ಮೈಸೂರು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ ಹಣ್ಣುಗಳ ರಾಜ ಮಾವು
ಮೈಸೂರು, ಮೇ 16 : ಈ ಹಣ್ಣಿನ ಹೆಸರು ಕೇಳಿದರೆ ಸಾಕು ಘಮ್ಮೆನ್ನುವ ವಾಸನೆ ಮೂಗಿಗೇ ಬಡೆಯದೇ ಇರಲಾರದು. ತಿನ್ನಲು ಮನಸ್ಸು ಮಾಡದೇ ಇರದ ಮನುಜನೇ ಇಲ್ಲ. ಹೌದು, ಹಣ್ಣುಗಳ ರಾಜನೆಂದು ಖ್ಯಾತಿ ಪಡೆದಿರುವ ಮಾವಿನಹಣ್ಣು ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಅದರೊಟ್ಟಿಗಿನ ಸಿಹಿಯೊಂದಿಗೆ ಬೆಲೆಯೂ ಕೂಡ ದುಬಾರಿಯಾಗಿದೆ.
ಮಾವಿನಹಣ್ಣು ಮಕ್ಕಳಿಂದ ವಯಸ್ಕರ ವರೆಗೂ ಎಲ್ಲರೂ ಇಷ್ಟ ಪಡುತ್ತಾರೆ. ಮೊದಲು ಕಾಯಿ ಬಲಿತ ನಂತರ ಕಿತ್ತು ನೈಸರ್ಗಿಕವಾಗಿ ಹಣ್ಣು ಮಾಡಲಾಗುತ್ತಿತ್ತು. ಈಗ ಅವಧಿ ಪೂರ್ವದಲ್ಲೇ ಹಣ್ಣು ಮಾಗಿಸಲು ರಾಸಾಯನಿಕ ದ್ರವ (ಕಾರ್ಬೈಡ್) ಹಾಗೂ ಪೌಡರ್ ಬಳಸಲಾಗುತ್ತದೆ. ಅವಧಿಗೆ ಮೊದಲೇ ಮಾಗಿಸಿದ ಹಣ್ಣುಗಳು ನೋಡಲು ಆಕರ್ಷಕವಾಗಿ ಕಂಡರೂ ತಿನ್ನಲು ಯೋಗ್ಯವಲ್ಲ. ಈ ಬಗ್ಗೆ ಎಚ್ಚರಿಕೆಯಿಂದ ಹಣ್ಣಿನ ರುಚಿ, ಬಣ್ಣ ಮತ್ತು ಗಾತ್ರ ಪರಿಕ್ಷಿಸಿ ಖರೀದಿಸಬೇಕಾಗಿದೆ.

ಯಾವ ಹಣ್ಣಿಗೆ ಎಷ್ಟು ಬೆಲೆ ?
ಆಪೂಸ್, ತೊತಾಪುರಿ, ಕಲಮಿ, ಬಗನ್ಪಲ್ಲಿ, ಮಲ್ಲಿಕಾ, ರತ್ನಗಿರಿ ಆಪೂಸ್, ಮಲ್ಗೊವಾ, ರಸಪೂರಿ, ಬಾದಾಮಿ ತಳಿಯ ಮಾವಿನ ಹಣ್ಣು ಲಭ್ಯವಿದೆ. ರಸಪೂರಿ ಮಾವಿನ ಹಣ್ಣು ಕೆ.ಜಿಗೆ 80, ರೂ. ಬಾದಾಮಿ ಕೆ. ಜಿ ಗೆ 120 ರೂ., ಮಲ್ಲಿಕಾ 80 ರೂ. ರಂತೆ ಮಾರಾಟವಾಗುತ್ತಿದೆ.
ಜಿಲ್ಲೆಗೆ ಅಂದಾಜು 5 ಟನ್ ಮಾವಿನಹಣ್ಣು ಆಮದು ಆಗುತ್ತಿದೆ. ಜಿಲ್ಲೆಯಲ್ಲಿ ಮಾವು ಬೆಳೆಯುವ ಪ್ರಮಾಣ ಕಡಿಮೆ. ತಮಿಳುನಾಡಿನ ಸೇಲಂ, ಕೃಷ್ಣಗಿರಿ ಭಾಗದಿಂದ ನೀಲಂ ತಳಿ ಸೇರಿದಂತೆ ವಿವಿಧ ತಳಿಯ ಮಾವಿನ ಹಣ್ಣು ಮಾರುಕಟ್ಟೆಗೆ ಆಗಮಿಸಲಿದೆ.
ಈ ಬಾರಿ ರಾಜ್ಯದ ವಿವಿಧ ಭಾಗಗಳಲ್ಲಿ ಅಕಾಲಿಕ ಮತ್ತು ಅಲಿಕಲ್ಲು ಮಳೆಯಾಗಿದ್ದು, ಇದರಿಂದ ಮಾವಿನ ಫಸಲಿಗೆ ಹಾನಿಯಾಗಿದೆ. ಆದ್ದರಿಂದ ಈ ಬಾರಿ ಮಾವಿನಹಣ್ಣಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಹಣ್ಣಿನ ವ್ಯಾಪಾರಿ ಬಸಪ್ಪ.

ಕಿತ್ತಲೆಯೂ ದುಬಾರಿ : ಉಳಿದ ಸಿಂಧೂರ, ಮಲಗೋಬಾ, ತೋತಾಪುರಿ ಬರಬೇಕಿದೆ. ಶೇ 10ರಿಂದ 15ರಷ್ಟು ಮಾತ್ರ ಮಾವಿನಹಣ್ಣುಗಳು ಬಂದಿವೆ. ಮಲಗೋಬಾ ಹಣ್ಣುಗಳನ್ನು ರೈತರು ನೇರವಾಗಿ ಅಂಗಡಿಗಳಿಗೆ ಮಾರುತ್ತಿದ್ದಾರೆ. ಬೇಡಿಕೆ ಇದೆ. ಆದರೆ, ಕಡಿಮೆ ಸರಬರಾಜು ಇದೆ ಎನ್ನುತ್ತಾರೆ ಆರ್ಎಂಸಿ ಯಾರ್ಡ್ನ ಮೈಸೂರು ಫ್ರುಟ್ ಅಸೋಸಿಯೇಷನ್ ಅಧ್ಯಕ್ಷ ಮಾಬು ಶರೀಫ್ ಪಥರ್ ಬಾಬು.
ಆರ್ಎಂಸಿ ಯಾರ್ಡ್ನಲ್ಲಿ ಬಾದಾಮಿ ಕೆಜಿಗೆ 35-40 ರೂ. ರಸಪುರಿ 38-40 ರೂ. ಸಿಂಧೂರ 30ರೂ. , ಮಲಗೋಬಾ 70ರೂ , ತೋತಾಪುರಿ 20-30 ರೂ ಸಗಟು ದರದಲ್ಲಿ ಕಾಯಿಗಳನ್ನೇ ಮಾರಲಾಗುತ್ತಿದೆ. ಸಗಟು ಖರೀದಿಸಿದವರು ಹಣ್ಣಾಗಿಸುತ್ತಾರೆ.

ಇನ್ನೂ 2-3 ಮಳೆಯಾಗಬೇಕು. 15-20 ದಿನಗಳಲ್ಲಿ ಸೀಜನ್ ಶುರುವಾಗಲಿದೆ. ಆಗ ದರ ಕಡಿಮೆ ಆಗಬಹುದು ಎನ್ನುತ್ತಾರೆ ದೇವರಾಜ ಮಾರುಕಟ್ಟೆಯ ಹಣ್ಣಿನ ವ್ಯಾಪಾರಿ ನಿಯಾಜ್ ಅಹಮ್ಮದ್. ಇದರೊಂದಿಗೆ ಕಿತ್ತಲೆಯೂ ದುಬಾರಿ ದರದಲ್ಲಿದೆ. ನಾಗಪುರ ಕಿತ್ತಲೆ 70-80ರೂ ಹಾಗೂ ಕೊಡಗಿನ ಕಿತ್ತಲೆ 70-80ರೂ ದರದಲ್ಲಿ ಲಭ್ಯವಿದೆ. ಮಾಲ್ ಕಡಿಮೆ. ಅದಕ್ಕೆ ರೇಟ್ ಜಾಸ್ತಿ. 15-20 ದಿನಗಳು ಕಳೆದ ಮೇಲೆ ದರ ಕಡಿಮೆ ಆಗಬಹುದು ಎನ್ನುತ್ತಾರೆ ದೇವರಾಜ ಮಾರುಕಟ್ಟೆಯ ಹಣ್ಣಿನ ವ್ಯಾಪಾರಿ ಬಿ.ಎಂ.ಇಸ್ಮಾಯಿಲ್.
ಆದರೆ ಹಣ್ಣುಗಳ ರಾಜ ಮಾವು ಪ್ರಿಯರಿರಿಗೊಂದು ಎಚ್ಚರಿಕೆ. ಮಾವಿನಹಣ್ಣನ್ನು ಮರದಲ್ಲಿ ಹಣ್ಣು ಮಾಡಿತಿಂದರೇ ಚೆಂದ. ಕಾಯಿ ತಂದು ರಾಸಾಯನಿಕ ಉಪಯೋಗಿಸಿ ಹಣ್ಣು ಮಾಡಿರುವುದರಿಂದ ಚೆನ್ನಾಗಿ ತೊಳೆದು ತಿನ್ನಿ. ಕೊಂಡು ತಿನ್ನುವ ಮುನ್ನ ಮಾವಿನಹಣ್ಣನ್ನು ಒಮ್ಮೆ ಪರಿಶೀಲಿಸಿ ತಿನ್ನಿ ಎಂಬುದೇ ನಮ್ಮ ಆಶಯ ಅಷ್ಟೇ. ಸೋ ತಿನ್ನೋ ಮುಂಚೇ ಬಿ ಕೇರ್ ಫುಲ್












Click it and Unblock the Notifications