ಬೆಂಕಿಯುಗುಳುವ ಭೂಮಿ: ಪ್ರಾಥಮಿಕ ವರದಿಯಲ್ಲೇನಿದೆ?
ಮೈಸೂರಿನ ಬೆಂಕಿಯುಗುಳುವ ಭೂಮಿ ಘಟನೆಗೆ ಸಂಬಂಧಿಸಿದಂತೆ ಇದೊಂದು ಮಾನವ ಕೃತ್ಯ ಎಂದು ಕೈಗಾರಿಕಾ ಮತ್ತು ಬಾಯ್ಲರ್ ಇಲಾಖೆಯ ಉಪ ನಿರ್ದೇಶಕರು ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ.
ಮೈಸೂರು, ಏಪ್ರಿಲ್ 20 : ಭೂಮಿಯಲ್ಲಿ ಬೆಂಕಿ ಉಗುಳುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ವರದಿ ಸಲ್ಲಿಕೆಯಾಗಿದ್ದು, ಆ ಪ್ರತಿ 'ಒನ್ ಇಂಡಿಯಾ'ಗೆ ಲಭಿಸಿದೆ. ಈ ಸ್ಥಳದ ಸುತ್ತಲೂ ಮರಗಳು ಹಸಿರಾಗಿರುವುದರಿಂದ ಇದೊಂದು ಮಾನವ ಕೃತ್ಯ ಎಂದು ಪ್ರಾಥಮಿಕ ವರದಿಯಲ್ಲಿ ಬಹಿರಂಗವಾಗಿದ್ದು, ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಕಳೆದ ಭಾನುವಾರ (ಏಪ್ರಿಲ್ 16) ಮೈಸೂರಿನ ಹೊರಭಾಗದ ಶಾದನಹಳ್ಳಿ ಖಾಸಗಿ ಜಮೀನಿನಲ್ಲಿ ಕುದಿಯುತ್ತಿರುವ ಭೂಮಿಗೆ ಸಿಲುಕಿ ಹರ್ಷಿಲ್ (14) ಎಂಬ ಬಾಲಕನೊರ್ವ ಮೃತಪಟ್ಟ ಹಿನ್ನೆಲೆಯಲ್ಲಿ ಆ ಪ್ರದೇಶಕ್ಕೆ ಹಿರಿಯ ಭೂ ವಿಜ್ಞಾನಿಗಳ, ತಾಂತ್ರಿಕ ತಜ್ಞರ ತಂಡ ಬಂದು ಪರಿಶೀಲನೆ ನಡೆಸಿತ್ತು. ಆ ಸ್ಥಳದ ಸುತ್ತ ರಾಸಾಯನಿಕ ಕ್ರಿಯೆಯ ಯಾವುದೇ ವಸ್ತುಗಳು ಪತ್ತೆಯಾಗದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. [ಆಶ್ಚರ್ಯ! ಮೈಸೂರಿನಲ್ಲಿ ಕುದಿಯುತ್ತಿರುವ ಭೂಮಿಗೆ ಬಿದ್ದು ಬಾಲಕ ಸಾವು]
ಬೆಂಕಿ ಬಂದ ಸ್ಥಳದಲ್ಲಿ ಇದ್ದಿಲು ಮಾದರಿಯ ರಾಸಾಯನಿಕ ಪದಾರ್ಥಗಳು ಪತ್ತೆಯಾಗಿದ್ದು, ಮೇಲ್ಭಾಗದಲ್ಲಿ ಮರಳು ಸುರಿದು ಮುಚ್ಚಲಾಗಿದೆ. ಇದೊಂದು ಮಾನವ ಕೃತ್ಯ ಎಂದು ಕೈಗಾರಿಕಾ ಮತ್ತು ಬಾಯ್ಲರ್ ಇಲಾಖೆಯ ಉಪ ನಿರ್ದೇಶಕರು ಜಿಲ್ಲಾಧಿಕಾರಿಗಳಿಗೆ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ.

ಜಮೀನಿನ ಸುತ್ತಲೂ ಇದೆ ಹಸಿರು ಗಿಡಗಳು:
ಭೂಮಿಯಲ್ಲಿ ಬೆಂಕಿಯ ಜ್ವಾಲೆಯ ರೀತಿ ಕಾಣಿಸಿಕೊಂಡ ಒಂದು ಗುಂಟೆ ಜಾಗದಲ್ಲಿ ಇರುವ ಮರಳಿನಲ್ಲಿ ಮಾತ್ರ ಈ ರೀತಿ ಬೆಂಕಿ ಕಾಣಿಸಿಕೊಂಡಿದೆ. ಸುತ್ತಲು ಇರುವ ಗಿಡ ಮರಗಳು ಹಸಿರಾಗಿದ್ದು, ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ತಾಂತ್ರಿಕ ಸಮಿತಿ ಸದಸ್ಯ ಡಾ. ಜಯಪ್ರಕಾಶ ನೇತೃತ್ವದಲ್ಲಿ ನಿನ್ನೆ(ಏಪ್ರಿಲ್ 21) ವರದಿಯನ್ನ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. [ಮೈಸೂರಿನಲ್ಲಿ ಬೆಂಕಿಯುಗುಳುವ ಭೂಮಿ: ಭೂವಿಜ್ಞಾನಿಗಳಿಗೇ ಸವಾಲು!]
ವರದಿಯ ಸಾರಾಂಶವನ್ನು ಗಮನಿಸಿದಲ್ಲಿ, ಸುತ್ತಲಿನ ಸ್ಥಳ ಹಾಗೂ ಬೆಂಕಿ ಕಾಣಿಸಿಕೊಂಡ ಸ್ಥಳದ ಮಾದರಿಗಳನ್ನ ಪರಿಶೀಲನೆ ಮಾಡಿದ್ದಾರೆ. ಇಲ್ಲಿ ಯಾವುದೇ ರಾಸಾಯನಿಕ ನ್ಯೂಕ್ಲೀಯರ್ ತರಹದ ವಸ್ತುಗಳು ಪತ್ತೆಯಾಗಿಲ್ಲ ಎಂದು ದೃಢಪಟ್ಟಿದೆ ಎನ್ನಲಾಗಿದೆ.
ಜಮೀನಿಗೆ ನಿಷೇಧಿತ ಪ್ರದೇಶವೆಂಬ ನಾಮಫಲಕ :
ಶಾದನಹಳ್ಳಿಯ ಬೆಂಕಿ ಕಾಣಿಸಿಕೊಂಡ ಪ್ರದೇಶದ ಸುತ್ತ 200 ಮೀಟರ್ ಸ್ಥಳವನ್ನು 1 ತಿಂಗಳ ಕಾಲ ನಿಷೇಧಿತ ಪ್ರದೇಶವಾಗಿರಲಿದ್ದು, ಈ ಹಿನ್ನೆಲೆಯಲ್ಲಿ, ಸ್ಥಳದಲ್ಲಿ ಅಪಾಯಕಾರಿ ಪ್ರದೇಶ, ಸಾರ್ವಜನಿಕರಿಗೆ ಪ್ರವೇಶವಿಲ್ಲ ಎಂಬ ನಾಮಫಲಕ ತೂಗುಹಾಕಲಾಗಿದೆ.












Click it and Unblock the Notifications