ಮಹಿಷಾಸುರನಿಗೆ ಅಗ್ರ ಪೂಜೆ ಸಲ್ಲಿಸಲು ಅವಕಾಶ ನಿರಾಕರಿಸಿದ ಹೈಕೋರ್ಟ್
ಬೆಂಗಳೂರು.ಸೆ.25: ಐತಿಹಾಸಿಕ ಮೈಸೂರು ದಸರಾ ವೇಳೆ ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನ ಪ್ರತಿಮೆಗೆ ಅಗ್ರಪೂಜೆ ಸಲ್ಲಿಸಲು ಅವಕಾಶ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಮೈಸೂರಿನ ಅಶೋಕಪುರಂನ ವಕೀಲ ಪಿ.ಚಂದ್ರಶೇಖರ್, ದಸರಾ ಹಬ್ಬದ ಸಂದರ್ಭದಲ್ಲಿ ಮಹಿಷನ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು ಮೈಸೂರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದ್ದರು. ಆದರೆ ಅರ್ಜಿದಾರರೊಬ್ಬರ ಮಧ್ಯಂತರ ಮನವಿಯನ್ನು ನ್ಯಾಯಾಲಯ ತಳ್ಳಿ ಹಾಕಿದೆ.
ಆ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯಪೀಠ ಮಹಿಷಾಸುರ ಪ್ರತಿಮೆಯನ್ನು ಪೂಜೆ ಮಾಡಿದ ನಂತರ ಚಾಮುಂಡಿ ದೇವತೆಗೆ ಪೂಜೆ ಸಲ್ಲಿಸಿದ ಬಗ್ಗೆ ಯಾವುದಾದರೂ ಅಧಿಕೃತ ದಾಖಲೆಗಳಿದ್ದರೆ ಅವುಗಳನ್ನು ಕೋರ್ಟ್ಗೆ ಸಲ್ಲಿಸಿ ಎಂದು ಅರ್ಜಿದಾರರ ಪರ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ.
ದಸರಾ ಮಹೋತ್ಸವಕ್ಕೆ ಹೈ ಅಲರ್ಟ್; ಪೊಲೀಸ್ ಸಿದ್ಧತೆ ಬಗ್ಗೆ ಇಲ್ಲಿದೆ ಮಾಹಿತಿ
ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮೈಸೂರು ಜಿಲ್ಲಾಧಿಕಾರಿ, ಮೈಸೂರು ನಗರ ಪೊಲೀಸ್ ಕಮಿಷನರ್, ಮೈಸೂರು ನಗರ ಕೆ.ಆರ್.ಪೊಲೀಸ್ ಠಾಣೆ ಅಧಿಕಾರಿ, ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗದ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.
ನ್ಯಾಯಪೀಠ, ಮಹಿಷಾಸುರನ ಮೂರ್ತಿಗೆ ಪೂಜೆ ಸಲ್ಲಿಸಬೇಕೆಂಬುದಕ್ಕೆ ಇತಿಹಾಸವನ್ನು ರಚಿಸಿದ ಸೂರ್ಯನಾಥ ಕಾಮತ್, ಫ್ರಾನ್ಸಿಸ್ ಬುಚನನ್, ಕೆ.ಎ.ನೀಲಕಂಠ ಶಾಸ್ತ್ರಿ ಅವರುಗಳ ಕೃತಿಗಳಲ್ಲಿ ಯಾವ ಉಲ್ಲೇಖವೂ ಇಲ್ಲ. ಮೈಸೂರು ಗೆಜೆಟಿಯರ್, ಪ್ರಸಾರಾಂಗದ ಪುಸ್ತಕಗಳಲ್ಲಾಗಲಿ ಪ್ರಸ್ತಾಪವಿಲ್ಲ, ಹಾಗಾಗಿ ಪರಿಗಣಿಸುವುದೇ ಎಂದು ನ್ಯಾಯಪೀಠ ಪ್ರಶ್ನಿಸಿತು.
'ರಾಕ್ಷಸರು ಎಂದಾಕ್ಷಣ ಅವರೆಲ್ಲಾ ಕೆಟ್ಟವರೇನೂ ಅಲ್ಲ. ಅಂತೆಯೇ, ದೇವತೆಗಳು ಎಂದಾಕ್ಷಣ ಯಾವ ತಪ್ಪೂ ಮಾಡದೇ ಇರುವವರೇನಲ್ಲ. ಅವರಲ್ಲೂ ಕೆಟ್ಟವರಿರಬಹುದು, ಎಲ್ಲವನ್ನೂ ಅವರವರ ಗುಣಗಳನ್ನು ಪರಿಗಣಿಸಿ ತೀರ್ಮಾನಿಸಬೇಕು' ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟಿತು.
'ಪುರಾಣಗಳು ವಿವರಿಸುವಂತೆ ದೇವತೆಗಳು ಮತ್ತು ರಾಕ್ಷಸರು ಕಶ್ಯಪನ ಸಂತತಿಯೇ. ರಾವಣ ರಾಕ್ಷಸನಾಗಿದ್ದರೂ ಅವನಲ್ಲಿ ಸಾಕಷ್ಟು ಒಳ್ಳೆಯ ಗುಣಗಳಿದ್ದವು. ಅವನಿಗಾಗಿ ಉತ್ತರ ಭಾರತ, ಶ್ರೀಲಂಕಾ, ಬಾಲಿ, ಸುಮಾತ್ರಾ, ಇಂಡೋನೇಷ್ಯಾದಂತಹ ದೇಶಗಳಲ್ಲಿ ದೇವಾಲಯಗಳನ್ನೇ ನಿರ್ಮಿಸಿರುವುದನ್ನು ನೋಡಬಹುದಾಗಿದೆ' ಎಂದು ನ್ಯಾಯಾಲಯ ಹೇಳಿತು.
ಅರ್ಜಿದಾರರು, ಕಳೆದ ಮೂರು ವರ್ಷಗಳಿಂದ ಮಹಿಷ ಪ್ರತಿಮೆಯ ಪೂಜೆಗೆ ಜಿಲ್ಲಾಡಳಿತ ಅಡ್ಡಿಪಡಿಸುತ್ತಿದೆ. ಆ ಕುರಿತು ತಮ್ಮ ಮನವಿಯನ್ನು ಪರಿಗಣಿಸುತ್ತಿಲ್ಲ ಎಂದು ಹೈಕೋರ್ಟ್ ಮೊರೆ ಹೋಗಿದ್ದಾರೆ