"ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಚಿಕಿತ್ಸೆ ದರ ಶಾಕ್ ಆಗುವಂತಿದೆ"
ಮೈಸೂರು, ಜೂನ್ 27: ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ವೈರಸ್ ಚಿಕಿತ್ಸೆಗೆ ಸರ್ಕಾರ ನಿಗದಿ ಪಡಿಸಿರುವ ದರ ನೋಡಿದರೆ ಆಘಾತವಾಗುವಂತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಆರೋಪಿಸಿದೆ.
Recommended Video
ಮೈಸೂರು ಕಾಂಗ್ರೆಸ್ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಮಾತನಾಡಿ, "ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿನ ಚಿಕಿತ್ಸೆಗಾಗಿ ದಿನದ ಲೆಕ್ಕದಲ್ಲಿ ಚಿಕಿತ್ಸಾ ದರ ನಿಗದಿಪಡಿಸಿದೆ. ಓರ್ವ ರೋಗಿ ಕನಿಷ್ಠ 14 ದಿನ ಆಸ್ಪತ್ರೆಯಲ್ಲಿರಬೇಕಾಗುತ್ತದೆ. ಅಂದರೆ ಸರ್ಕಾರ ನಿಗದಿ ಪಡಿಸಿರುವ ಪ್ರಕಾರ ದುಬಾರಿ ಬಿಲ್ ಪಾವತಿಸಬೇಕಾಗುತ್ತದೆ. ಬಿಜೆಪಿ ಸರ್ಕಾರದ ಉದ್ದೇಶ ಜನರ ಜೀವ ಉಳಿಸುವುದೋ ಅಥವಾ ಜೀವ ತೆಗೆಯುವುದೋ" ಎಂದು ಪ್ರಶ್ನಿಸಿದರು.
ಕೊರೊನಾ ವೈರಸ್ ನಿಯಂತ್ರಿಸುವಲ್ಲಿ ಕೇಂದ್ರ-ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಸರ್ಕಾರ ನಿರ್ವಹಿಸಬೇಕಾಗಿರುವ ಜವಾಬ್ದಾರಿಯನ್ನು ಜನರ ಹೆಗಲಿಗೆ ವರ್ಗಾಯಿಸಲಾಗಿದೆ. ಕೊರೊನಾ ರೋಗಿಗಳಿಗೆ ಎಲ್ಲಾ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಬೇಕು. ಜನರಿಗೆ ಉಚಿತ ಚಿಕಿತ್ಸೆ ನೀಡುತ್ತೇವೆ. ಸಹಾಯ ಮಾಡಬೇಕು ಎಂದು ಹೇಳಿ ಜನರಿಂದ ಪಿಎಂ ಕೇರ್ಸ್ ಮತ್ತು ಸಿಎಂ ಪರಿಹಾರ ನಿಧಿಗಳಿಗೆ ಲಕ್ಷಾಂತರ ಕೋಟಿ ಪಡೆದಿದ್ದೀರಿ, ಈ ಹಣ ಏನಾಯಿತು? ಪ್ರಪಂಚದಾದ್ಯಂತ ಸ್ಟ್ಯಾಂಡರ್ಡ್ ಟ್ರೀಟ್ ಮೆಂಟ್ ಪ್ರೊಟೋಕಾಲ್ ಪ್ರಕಾರ ಉಚಿತ ಚಿಕಿತ್ಸೆಯನ್ನು ಸರ್ಕಾರ ನೀಡಬೇಕು ಎಂದು ಆಗ್ರಹಿಸಿದರು.

ಲಾಕ್ ಡೌನ್ ನಿಂದ ಜನರ ದುಡಿಮೆಯ ಅವಕಾಶವೆಲ್ಲ ಬಂದ್ ಆಗಿವೆ. ಬಹುತೇಕ ಜನರು ಕೆಲಸ ಕಳೆದುಕೊಂಡಿದ್ದಾರೆ. ಜನರ ಬಳಿ ಊಟಕ್ಕೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಜನರಿಂದ ಸರ್ಕಾರ ಈ ರೀತಿ ಹಣ ವಸೂಲು ಮಾಡುವುದು ಅಮಾನವೀಯ ಎಂದು ವಾಗ್ದಾಳಿ ನಡೆಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಜಾಗವೇ ಇಲ್ಲದಂತಾಗಿದೆ. ರಾಜ್ಯ ಸರ್ಕಾರ 35,000 ವೆಂಟಿಲೇಟರ್ ಗೆ ಮನವಿ ಮಾಡಿದರೆ, ಕೇಂದ್ರ ಸರ್ಕಾರ ಕೇವಲ 90 ವೆಂಟಿಲೇಟರ್ ಗಳನ್ನು ನೀಡಿದೆ. ಈಗಲಾದರೂ ಬಿಜೆಪಿಯ ಜನ ವಿರೋಧಿ ನೀತಿಯನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದು ಕಿಡಿ ಕಾರಿದರು.












Click it and Unblock the Notifications