ಕೆಆರ್ಎಸ್ ಜಲಾಶಯಕ್ಕೆ 18,655 ಕ್ಯೂಸೆಕ್ಸ್ ಒಳಹರಿವು; ಕಬಿನಿಗೆ ಭಾರಿ ಪ್ರಮಾಣದ ಒಳಹರಿವು
ಕಳೆದ ಒಂದು ವಾರದಿಂದ ಕೊಡಗು ಹಾಗೂ ಕೇರಳದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಎಚ್.ಡಿ.ಕೋಟಿಯ ಕಬಿನಿ ಜಲಾಶಯ ಭರ್ತಿಯಾಗಿದ್ದು, ರೈತರ ಜೀವನಾಡಿ ಕೆಆರ್ಎಸ್ ಅಣೆಕಟ್ಟು ಒಳಹರಿವು ಹೆಚ್ಚಳವಾಗಿದೆ.
ಕೇವಲ 6 ಸಾವಿರ ಕ್ಯೂಸೆಕ್ ಇದ್ದ ಒಳ ಹರಿವಿನ ಪ್ರಮಾಣ, ಸೋಮವಾರ ಬೆಳಗಿನ ವೇಳೆಗೆ 20 ಸಾವಿರಕ್ಕೆ ಏರಿಕೆಯಾಗಿದೆ. ಹಾಗಾಗಿ ಕನ್ನಂಬಾಡಿ ಕಟ್ಟೆಯ ನೀರಿನ ಮಟ್ಟ 106 ದಾಟಿದೆ. ಕೊಡಗು ಜಿಲ್ಲೆ ಭಾಗಮಂಡಲದ ತ್ರಿವೇಣಿ ಸಂಗಮ ಸಂಪೂರ್ಣ ಭರ್ತಿಯಾಗಿದ್ದು, ನದಿಯಲ್ಲಿ ನೀರು ಹರಿವಿನ ಪ್ರಮಾಣ ಹೆಚ್ಚಾಗಿದೆ.

ಕಳೆದ ವರ್ಷ ಉತ್ತಮ ಮಳೆಯಾಗದೆ ರೈತರು ಬೆಳೆನಷ್ಟ ಅನುಭವಿಸಿದ್ದರು. ಅಲ್ಲದೆ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿತ್ತು. ರ್ನಾಟಕ-ತಮಿಳುನಾಡು ನೀರಿನ ವ್ಯಾಜ್ಯವೂ ಸಮಸ್ಯೆಯನ್ನು ಮತ್ತಷ್ಟು ಗಟ್ಟಿಯಾಗಿಸಿತ್ತು. ಆದರೆ, ಈ ಬಾರಿ ಉತ್ತಮ ಮಳೆಯಾಗುವ ಲಕ್ಷಣ ಗೋಚರಿಸಿದ್ದು, ನೀರಿನ ಸಮಸ್ಯೆಗೆ ಪರಿಹಾರ ಸಿಗುವ ವಿಶ್ವಾಸವನ್ನು ರೈತರು ವ್ಯಕ್ತಪಡಿಸಿದ್ದಾರೆ.
ಭರ್ತಿಯಾದ ಕಬಿನಿ
ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದ ಭರ್ತಿಗೆ ಕೇವಲ 1 ಅಡಿ ಮಾತ್ರ ಬಾಕಿ ಇದ್ದು, ಜಲಾಶಯದ ಗರಿಷ್ಠ ಮಟ್ಟ 2284 ಅಡಿಗಳಾಗಿದ್ದು, ಜಲಾಶಯ ಮಟ್ಟ 2283 ಅಡಿಗೆ ಏರಿದೆ. ಜಲಾಶಯಕ್ಕೆ 23 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 25 ಸಾವಿರ ಕ್ಯೂಸೆಕ್ ನೀರನ್ನು ಜಲಾಶಯದ ಮುಂದಿರುವ ಸುಭಾಷ್ ವಿದ್ಯುತ್ ಉತ್ಪಾದನಾ ಘಟಕದ ಮೂಲಕ ನದಿಗೆ ಬಿಡಲಾಗುತ್ತಿದೆ.
ಕಳೆದ 10 ವರ್ಷಗಳಲ್ಲಿ ಜುಲೈ ಮೊದಲ ವಾರದಲ್ಲಿ ಜಲಾಶಯ ಭರ್ತಿಯಾಗುತ್ತಿರುವುದು ಇದು ಎರಡನೇ ಬಾರಿ. 2020 ರಲ್ಲಿ ಜುಲೈ 4 ರಂದೇ ಜಲಾಶಯ ಭರ್ತಿಯಾಗಿತ್ತು. ಜಲಾಶಯದ ಸಾಮರ್ಥ್ಯ 19.52 ಟಿಎಂಸಿ ಆಗಿದ್ದು, ಸದ್ಯಕ್ಕೆ ಜಲಾಶಯದಲ್ಲಿ 17.50 ಟಿಎಂಸಿ ನೀರು ಇದೆ. ಬೆಂಗಳೂರು, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗೆ ಕುಡಿಯುವ ನೀರನ್ನು ಕೊಡಬೇಕಾಗಿರುವುದರಿಂದ ಜಲಾಶಯದಿಂದ 2 ಸಾವಿರ ಕ್ಯೂಸೆಕ್ ನೀರನ್ನು ಬಿಡಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ತಂಬಾಕು ಬೆಳೆಗೆ ಸಂಜೀವಿನಿ ಮಳೆ ಇಲ್ಲದೆ ಸೊರಗುತ್ತಿದ್ದ ತಂಬಾಕು ಬೆಳೆಗೆ ಈ ಮಳೆಯು ಸಂಜೀವಿನಿಯಂತಾಗಿದೆ. ಇದರಿಂದ ತಂಬಾಕು ಹಾಗೂ ಶುಂಠಿ ಬೆಳೆಗಾರರು ಹರ್ಷಗೊಂಡಿದ್ದಾರೆ. ಇದೇ ರೀತಿ ಮಳೆ ಮುಂದುವರಿದಲ್ಲಿ ತಂಬಾಕು ಹಾಗೂ ಶುಂಠಿ ಬೆಳೆ ಕೊಳೆಯುವ ಭೀತಿಯೂ ಎದುರಾಗಿದೆ ಎನ್ನುತ್ತಾರೆ ರೈತರು.












Click it and Unblock the Notifications