ಬಾಲಿವುಡ್ ನಟ ಅಮರೀಶ್ ಪುರಿ ತಂಗಿ ಮನೆ ಕನ್ನ ಹಾಕಿದ್ದ ಮೈಸೂರಿನ ಕಳ್ಳಿ
ಮೈಸೂರು, ಜುಲೈ 31 : ಬಾಲಿವುಡ್ ನಟ ಅಮರೀಷ್ ಪುರಿ ಅವರ ತಂಗಿಯ ಮನೆಯಲ್ಲಿ 30 ಲಕ್ಷ ರುಪಾಯಿ ಮೌಲ್ಯದ ವಜ್ರಾಭರಣ ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಎಚ್.ಡಿ. ಕೋಟೆ ಮೂಲದ ಮಹಿಳೆಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಲಕ್ಷಾಂತರ ರುಪಾಯಿ ಮೌಲ್ಯದ ವಜ್ರ ಹಾಗೂ ಚಿನ್ನದ ಆಭರಣಗಳನ್ನು ದೋಚಿಕೊಂಡು ಬಂದಿದ್ದ ಎಚ್.ಡಿ.ಕೋಟೆ. ತಾಲೂಕಿನ ಹಾದನೂರು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ತುಳಸಿ (30)ಯನ್ನು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಮುಂಬೈ ಪೊಲೀಸರು ಬಂಧಿಸಿದ್ದಾರೆ.
ಎಲ್ಲರ ಕಣ್ಣು ಚಂದ್ರನತ್ತ ನೆಟ್ಟಾಗ ಎಂಟು ಶಾಪ್ ಲೂಟಿ ಮಾಡಿದ ಕಳ್ಳರು
ಆ ಬಳಿಕ ವಿಚಾರಣೆಗೆ ಒಳಪಡಿಸಿ, ಗಿರವಿ ಇಟ್ಟಿದ್ದ 29.75 ಲಕ್ಷ ರುಪಾಯಿ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡು, ನ್ಯಾಯಾಧೀಶರ ಅನುಮತಿ ಪಡೆದು, ಆರೋಪಿಯನ್ನು ಮುಂಬೈಗೆ ಕರೆದೊಯ್ಯಲಾಯಿತು.
ಎಚ್.ಡಿ.ಕೋಟೆ ಪಟ್ಟಣದ ವ್ಯಕ್ತಿಯೊಬ್ಬರನ್ನು ವಿವಾಹವಾಗಿದ್ದ ತುಳಸಿ, ಕೆಲ ವರ್ಷಗಳ ನಂತರ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಈ ನಡುವೆ ಕೆಲಸಕ್ಕಾಗಿ ಮಂಗಳೂರು ಮೂಲದ ಏಜೆಂಟ್ ನನ್ನು ಸಂಪರ್ಕಿಸಿದ್ದಳು. 2 ತಿಂಗಳ ಹಿಂದೆ ಆತ, ತುಳಸಿಯನ್ನು ಮುಂಬೈಗೆ ಕರೆದೊಯ್ದು, ವಾಸ್ತುಶಿಲ್ಪಿ ದಂಪತಿ ಮನೆಯಲ್ಲಿ ಕೆಲಸಕ್ಕೆ ಸೇರಿಸಿದ್ದ.
ಆದರೆ, ಇದ್ದಕ್ಕಿದ್ದಂತೆ ಈಕೆ ಮನೆಯ ಮಾಲೀಕರಿಗೂ ತಿಳಿಸದೆ ಕೆಲಸ ಬಿಟ್ಟಿದ್ದಳು. ಇದರಿಂದ ಅನುಮಾನಗೊಂಡ ಮನೆ ಮಾಲೀಕರು, ಬೀರುವನ್ನು ಪರಿಶೀಲಿಸಿದಾಗ ಅದರಲ್ಲಿದ್ದ ಸುಮಾರು 30.75 ಲಕ್ಷ ಮೌಲ್ಯದ ಚಿನ್ನಾಭರಣಗಳು ಕಳುವಾಗಿದ್ದವು. ಆ ನಂತರ ಮಹಿಮಾ ಪೊಲೀಸ್ ಠಾಣೆಗೆ ದೂರು ನೀಡಿ, ಮನೆಗೆಲಸದಾಕೆ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.
ತುಳಸಿಯ ಬಟ್ಟೆಗಳಿದ್ದ ಬ್ಯಾಗ್ ಸಿಕ್ಕಿತ್ತಾದರೂ, ಆಕೆಯ ವಿಳಾಸದ ಬಗ್ಗೆ ಯಾವುದೇ ಸುಳಿವು ದೊರೆತಿರಲಿಲ್ಲ. ಮೂರ್ನಾಲ್ಕು ದಿನಗಳ ಕಾಲ ಸ್ವಿಚ್ ಆಫ್ ಆಗಿದ್ದ ತುಳಸಿ ಮೊಬೈಲ್ ಆನ್ ಆಗುತ್ತಿದ್ದಂತೆ ಪೊಲೀಸರು ತನಿಖೆ ಚುರುಕುಗೊಳಿಸಿದರು. ಮೊಬೈಲ್ ಸಿಗ್ನಲ್ ಜಾಡು ಹಿಡಿದು ತನಿಖೆ ನಡೆಸಿದಾಗ ತುಳಸಿಯು ಎಚ್.ಡಿ.ಕೋಟೆ ಭಾಗದಲ್ಲಿರುವುದು ತಿಳಿದಿದೆ.
ಮುಂಬೈ ಪೊಲೀಸರ ತಂಡ ಜುಲೈ 27ರಂದು ಎಚ್.ಡಿ.ಕೋಟೆ ಪೊಲೀಸ್ ಠಾಣೆಗೆ ಬಂದು, ಪ್ರಕರಣದ ವಿವರ ನೀಡಿ, ಸಹಕಾರ ಕೋರಿದ್ದರು. ಆ ಬಳಿಕ ಮೇಲಧಿಕಾರಿಗಳ ಸೂಚನೆ ಮೇರೆಗೆ ಎಚ್.ಡಿ.ಕೋಟೆ ಠಾಣೆಯ ಪೊಲೀಸರು ಮುಂಬೈ ಪೊಲೀಸ್ ತಂಡದೊಂದಿಗೆ ಖತರ್ನಾಕ್ ಕಳ್ಳಿ ತುಳಸಿ ಹುಡುಕಾಟಕ್ಕೆ ಬಲೆ ಬೀಸಿದ್ದರು.
ಹಾದನೂರು ಗ್ರಾಮದಲ್ಲಿ ಹಗಲು ವೇಳೆ ಮನೆಯಿಂದ ಹೊರ ಬಾರದ ತುಳಸಿ, ರಾತ್ರಿಯಾದರೆ ಗ್ರಾಮಸ್ಥರ ಕಣ್ಣಿಗೂ ಬೀಳದಂತೆ ಮೈಸೂರಿಗೆ ಹೋಗಿ ಬರುತ್ತಿದ್ದಳು. ಈಕೆಯ ನಿಗೂಢ ಓಡಾಟದ ಬಗ್ಗೆ ಪೋಷಕರಿಗೂ ತಿಳಿದಿರಲಿಲ್ಲ. ಕಡೆಗೂ ಆಕೆ ಮನೆಯಲ್ಲಿದ್ದಾಗಲೇ ತುಳಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲೇ ತಾನು ಮುಂಬೈನಲ್ಲಿ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾಳೆ. ತುಳಸಿಯನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಅವರ ಅನುಮತಿ ಪಡೆದು ಮುಂಬೈಗೆ ಕರೆದೊಯ್ಯಲಾಯಿತು.