ಮಳೆಗಾಗಿ ದೇಗುಲದಲ್ಲಿ ಪೂಜೆ: ಪ್ರಗತಿಪರರ ಖಂಡನೆ
ಮೈಸೂರು, ಜೂನ್ 6: ರಾಜ್ಯದಲ್ಲಿ ಬರಗಾಲ ಹಿನ್ನೆಲೆ, ಮಳೆಗಾಗಿ ರಾಜ್ಯದ ವಿವಿಧ ದೇವಾಲಯಗಳಲ್ಲಿ ಸರ್ಕಾರದ ವತಿಯಿಂದ ವಿಶೇಷ ಪೂಜೆಗಳು ನಡೆಯುತ್ತಿವೆ. ಇಂದು ಮೈಸೂರಿನ ಅರಮನೆಯ ದೇವಾಲಯಗಳಲ್ಲೂ ಮಳೆಗಾಗಿ ವಿಶೇಷ ಪೂಜೆ ನಡೆಯಿತು.
ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಸುವಂತೆ ರಾಜ್ಯ ಸರ್ಕಾರ ಮುಜರಾಯಿ ಇಲಾಖೆಗೆ ಸೂಚಿಸಿದ್ದು, ಮುಜರಾಯಿ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದೆ. ಇದರಿಂದ, ಪರ್ಜನ್ಯ ಜಪ, ಪಂಚಾಮೃತ ಅಭಿಷೇಕ ನೆರವೇರಿಸಲಾಯಿತು. ಬೆಳಗಿನ ಬ್ರಾಹ್ಮೀ ಮಹೂರ್ತದಲ್ಲಿ ಮೈಸೂರಿನ ನಾಡದೇವತೆ ಚಾಮುಂಡೇಶ್ವರಿ, ಅರಮನೆ ತ್ರಿನೇಶ್ವರಸ್ವಾಮಿ, ನಂಜನಗೂಡು ಶ್ರೀಕಂಠೇಶ್ವರ ಸನ್ನಿಧಿಯಲ್ಲೂ ವಿಶೇಷ ಪೂಜೆ ಹಾಗೂ ಪರ್ಜನ್ಯ ಹೋಮ ನಡೆದವು.
ಮಳೆಗಾಗಿ ಕಿಗ್ಗಾದಲ್ಲಿ ಪರ್ಜನ್ಯ ಹೋಮ ನಡೆಸಿದ ಡಿ.ಕೆ.ಶಿವಕುಮಾರ್
ಪ್ರಜ್ಞಾವಂತರ ವಿರೋಧ: ಮಳೆ ಬರುವಂತೆ ದೇವಾಲಯಗಳಲ್ಲಿ ಪೂಜೆ, ಹೋಮ ನಡೆಸಲು ನಿರ್ಧರಿಸಿರುವ ರಾಜ್ಯ ಸರ್ಕಾರದ ನಡೆಗೆ ಮೈಸೂರಿನ ಕೆಲ ಪ್ರಗತಿಪರ ಚಿಂತಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವಧಿಯಲ್ಲಿಯೂ ಬರ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ದೇವಾಲಗಳಲ್ಲಿ ಪೂಜೆ ಸಲ್ಲಿಸುವಂತೆ ಆದೇಶ ಹೊರಡಿಸಲಾಗಿತ್ತು. ಈ ಬಗ್ಗೆ ಅಂದಿನ ಜಲಸಂಪನ್ಮೂಲ ಸಚಿವ ಎಂ. ಬಿ ಪಾಟೀಲ್ ಸಹ ಆದೇಶ ಹೊರಡಿಸುವುದಾಗಿ ಹೇಳಿದ್ದರು. ಅಂತೆಯೇ ಈ ಬಾರಿಯೂ ಪೂಜೆ, ಹೋಮ, ಹವನ, ಜಪ -ತಪದ ಜೊತೆಗೆ ಮೋಡ ಬಿತ್ತನೆಯನ್ನು ನಡೆಸಲು ಮುಂದಾಗಿದೆ. ಸರ್ಕಾರದ ಈ ಸಂಪ್ರದಾಯವನ್ನು ಸಾಕಷ್ಟು ಮಂದಿ ಪ್ರಜ್ಞಾವಂತರು ಖಂಡಿಸಿದ್ದಾರೆ.
ಪೂಜೆ ಮಾಡುವುದರಿಂದ ಮಳೆ ಬರುತ್ತದೆ ಎನ್ನುವುದು ಭ್ರಮೆ. ವಾಸ್ತವ ನೆಲೆಗಟ್ಟಿನ ಮೇಲೆ ಆಲೋಚಿಸುವ ಪರಿ ನಮ್ಮದಾಗಬೇಕು. ನೈಸರ್ಗಿಕ, ವೈಜ್ಞಾನಿಕ ಕಾರಣಗಳ ಮೇಲೆ ಕಾರ್ಯಾಚರಣೆ ಮಾಡಿ ಸಮಸ್ಯೆ ಪರಿಹರಿಸಬೇಕು. ಇಂತಹ ಕಾರ್ಯಗಳಿಂದ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎಂದಿದ್ದಾರೆ ಪ್ರಗತಿಪರ ಚಿಂತಕರು.
ಮಂಗಳೂರು: ಮಳೆಗಾಗಿ ಮಂಗಳಾದೇವಿಗೆ ವಿಶೇಷ ಪ್ರಾರ್ಥನೆ
ಮೋಡ ಬಿತ್ತನೆಗೆ 90 ಕೋಟಿ ವ್ಯಯಿಸಿರುವ ಸರ್ಕಾರ, ಮತ್ತೊಂದೆಡೆ ದೇವಾಲಯದಲ್ಲಿ ಪೂಜೆಗೆ 10 ಸಾವಿರ ನೀಡಿರುವುದು ರಾಜ್ಯ ಸರ್ಕಾರದ ಮಾನಸಿಕ ದಿವಾಳಿತನವನ್ನು ತೋರಿಸುತ್ತದೆ. ಮಳೆ ಬೀಳುವ ಬಗ್ಗೆ ಸಂಬಂಧಪಟ್ಟ ಇಲಾಖೆ ಈಗಾಗಲೇ ಸೂಚನೆ ನೀಡಿದೆ. ಜನರ ದಿಕ್ಕು ತಪ್ಪಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ ಎಂದಿದ್ದಾರೆ.