ಲಿಂಗಾಂಬೂದಿಪಾಳ್ಯ ಕೆರೆಗೆ ಹರಿಯಲಿದೆ ಕೆಆರ್ಎಸ್ ನೀರು
ಮೈಸೂರು, ಜನವರಿ 21: "ಲಿಂಗಾಂಬೂದಿಪಾಳ್ಯ ಕೆರೆಗೆ ಕೆಆರ್ಎಸ್ನಿಂದ ನೀರು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದೆ. ಕೆರೆಗೆ ಕೊಳಚೆ ನೀರು ಹೋಗುತ್ತಿರುವುದನ್ನು ತಡೆಗಟ್ಟಲು ಕ್ರಮಕೈಗೊಳ್ಳಿ" ಎಂದು ಅಧಿಕಾರಿಗಳಿಗೆ ಶಾಸಕ ಜಿ. ಟಿ. ದೇವೇಗೌಡ ಸೂಚನೆ ನೀಡಿದರು.
ಗುರುವಾರ ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿ. ಟಿ. ದೇವೇಗೌಡ ಅವರು, ಕೆರೆಗೆ ಹೋಗುತ್ತಿರುವ ಕೊಳಚೆ ನೀರನ್ನು ತೆಡೆಯುವ ಸಂಬಂಧ ಅಧಿಕಾರಿಗಳ ಸಭೆಯನ್ನು ಶಾಸಕರ ಕಛೇರಿಯಲ್ಲಿ ನಡೆಸಿದರು.
"ಮೈಸೂರು ನಗರದ ದಟ್ಟಗಳ್ಳಿಗೆ ಹೊಂದಿಕೊಂಡಂತೆ ಇರುವ ಲಿಂಗಾಬೂದಿಕೆರೆಗೆ ಒಳಚರಂಡಿ ನೀರು ಬರುತ್ತಿದೆ. ಇದರಿಂದ ಕೆರೆ ಮಲಿನಗೊಳ್ಳುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು" ಎಂದು ಪಾಲಿಕೆ ಹಾಗೂ ಮೂಡಾ ಆಯುಕ್ತರಿಗೆ ಸೂಚನೆ ನೀಡಿದರು.

ಮಳೆ ನೀರು ಚರಂಡಿಗೆ ಗ್ರೀಲ್ ಅಳವಡಿಕೆ ಮಾಡಿ ಎಂದು ಸೂಚನೆ ನೀಡಿದ ಶಾಸಕರು, ಪ್ರತಿ ಹದಿನೈದು ದಿನಕ್ಕೊಮ್ಮೆ ಗ್ರಿಲ್ ಸ್ವಚ್ಚಗೊಳಿಸಲು ಸೂಚಿಸಿದರು. ನಂತರ ವಿಜಯನಗರ 3ನೇ ಹಂತದ ಒಳಚರಂಡಿ ಸಮಸ್ಯೆ ಗೆ ಸಂಬಂಧಿಸಿದಂತೆ ಕೂಡಲೆ ಒಳಚರಂಡಿ ಕಾಮಗಾರಿ ಕೈಗೊಳ್ಳಲು ನಿರ್ದೇಶನ ನೀಡಿದರು.
ಮೂಡಾವತಿಯಿಂದ ಕಾಮಗಾರಿ ಕೈಗೊಳ್ಳುವುದಾಗಿ ಮೂಡಾ ಆಯುಕ್ತರು ಶಾಸಕರಿಗೆ ತಿಳಿಸಿದರು. ಸಭೆಯಲ್ಲಿ ಪಾಲಿಕೆ ಆಯುಕ್ತರಾದ ಗುರುದತ್ತ ಹೆಗಡೆ, ಡಿಎಫ್ಓ ಪ್ರಶಾಂತ್, ಮೂಡಾ ಆಯುಕ್ತರಾದ ನಟೇಶ್, ಮೂಡಾ ಅಧೀಕ್ಷಕ ಅಭಿಯಂತರಾದ ಶಂಕರ್ ಮುಂತಾದವರು ಇದ್ದರು.












Click it and Unblock the Notifications