ಮೈಸೂರು ದಸರಾ: ಕುಶಾಲು ತೋಪು ಸಿಡಿಸುವ ತಾಲೀಮು ಆರಂಭ
ಮೈಸೂರು, ಅಕ್ಟೋಬರ್ 16: ನಾಡಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ಸಿಗಲು ಕೇವಲ ಒಂದೇ ದಿನ ಬಾಕಿಯಿದ್ದು, ಮೈಸೂರು ನಗರದಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಅದರಂತೆ ಜಂಬೂ ಸವಾರಿಯ ವೇಳೆ ಕುಶಾಲತೋಪು ಸಿಡಿಸುವ ಕಾರ್ಯಕ್ಕೆ ಇಂದು ತಾಲೀಮು ನಡೆಸಲಾಯಿತು.
ಕೊರೊನಾ ವೈರಸ್ ಆತಂಕ ಇರುವ ಕಾರಣ ಈ ವರ್ಷ ಸಿಡಿಮದ್ದಿನ ತಾಲೀಮಿನಲ್ಲಿ ಬದಲಾವಣೆ ಮಾಡಲಾಗಿದೆ. ಸಿಡಿಮದ್ದಿನ ತಾಲೀಮಿನ ವೇಳೆ ಇದೇ ಮೊದಲ ಬಾರಿಗೆ ಆನೆಗಳು ಅರಮನೆ ಒಳಗೆ ನಿಂತಿದ್ದವು. ಅರಮನೆಯ ಕೋಟೆ ಮಾರಮ್ಮನ ದೇವಸ್ಥಾನದ ಬಳಿ ಕುಶಾಲತೋಪು ಸಿಡಿಸಲಾಯಿತು. ಈ ಮೂಲಕ ಸಿಡಿಮದ್ದಿನ ಶಬ್ಧವನ್ನು ಆನೆಗಳಿಗೆ ಪರಿಚಯಿಸಲಾಯಿತು.
ಅ.17ರಿಂದ ಮೈಸೂರಿನ ಪ್ರವಾಸಿ ತಾಣಗಳಿಗೆ ಪ್ರವೇಶ ನಿರ್ಬಂಧ
ಹೊರಾಂಗಣದಲ್ಲಿ ಪಿರಂಗಿಗಳಿಂದ ಸಿಡಿಮದ್ದು ಸಿಡಿಸಿದರೆ ಅರಮನೆಯ ವರಾಹ ದ್ವಾರಬಾಗಿಲು ಬಳಿಯ ಒಳಭಾಗದಲ್ಲಿ ಗಜಪಡೆ ನಿಂತಿತ್ತು. ಆದರೆ ಕುದುರೆಗಳನ್ನು ಮಾತ್ರ ಸಿಡಿಮದ್ದು ಸಿಡಿಸುವ ಸ್ಥಳದ ಬಳಿಯೇ ನಿಲ್ಲಿಸಲಾಗಿತ್ತು.
ಕುಶಾಲತೋಪು ಸಿಡಿಸಲು 7 ಫಿರಂಗಿ ಗಾಡಿಗಳ ಬಳಕೆ ಮಾಡಲಾಗುತ್ತದೆ. ಇಂದುಬೆಳಿಗ್ಗೆ ಸಿಎಆರ್ ನ 30 ಸಿಬ್ಬಂದಿ ಕುಶಾಲತೋಪು ತಾಲೀಮಿನಲ್ಲಿ ಭಾಗಿಯಾಗಿದ್ದರು.
ಈ ವೇಳೆ ಉಪಸ್ಥಿತರಿದ್ದ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೊರೊನಾ ಸಾಂಕ್ರಾಮಿಕ ರೋಗವನ್ನು ನಾವೆಲ್ಲರೂ ಎದುರಿಸುತ್ತಿದ್ದೇವೆ. ಕೊರೊನಾ ಇದೆ ಎಂದು ಹಬ್ಬಗಳು ಬರದೆ ಇರುವುದಿಲ್ಲ. ಆದರೆ ಹಬ್ಬ ಆಚರಣೆ ಮಾಡುವ ರೀತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಹಬ್ಬವನ್ನು ಆಚರಿಸಬೇಕಾಗಿದೆ ಎಂದರು.
ಗುರುವಾರ ಮೊದಲ ದಿನದ ಸಿಡಿಮದ್ದು ತಾಲೀಮು ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಇದೇ ರೀತಿ ಮುಂದಿನ ಭಾನುವರದವರೆಗೂ ನಡೆಯಲಿದೆ ಎಂದು ತಿಳಿದು ಬಂದಿದೆ.