ಹುಣಸೂರಿನಲ್ಲಿ 32 ಅಸ್ಸಾಂ ಕಾರ್ಮಿಕರ ಮಕ್ಕಳ ರಕ್ಷಣೆ: ಶಾಲೆ ತೊರೆದಿದ್ದವರಿಗೆ ಹೊಸ ಜೀವನ
ಮೈಸೂರು, ಫೆಬ್ರವರಿ 20: ಅಸ್ಸಾಂನ ನೋಯಾನಗರದಿಂದ ಮೈಸೂರಿನ ಹುಣಸೂರಿಗೆ ಕೂಲಿ ಕೆಲಸಕ್ಕಾಗಿ ಬಂದಿದ್ದ ಕಾರ್ಮಿಕರ 32 ಮಕ್ಕಳನ್ನು ಪತ್ತೆ ಹಚ್ಚಿದ ಕಾರ್ಮಿಕ ಇಲಾಖೆ ಅಧಿಕಾರಿಗಳು ಮಕ್ಕಳನ್ನು ಸರಕಾರಿ ಶಾಲೆ ಹಾಗೂ ಅಂಗನವಾಡಿಗೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುಣಸೂರು ನಗರಕ್ಕೆ ಸಮೀಪದ ಹಾಲಗೆರೆ ಬಳಿಯ ಕೋಕೋನೆಟ್ ಇಂಡಸ್ಟ್ರೀಸ್ ಕಾರ್ಖಾನೆಯಲ್ಲಿ ಅಸ್ಸಾಂ ರಾಜ್ಯದ ನೋಯಾ ನಗರದಿಂದ ಬಂದಿರುವ 25ಕ್ಕೂ ಹೆಚ್ಚು ಕುಟುಂಬಗಳು ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇವರೊಂದಿಗೆ ಮಕ್ಕಳು ಸಹ ಶಾಲೆ ತೊರೆದು ಆಗಮಿಸಿದ್ದು, ಪೋಷಕರೊಂದಿಗಿದ್ದು, ಮಕ್ಕಳ ಶಿಕ್ಷಣ ಮೊಟಕಾಗಿತ್ತು.

ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಸಹಾಯಕ ಕಾರ್ಮಿಕ ಆಯುಕ್ತೆ ರಜಿಯಾಸುಲ್ತಾನರ ನಿರ್ದೇಶನದಂತೆ ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕ ಮಲ್ಲಿಕಾರ್ಜುನ್, ತಾಲೂಕು ಕಾರ್ಮಿಕ ಅಧಿಕಾರಿ ಲಕ್ಷ್ಮೀಶ್ ಹಾಗೂ ಶಿಕ್ಷಣ ಇಲಾಖೆಯ ಬಿಆರ್ಸಿ ಸಂತೋಷ್ಕುಮಾರ್, ಇಸಿಓ ಕುಮಾರಸ್ವಾಮಿ, ಅಂಗನವಾಡಿ ಮೇಲ್ವಿಚಾರಕಿ ಶೋಭಾ ಮತ್ತಿತರ ಅಧಿಕಾರಿಗಳ ತಂಡ ಕಾರ್ಖಾನೆಗೆ ಭೇಟಿ ನೀಡಿದ್ದಾರೆ.
ಪೋಷಕರಿಗೆ ಮಕ್ಕಳನ್ನು ಶಾಲೆಗೆ ಕಳುಹಿಸದಿರುವುದು ಕಾನೂನು ಪ್ರಕಾರ ಅಪರಾಧವಾಗಲಿದೆ ಎಂದು ತಿಳುವಳಿಕೆ ನೀಡಿದ ಅಧಿಕಾರಿಗಳು, ಕಾರ್ಖಾನೆ ಮಾಲಿಕರಿಗೆ ಎಚ್ಚರಿಕೆ ನೀಡಿ 6-14 ವರ್ಷದೊಳಗಿನ 23 ಮಕ್ಕಳನ್ನು ಸಮೀಪದ ಯಶೋಧರಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿಗೆ 6 ಮಕ್ಕಳನ್ನು ದಾಖಲಿಸಲಾಯಿತು. ಮಕ್ಕಳು ಖುಷಿಯಿಂದಲೇ ಶಾಲೆ, ಅಂಗನವಾಡಿಗೆ ಪೋಷಕರು ಹಾಗೂ ಅಧಿಕಾರಿಗಳೊಂದಿಗೆ ಹೊರಟರು.
ಮಾಹಿತಿ ಮೇರೆಗೆ ಕಾರ್ಖಾನೆ ಆವರಣದಲ್ಲಿರುವ ವಸತಿ ಗೃಹದಲ್ಲಿ ಪರಿಶೀಲನೆ ನಡೆಸಿದ ವೇಳೆ ಶಾಲೆಗೆ ಹೋಗದೆ ಆಟವಾಡಿಕೊಂಡಿರುವ 32 ಮಕ್ಕಳು ಪತ್ತೆಯಾಗಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ಶಾಲೆಗೆ ಸೇರಿಸಲು ಕ್ರಮವಹಿಸಲಾಗಿದೆ ಎಂದು ತಾಲೂಕು ಕಾರ್ಮಿಕ ಅಧಿಕಾರಿ ಲಕ್ಷ್ಮೀಶ ತಿಳಿಸಿದ್ದಾರೆ.
ಈ ಮಕ್ಕಳಿಗಾಗಿ ಸ್ಥಳದಲ್ಲೇ ಟೆಂಟ್ ಶಾಲೆ ತೆರೆಯುವ ಹಾಗೂ ಈ ಶಾಲೆಗೆ ಉರ್ದು ಮತ್ತು ಹಿಂದಿ ಶಿಕ್ಷಕರನ್ನು ನೇಮಿಸಲಾಗುವುದೆಂದು ಡಿಡಿಪಿಐ ಎಚ್.ಕೆ.ಪಾಂಡು ತಿಳಿಸಿದ್ದಾರೆಂದು ಬಿಆರ್ಸಿ ಸಂತೋಷ್ಕುಮಾರ್ ಮಾಹಿತಿ ನೀಡಿದರು.












Click it and Unblock the Notifications