಂದಿ ಮಾರ್ಗದಲ್ಲಿ ಶುರುವಾಗಿದ್ದ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ.
ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಚಾಮುಂಡಿಬೆಟ್ಟದ ನಂದಿ ಪ್ರತಿಮೆ ರಸ್ತೆಯ ವ್ಯೂ ಪಾಯಿಂಟ್ ಬಳಿ ಮತ್ತೆ ಭೂ ಕುಸಿತ ಉಂಟಾಗಿದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
2021ರ ಅಕ್ಟೋಬರ್ 20ರಂದು ಸುರಿದ ಭಾರಿ ಮಳೆಗೆ ಚಾಮುಂಡಿ ಬೆಟ್ಟದ ನಂದಿ ರಸ್ತೆ ಕುಸಿದಿತ್ತು. ಈ ಅವಘಡಕ್ಕೆ ಬರೋಬ್ಬರಿ ಒಂದು ವರ್ಷ ತುಂಬಿದೆ. ವಿಪರ್ಯಾಸ ಎಂದರೆ ದುರಸ್ತಿ ಕಾಮಗಾರಿ ಮುಗಿಯುವ ಮುನ್ನವೇ ಮತ್ತೊಂದು ಭಾಗ ಕುಸಿದಿದೆ.

ಚಾಮುಂಡಿ ಬೆಟ್ಟದ ನಂದಿ ರಸ್ತೆ ದುರಸ್ತಿ ಕಾರ್ಯ ಆರಂಭಿಸಿರುವ ಜಾಗದಿಂದ 200-300 ಮೀಟರ್ ಅಂತರದಲ್ಲಿ ಭೂ ಕುಸಿತವಾಗಿದೆ. 10ರಿಂದ 15 ಅಡಿಯಷ್ಟು ಭೂಮಿ ಕುಸಿತವಾಗಿದೆ. ಇದರ ಸಮೀಪದಲ್ಲಿಯೇ ಕೆಲವು ಕಡೆ ಬಿರುಕು ಬಿಟ್ಟಿದ್ದು, ಮಳೆ ಪ್ರಮಾಣ ಹೀಗೆಯೇ ಮುಂದುವರಿದರೆ ಆ ಪ್ರದೇಶಗಳೂ ಕುಸಿಯುವ ಸಾಧ್ಯತೆ ಇದೆ. ಚಾಮುಂಡಿ ಬೆಟ್ಟ ರಸ್ತೆ ಸಮೀಪದಲ್ಲೇ ನಿರ್ಮಿಸಿರುವ ವ್ಯೂ ಪಾಯಿಂಟ್ನಿಂದ ಕೆಲ ಮೀಟರ್ ಅಂತರದಲ್ಲೇ ಈ ಅವಘಡ ಸಂಭಸಿವಿದೆ.

ಚಾಮುಂಡಿಬೆಟ್ಟಕ್ಕೆ ಹೋಗೋ ಪ್ರತಿ ಭಕ್ತರು ನಂದಿ ಬಳಿ ಹೋಗಿ ಪೂಜೆ ಸಲ್ಲಿಸುತ್ತಾರೆ. ಅನಂತರ ಅದೇ ಮಾರ್ಗವಾಗಿ ಕೆಳಗೆ ಇಳಿಯುತ್ತಾರೆ. ಆದರೆ ಈಗ ರಸ್ತೆ ಕುಸಿತ ಆಗಿರುವುದರಿಂದ ವಾಹನ ಸಂಚಾರ ನಿಷೇಧ ಮಾಡಲಾಗಿದೆ. ಮಳೆ ಹೀಗೆ ಮುಂದುವರಿದರೆ ಮತ್ತಷ್ಟು ರಸ್ತೆಗಳು ಕುಸಿತ ಆಗುವ ಸಾಧ್ಯತೆ ಇದೆ. ಹೀಗಾಗಿ ಅಧಿಕಾರಿಗಳು ದುರಸ್ತಿ ಕಾರ್ಯ ಆದಷ್ಟು ಬೇಗ ಮುಗಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ರಸ್ತೆ ಕುಸಿತದ ಜೊತೆಗೆ ಕೆಲ ವರ್ಷಗಳ ಹಿಂದೆ ಪೈಪ್ಲೈನ್ ಕಾಮಗಾರಿ ನಡೆದಿದ್ದ ಸ್ಥಳದಲ್ಲಿಯೂ ಭೂ ಕುಸಿತವಾಗಿದೆ. ಬೆಟ್ಟದಲ್ಲಿ ಸುಸ್ವಾಗತ ದೀಪಾಲಂಕಾರ ಮಾಡುವ ಜಾಗದ ಬಳಿ ಹಾದು ಹೋಗಿರುವ ಪೈಪ್ಲೈನ್ ಕಾಮಗಾರಿಗೆ ಭೂಮಿಯನ್ನು ಅಗೆದಿದ್ದ ಜಾಗದಲ್ಲೂ ಕುಸಿತವಾಗಿದ್ದು, ಭಾರಿ ಪ್ರಮಾಣದಲ್ಲಿ ಮಣ್ಣಿನ ಸವಕಳಿ ಉಂಟಾಗುತ್ತಿದೆ. ಉತ್ತನಹಳ್ಳಿ ರಸ್ತೆ, ನಂದಿ ರಸ್ತೆ (ಬೆಟ್ಟದ ಕೆಳಗೆ ಸಾಗುವ ರಸ್ತೆ)ಯಲ್ಲಿಯೂ ಹಲವು ಕಡೆ ದೊಡ್ಡ ದೊಡ್ಡ ಬಂಡೆಗಳು ಜಾರಿ ಕೆಳಗೆ ಬೀಳುತ್ತಿವೆ. ಈ ಮೂಲಕ ಬೆಟ್ಟದ ಅಸ್ತಿತ್ವಕ್ಕೆ ಕಂಟಕ ಎದುರಾಗುತ್ತಿದೆ. ಹೀಗಾಗಿ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ದುರಸ್ತಿ ಕಾರ್ಯ ನಡೆಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.











Click it and Unblock the Notifications