ಬಿ.ಎಲ್.ಸಂತೋಷ್ ಅವರಿಂದ ಸನ್ಮಾನ ಸ್ವೀಕರಿಸಿದ ದಿನೇಶ್ ಗುಂಡೂರಾವ್
ಮೈಸೂರು, ಜ 24: ಜಿಲ್ಲೆಯ ನಂಜನಗೂಡು ತಾಲೂಕಿನಲ್ಲಿರುವ ಶ್ರೀಕ್ಷೇತ್ರ ಸುತ್ತೂರಿನಲ್ಲಿ ವಾರ್ಷಿಕ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಜಾತ್ರಾ ಮಹೋತ್ಸವ ವಿಜ್ರುಂಭಣೆಯಿಂದ ನಡೆಯುತ್ತಿದೆ. ಜಾತ್ಯಾತೀತವಾಗಿ ಎಲ್ಲಾ ಪಕ್ಷಗಳ ಮುಖಂಡರು ಈ ಜಾತ್ರೆಯಲ್ಲಿ ಭಾಗವಹಿಸಿದ್ದಾರೆ.
ಶುಕ್ರವಾರ (ಜ 24) ನಡೆದ ಕೃಷಿ ವಿಚಾರ ಸಂಕಿರಣದಲ್ಲಿ ದಿನೇಶ್ ಗುಂಡೂರಾವ್, ಬಿ.ಎಲ್.ಸಂತೋಷ್, ಪ್ರತಾಪ್ ಸಿಂಹ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.
"ಸುತ್ತೂರು ಶ್ರೀಕ್ಷೇತ್ರವು ಪ್ರತಿವರ್ಷ ಏರ್ಪಡಿಸುವ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಜಾತ್ರಾ ಮಹೋತ್ಸವದಲ್ಲಿ ಇಂದು ಪಾಲ್ಗೊಂಡೆನು. ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಕೃಷಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದೆನು" ಎಂದು ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿದ್ದಾರೆ.

ಈ ಮಹೋತ್ಸವದ ವೇಳೆ ದಿನೇಶ್ ಗುಂಡೂರಾವ್ ಅವರನ್ನು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್.ಸಂತೋಷ್ ಸನ್ಮಾನಿಸಿದ್ದು ವಿಶೇಷವಾಗಿತ್ತು.
ಸುತ್ತೂರು ಶ್ರೀಗಳ ಸಮ್ಮುಖದಲ್ಲಿ ದಿನೇಶ್ ಗುಂಡೂರಾವ್ ಅವರಿಗೆ ಶಾಲು ಹೊದಿಸಿ, ಹಾರ ಹಾಕಿ, ಸ್ಮರಣಿಕೆ ನೀಡಿ, ಸಂತೋಷ್ ಅವರು ಸನ್ಮಾನಿಸಿದರು.
ಜನವರಿ 21ರಿಂದ ಆರಂಭವಾಗಿರುವ ಈ ಮಹೋತ್ಸವ ಜನವರಿ 26ಕ್ಕೆ ಮುಕ್ತಾಯಗೊಳ್ಳಲಿದೆ. 6 ದಿನಗಳ ಈ ಜಾತ್ರೆಯಲ್ಲಿ ಗ್ರಾಮೀಣ ಸೊಗಡಿನ ಹಗ್ಗಜಗ್ಗಾಟ, ಕೆಸರುಗದ್ದೆ ಓಟ, ಗೊಬ್ಬರದ ಮೂಟೆ ಹೆಗಲ ಮೇಲೆ ಹೊತ್ತು ಓಟ, ಮುಂತಾದ ಕ್ರೀಡೆಗಳು ಜನರನ್ನು ರಂಜಿಸಿದೆ.












Click it and Unblock the Notifications