ನಂಜನಗೂಡಿನ ಶ್ರೀಕಂಠೇಶ್ವರನ ಸನ್ನಿಧಿಯಲ್ಲಿ ಸೇರಿದ ಲಕ್ಷಾಂತರ ಭಕ್ತರು
ಮೈಸೂರು, ಫೆಬ್ರವರಿ 22: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ನಿನ್ನೆ ಮಹಾಶಿವರಾತ್ರಿ ಅಂಗವಾಗಿ ಲಕ್ಷಾಂತರ ಭಕ್ತರು ಭೇಟಿ ನೀಡಿ ದರ್ಶನ ಪಡೆದರು. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ ಭಕ್ತರು ರಾತ್ರಿಯಿಡೀ ಜಾಗರಣೆಯಲ್ಲಿ ತೊಡಗಿ ಶಿವ ಸ್ಮರಣೆ ಮಾಡಿದರು.
ನಂಜನಗೂಡಿಗೆ ಆಗಮಿಸುವ ತಿರುಪತಿ ಫಾಸ್ಟ್ ಪ್ಯಾಸೆಂಜರ್ ರೈಲು, ಶಿವಮೊಗ್ಗ ಪ್ಯಾಸೆಂಜರ್ ರೈಲುಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ದೇವಾಲಯದ ಕೈಸಾಲೆ, ಸಮುಚ್ಚಯ, ಪ್ರಾಂಗಣ ಸೇರಿ ಆಯಕಟ್ಟಿನ ಪ್ರದೇಶದಲ್ಲಿ ಭಕ್ತರು ಆಶ್ರಯ ಪಡೆದರು. ನಂತರ ದೇವಾಲಯದ ಸುತ್ತ ಉರುಳು ಸೇವೆ ಸಲ್ಲಿಸಿ ಕಪಿಲಾ ಸ್ನಾನಘಟ್ಟದಲ್ಲಿ ಪುಣ್ಯಸ್ನಾನ ಮಾಡಲು ಮುಗಿಬಿದ್ದರು.
ದೇವಾಲಯದ ಒಳ ಆವರಣದಲ್ಲಿರುವ ಸಹಸ್ರ ಲಿಂಗಗಳಿಗೆ ಬಿಲ್ವಾರ್ಚನೆ ಹಾಗೂ ಹೂವಿನ ಸೇವೆ ಸಲ್ಲಿಸಿದರು. ಶ್ರೀಕಂಠನ ದರ್ಶನ ಪಡೆಯಲು ಬೆಳಗಿನ ಜಾವ 4ರಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತಿರುವುದು ಕಂಡುಬಂದಿತು. ಮಧ್ಯಾಹ್ನ ಆಗುತ್ತಿದ್ದಂತೆ ಭಕ್ತರ ಸಂಖ್ಯೆ ಗಣನೀಯ ಏರಿಕೆ ಕಂಡಿತು. ಗಣ್ಯರ ಪ್ರವೇಶಕ್ಕಾಗಿ ಮುಖ್ಯದ್ವಾರದ ಮುಂದೆ ತಾತ್ಕಾಲಿಕ ಗೇಟ್ ತೆರೆದು ಅನುವು ಮಾಡಲಾಗಿತ್ತು. ಭಕ್ತರಿಗೆ ದಾಸೋಹ ಭವನದಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ಫಲಾಹಾರ ವ್ಯವಸ್ಥೆ ಮಾಡಲಾಗಿತ್ತು.

ಬೆಳಗಿನ ಜಾವ 3 ಗಂಟೆಯಿಂದಲೇ ಗರ್ಭಗುಡಿಯಲ್ಲಿ ಶತ ರುದ್ರಾಭಿಷೇಕ, ಏಕದಶಾವರ, ಏಕವಾರ, ನಿತ್ಯೋತ್ಸವ ಪೂಜೆ, ಸಂಗಮ ಕಾಲದ ಪೂಜೆ, ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ ಹಾಗೂ 11 ಬಾರಿ ಮಹಾರುದ್ರ ಪಾರಾಯಣವನ್ನು ಪ್ರಧಾನ ಆಗಮಿಕ ಜೆ.ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ನೆರವೇರಿಸಲಾಯಿತು. ನಂತರ ಎಲ್ಲ ಗುಡಿಗಳಲ್ಲೂ ಬಿಲ್ವಾರ್ಚನೆ ನೆರವೇರಿಸಲಾಯಿತು.
ಶ್ರೀಕಂಠಸ್ವಾಮಿ ಹಾಗೂ ಪಾರ್ವತಿ ದೇವಿ ಗುಡಿಯಲ್ಲಿ ವಿವಿಧ ಬಗೆಯ ಪುಷ್ಪಾಲಂಕಾರವನ್ನು ಮಾಡಲಾಗಿತ್ತು. ದೇವಾಲಯದಲ್ಲಿರುವ ಶಿವನ ವಿವಿಧ ರೂಪದ ನೂರಾರು ವಿಗ್ರಹಗಳಿಗೆ ವಿಶೇಷ ಪೂಜೆ ಸಲ್ಲಿಸಿ ಬಿಲ್ವಾರ್ಚನೆ ನೆರವೇರಿಸಲಾಯಿತು.












Click it and Unblock the Notifications