ಮತಕೇಳಿದ ತನ್ವೀರ್ ಸೇಠ್ ಗೆ ಮಂಗಳಾರತಿ ಮಾಡಿದ ಕಾಂಗ್ರೆಸ್ ಕಾರ್ಯಕರ್ತ!
Recommended Video

ಮೈಸೂರು, ಮೇ 02: ಮತ ಕೇಳಲು ಬಂದ ಶಿಕ್ಷಣ ಸಚಿವರಿಗೆ ಕಾಂಗ್ರೆಸ್ ಕಾರ್ಯಕರ್ತನೇ ಮಂಗಳಾರತಿ ಮಾಡಿ ಕಳಿಸಿದ ಘಟನೆ ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ನಡೆದಿದೆ.
ಮೇ 12 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಈ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಹಾಲಿ ಶಾಸಕ ಸೇಠ್ ಪ್ರಚಾರಕ್ಕಾಗಿ ತಮ್ಮ ಕ್ಷೇತ್ರಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಅವರು ಊಹಿಸಲೂ ಸಾಧ್ಯವಾಗದ ಘಟನೆ ನಡೆದಿದ್ದು, ಅವರಿಗೆ ಇರಿಸುಮುರಿಸುಂಟಾಗುವಂತೆ ಮಾಡಿದೆ.
ಮತ ಯಾಚಿಸುತ್ತಿದ್ದ ಸಚಿವರನ್ನು ನಡು ದಾರಿಯಲ್ಲೇ ನಿಲ್ಲಿಸಿದ ಪರಮೇಶ್ ಎಂಬ ಕಾಂಗ್ರೆಸ್ ಕಾರ್ಯಕರ್ತ, " ಸಚಿವರಾಗಿ ನಿಮ್ಮ ನಾಲ್ಕು ವರ್ಷದ ಸಾಧನೆ ಏನು? ಇಲ್ಲಿನ ರಸ್ತೆಗಳನ್ನು ನೋಡಿ, ನಿಮ್ಮ ಸಾಧನೆ ಏನು ಎಂಬುದು ಗೊತ್ತಾಗುತ್ತದೆ" ಎಂದಿದ್ದಾರೆ.

ಈ ಅನಿರೀಕ್ಷಿತ ಘಟನೆಗೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದೆ ಸಚಿವರು ಮೌನವಾಗಿ ನಿಂತಿದ್ದರೆ, ಪರಮೇಶ್ ಮತ್ತೆ ಮಾತಿನ ಛಾಟಿ ಬೀಸಿದ್ದಾರೆ. "ನಿಮಗೆ ಈಗ ಮತದಾರರು ನೆನಪಾಗಿದ್ದೀವಾ? ನಿಮ್ಮ ತಂದೆ ಅಜೀಜ್ ಸೇಠ್ ತೀರಿಹೋದಾಗಿನಿಂದಲೂ ನಾನು ನಿಮ್ಮ ಮನೆಯಲ್ಲಿದ್ದೇನೆ. ನಾನು ನಿಮಗೆ ಮತ ಹಾಕುತ್ತೇನೆ. ಆದರೆ ನಮಗಾಗಿ ನೀವು ಏನು ಮಾಡಿದ್ದೀರಿ ಎಂಬುದನ್ನು ಹೇಳಿ" ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದಾರೆ.
ನಂತರ ಸೇಠ್ ಬೆಂಬಲಿಗರು ಪರಮೇಶ್ ಅವರನ್ನು ತರಟೆಗೆ ತೆಗೆದುಕೊಳ್ಳಲು ಪ್ರಯತ್ನಿಸಿದ ಘಟನೆಯೂ ನಡೆಯಿತು. ಇದರಿಂದ ಗಲಾಟೆ ತಾರಕ್ಕಕ್ಕೇರುತ್ತಿದೆ ಎಂಬುದನ್ನು ಅರಿತ ಸಚಿವರು ಸ್ಥಳದಿಂದ ಕಾಲ್ಕಿತ್ತರು.
ಇತ್ತೀಚೆಗಷ್ಟೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ಕಾರ್ಯಕರ್ತ ಮರಿಸ್ವಾಮಿ ಎಂಬುವವರು ತರಾಟೆಗೆ ತೆಗೆದುಕೊಂಡ ಘಟನೆ ನಡೆದಿತ್ತು.
ಒಟ್ಟಿನಲ್ಲಿ ಮತದಾರರು ಕುರುಡಾಗಿ ಮತಹಾಕದೆ, ರಾಜಕಾರಣಿಗಳನ್ನು ಪ್ರಶ್ನಿಸುವ ಮಟ್ಟಕ್ಕೆ ಬೆಳೆದಿದ್ದಾರಲ್ಲ ಎಂಬುದೇ ಸಮಾಧಾನದ ಸಂಗತಿ.












Click it and Unblock the Notifications