ಮುಂದಿನ ನನ್ನ ಚುನಾವಣೆಯ ಕ್ಷೇತ್ರ ಚಾಮುಂಡಿಯೇ: ಸಿದ್ದು
ಮೈಸೂರು, ಜುಲೈ .14: ನನಗೆ ರಾಜಕೀಯ ಮರು ಜೀವ ನೀಡಿದ್ದು ಚಾಮುಂಡೇಶ್ವರಿ ಕ್ಷೇತ್ರ. ಇದು ಸಹ ನನ್ನ ಕ್ಷೇತ್ರವಿದ್ದಂತೆ. ನನ್ನನ್ನು ಐದು ಭಾರಿ ಶಾಸಕನಾಗಿ ಆಯ್ಕೆ ಮಾಡಿದ್ದು ಇದೇ ಕ್ಷೇತ್ರ. ಈ ಕ್ಷೇತ್ರದಲ್ಲೇ ಮುಂದಿನ ಬಾರಿ ಸ್ಪರ್ಧಿಸುತ್ತೇನೆ ಹೀಗೆಂದು ಹೇಳಿದವರು, ಸಿಎಂ ಸಿದ್ಧರಾಮಯ್ಯ.
ಮೈಸೂರಿನ ಆಲನಹಳ್ಳಿಯ ನಂದಿನಿ ಬಡಾವಣೆಯಲ್ಲಿ ಶ್ರೀ ನಿರ್ವಾಣಸ್ವಾಮಿ ಪದವಿಪೂರ್ವ ಕಾಲೇಜು, ಪ್ರೌಢಶಾಲೆ ಮತ್ತು ಕಾನ್ವೆಂಟ್ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಂದಿನ ಬಾರಿ ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ. ಚಾಮುಂಡೇಶ್ವರಿ ಕ್ಷೇತ್ರ ನನಗೆ ರಾಜಕೀಯವಾಗಿ ಪುನರ್ಜನ್ಮ ನೀಡಿದ ಕ್ಷೇತ್ರ. 6 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸಬೇಕೆಂಬುದು ನನ್ನ ಆಸೆ. ಆಲನಹಳ್ಳಿ ಕೂಡ ಚಾಮುಂಡೇಶ್ವರಿ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದರು.

ಯತೀಂದ್ರ ಸ್ಪರ್ಧೆಯ ಸುಳಿವು ನೀಡಿದ ಸಿಎಂ ಸಿದ್ದು?
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತನ್ನ ಮಗ ಡಾ.ಯತೀಂದ್ರನನ್ನು ಕಣಕ್ಕಿಳಿಸಲಿದ್ದಾರೆ ಹೀಗೊಂದು ಸುಳಿವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದಾರೆ.
ವರುಣಾ ಕ್ಷೇತ್ರದ ಹೊಸಕೋಟೆ ಗ್ರಾಮದಲ್ಲಿ ಆರೋಗ್ಯ ಕೇಂದ್ರಕ್ಕೆ ಶಂಕುಸ್ಥಾಪನೆ ಬಳಿಕ ಸಿದ್ದರಾಮಯ್ಯ ಮಾತನಾಡಿ, ವರುಣಾ ಕ್ಷೇತ್ರಕ್ಕೆ ಹೆಚ್ಚಾಗಿ ಬರಲಾಗುತ್ತಿಲ್ಲ. ನೀವು ಯಾರೂ ತಪ್ಪು ತಿಳಿಯಬೇಡಿ. ಹಿಂದೆ ನನ್ನ ಮಗ ರಾಕೇಶ್ ಬರುತ್ತಿದ್ದ, ಆತ ಅಕಾಲಿಕ ಸಾವನ್ನಪ್ಪಿದ ಕಾರಣ ನನ್ನಮಗ ಯತೀಂದ್ರ ವೈದ್ಯ ವೃತ್ತಿ ಬಿಟ್ಟು ಬಂದಿದ್ದಾನೆ.

ಯತೀಂದ್ರ ವರುಣಾ ಕ್ಷೇತ್ರದ ಜನರ ಕಷ್ಟ ಸುಖ ನೋಡಿಕೊಳ್ಳುತ್ತಾನೆ. ಕಳೆದ ಬಾರಿ ದೊಡ್ಡ ಮಟ್ಟದಲ್ಲಿ ಆಶೀರ್ವಾದ ಮಾಡಿದ್ದೀರಿ. ಮುಂದಿನ ಬಾರಿಯೂ ಆಶೀರ್ವಾದ ಮಾಡಿ ಎಂದಿರುವುದು ಮುಖ್ಯಮಂತ್ರಿಗಳು ತನ್ನ ಮಗನನ್ನು ಚುನಾವಣಾ ಕಣಕ್ಕಿಳಿಸಬೇಕು ಎಂದು ಲೆಕ್ಕಾಚಾರ ಹಾಕಿದಂತಿದೆ.
ಮುಂದಿನ ವಿಧಾನಸಭೆ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಶ್ರೀ ಸಿದ್ದಲಿಂಗ ಸ್ವಾಮೀಜಿ, ಮುಮ್ಮುಡಿ ನಿರ್ವಾಣ ಸ್ವಾಮೀಜಿ, ಚಿದಾನಂದ ಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ, ಮುಡ ಅಧ್ಯಕ್ಷ ಡಿ.ಧ್ರುವಕುಮಾರ್, ಮುಖ್ಯಮಂತ್ರಗಳ ಜಂಟಿ ಕಾರ್ಯದರ್ಶಿ ಎಂ.ರಾಮಯ್ಯ, ಮೈಸೂರು ಮಿನರಲ್ಸ್ ನ ನಿರ್ದೇಶಕ ಎಂ.ವಿ.ರವಿ, ಎಸ್.ಎನ್, ಎಸ್. ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ಬಿ.ಮಹದೇವಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications