ಮುಂದಿನ ಐದು ವರ್ಷದವರೆಗೆ ಕೆಎಸ್ ಒಯುಗೆ ಮಾನ್ಯತೆ
ಮೈಸೂರು, ಜುಲೈ 23: "ಕೆಎಸ್ ಒಯು ಮುಂದಿನ ಐದು ವರ್ಷಗಳವರೆಗೆ ವಿಶ್ವವಿದ್ಯಾಲಯ ಯುಜಿಸಿ ನಿಯಮಾವಳಿ ಅನ್ವಯ ಅನುಮತಿ ಪಡೆದುಕೊಂಡಿದ್ದು, ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಪ್ರವೇಶ ಪಡೆದುಕೊಳ್ಳಬಹುದು" ಎಂದು ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ವಿದ್ಯಾಶಂಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಈಗಾಗಲೇ ರಾಜ್ಯ ಮುಕ್ತ ವಿಶ್ವವಿದ್ಯಾಲಯ 2017ರಿಂದ 2023ರವರೆಗೆ ಮಾನ್ಯತೆ ಪಡೆದಿದ್ದು, ವಿದ್ಯಾರ್ಥಿಗಳು ಆತಂಕವಿಲ್ಲದೇ ಪ್ರವೇಶ ಪಡೆಯಬಹುದು. ದೇಶದ ಶೇ 50ಕ್ಕೂ ಹೆಚ್ಚು ಯುವಜನರು ಪದವಿ ಪೂರ್ಣಗೊಳಿಸಬೇಕು ಎಂಬ ಕೇಂದ್ರ ಸರ್ಕಾರದ ಉದ್ದೇಶಕ್ಕೆ ನಮ್ಮ ವಿಶ್ವವಿದ್ಯಾಲಯ ಎಲ್ಲಾ ರೀತಿಯಲ್ಲೂ ನೆರವಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಸ್ತುತ 51 ವಿವಿಧ ಕೋರ್ಸ್ ಗಳನ್ನು ಆರಂಭಿಸಲಾಗಿದ್ದು, ವಿದ್ಯಾರ್ಥಿಗಳು ತಮಗೆ ಆಸಕ್ತಿಯಿರುವ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಮಾಡಬಹುದು" ಎಂದರು.
"ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದಲ್ಲಿ ಹಲವು ಸಮಸ್ಯೆಗಳಿದ್ದು, ವಾರಕ್ಕೊಮ್ಮೆ ಸಪ್ತಾಹದ ಮೂಲಕ ಕಡತ ವಿಲೇವಾರಿ ಕಾರ್ಯ ಮಾಡಲಾಗುತ್ತಿದೆ. ನಾನು ಅಧಿಕಾರ ವಹಿಸಿಕೊಂಡ ನಂತರ 1,500 ಪ್ರಕರಣ ಇತ್ಯರ್ಥಗೊಳಿಸಿದ್ದು, 4 ಸಾವಿರ ಕಡತ ಬಾಕಿ ಉಳಿದಿವೆ. ಪರೀಕ್ಷಾ ವಿಭಾಗದಲ್ಲಿ ಸಮಸ್ಯೆ ಉಳಿಯದಂತೆ ನೋಡಿಕೊಳ್ಳಲು ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಲಾಗುವುದು" ಎಂದು ತಿಳಿಸಿದರು.

2019-20ನೇ ಸಾಲಿನಲ್ಲಿ ಪದವಿ ಪ್ರವೇಶಕ್ಕೆ ಜುಲೈ 25 ಕೊನೆಯ ದಿನವಾಗಿದೆ. ಆ. 21ರವರೆಗೆ 200 ರೂ ದಂಡ ಹಾಗೂ ಆ. 31ರವರೆಗೆ 400 ರೂ ದಂಡ ಸಹಿತ ಪ್ರವೇಶಾತಿಗೆ ಅವಕಾಶ ನೀಡಲಾಗಿದೆ. ಪ್ರಸಕ್ತ ವರ್ಷ 25 ಸಾವಿರ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾಲಯಕ್ಕೆ ಪ್ರವೇಶ ಮಾಡುವ ಗುರಿಯನ್ನು ಹೊಂದಲಾಗಿದೆ. ಪದವಿಗೆ ನೇರ ಹಾಗೂ ಆನ್ಲೈನ್ ಮೂಲಕ ಪ್ರವೇಶಕ್ಕೆ ಮತ್ತು ಶುಲ್ಕ ಪಾವತಿಗೆ ಅವಕಾಶ ನೀಡಲಾಗಿದೆ.
"ಮುಕ್ತ ವಿಶ್ವವಿದ್ಯಾಲಯದ ಕೇಂದ್ರ ಕಚೇರಿಯಲ್ಲಿ 500 ರೂ ಶುಲ್ಕದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ಆರಂಭಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಎಲ್ಲಾ ಪ್ರಾದೇಶಿಕ ಕೇಂದ್ರಗಳಲ್ಲಿ ಆರಂಭಿಸುವ ಯೋಜನೆಯಿದೆ. ಎಲ್ಲಾ ಪ್ರಾದೇಶಿಕ ಕಚೇರಿಗಳಲ್ಲಿ ಸುಸಜ್ಜಿತ ಗ್ರಂಥಾಲಯ ತೆರೆಯಲಾಗಿದೆ. ದೂರಶಿಕ್ಷಣ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ಲೇಸ್ ಮೆಂಟ್ ವಿಭಾಗ ರಚಿಸಲಾಗಿದ್ದು, ವಿಶೇಷ ಅಧಿಕಾರಿ ನೇಮಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ವಿಶ್ವಾಸ ಹೆಚ್ಚುವುದರ ಜೊತೆಗೆ ಪ್ರವೇಶಾತಿ ಹೆಚ್ಚಳವಾಗುವ ನಿರೀಕ್ಷೆಯಿದೆ" ಎಂದು ತಿಳಿಸಿದರು.












Click it and Unblock the Notifications