Karnataka Budget 2023: ಅರಮನೆ ನಗರಿ ಮೈಸೂರು ಜಿಲ್ಲೆಯ ನಿರೀಕ್ಷೆಗಳೇನು?
ಫೆಬ್ರವರಿ 10ರಂದು ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಫೆಬ್ರವರಿ 17ರಂದು ಮುಖ್ಯಮಂತ್ರಿಯವರು ರಾಜ್ಯ ಬಜೆಟ್ ಮಂಡನೆ ಮಾಡಲಿದ್ದಾರೆ. ಕರ್ನಾಟಕ ಬಜೆಟ್ 2023ರ ಮೇಲಿನ ಮೈಸೂರು ಜಿಲ್ಲೆಯ ಜನತೆಯ ನಿರೀಕ್ಷೆಗಳೇನು ಎನ್ನುವುದು ಇಲ್ಲಿದೆ.
ಮೈಸೂರು ಅರಮನೆ ನಗರಿ, ರಾಜಧಾನಿ ಬೆಂಗಳೂರು ನಂತರ ವೇಗವಾಗಿ ಬೆಳೆಯುತ್ತಿರುವ ಜಿಲ್ಲೆ ಇದಾಗಿದೆ. ಹೀಗಾಗಿ ಈ ಬಾರಿಯ ರಾಜ್ಯ ಬಜೆಟ್ನಲ್ಲಿ ಮೈಸೂರಿಗೆ ಭರಪೂರ ಯೋಜನೆಗಳು ಘೋಷಣೆಯಾಗುವ ನಿರೀಕ್ಷೆ ಇದೆ.
ಫೆಬ್ರವರಿ 17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಬಜೆಟ್ ಮಂಡಿಸಲಿದ್ದಾರೆ. ಮೈಸೂರಿನ ನಿರೀಕ್ಷೆಗಳ ಬಗ್ಗೆ ಅವಲೋಕನ ಹೀಗಿದೆ. ಹಳೇ ಮೈಸೂರು ಭಾಗದಲ್ಲಿ ಪಕ್ಷ ಬಲವರ್ಧನೆಗೆ ಬಿಜೆಪಿ ಹೆಚ್ಚಿನ ಪ್ರಾತಿನಿಧ್ಯತೆ ನೀಡಿದೆ. ಈ ನಿಟ್ಟಿನಲ್ಲಿ ಈ ಬಾರಿ ಸಾಂಸ್ಕೃತಿಕ ನಗರಿ ಮೈಸೂರಿಗೆ ಸಾಕಷ್ಟು ಯೋಜನೆ ಸಿಗಬಹುದು ಎನ್ನಲಾಗುತ್ತಿದೆ.
ಮೈಸೂರಿನಲ್ಲಿ ಸರ್ಕಾರ ಘೋಷಿಸಿರುವ 131 ಪಾರಂಪರಿಕ ಕಟ್ಟಡಗಳಿವೆ. ಇದರಲ್ಲಿ 25 ಕಟ್ಟಡಗಳು ಈಗಾಗಲೇ ಕುಸಿದು ಬೀಳುವ ಸ್ಥಿತಿಯಲ್ಲಿವೆ. ನಗರದ ದೇವರಾಜ ಮಾರುಕಟ್ಟೆ ದುಸ್ಥಿತಿಯಲ್ಲಿದೆ. ಲಾನ್ಸ್ಡೌನ್ ಬಿಲ್ಡಿಂಗ್ ಕುಸಿದು ದಶಕ ಕಳೆದರೂ ದುರಸ್ತಿ ಕಾರ್ಯ ಇನ್ನೂ ಆಗಿಲ್ಲ. ಜೊತೆಗೆ ಇತ್ತೀಚಿಗೆ ಮಹಾರಾಣಿ ಕಾಲೇಜಿನ ಲ್ಯಾಬ್ ಕೊಠಡಿ ಕುಸಿದಿದೆ.

ಹೀಗಾಗಿ ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ 1 ಸಾವಿರ ಕೋಟಿ ಅನುದಾನ ಅಗತ್ಯವಿದೆ. ಈ ಬಾರಿ ಬಜೆಟ್ನಲ್ಲಿ ಪಾರಂಪರಿಕ ಕಟ್ಟಡಗಳ ಕಾಯಕಲ್ಪ ಒದಗಿಸಲು ವಿಶೇಷ ಪ್ಯಾಕೇಜ್ ಘೋಷಣೆಯಾಗುವ ನಿರೀಕ್ಷೆ ಇದೆ.
ಯೋಗ ದಿನದಂದು ಪ್ರಧಾನಿ ನರೇಂದ್ರ ಮೋದಿ ಮೈಸೂರಿಗೆ ಭೇಟಿ ನೀಡಿದ ಮೇಲೆ ಸಾಂಸ್ಕೃತಿಕ ನಗರಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಗೂಗಲ್ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಗರು ಮೈಸೂರನ್ನು ಸರ್ಜ್ ಮಾಡಿದ್ದಾರೆ. ಹಾಗಾಗಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಸಲುವಾಗಿ ವಿಶೇಷ ಪ್ಯಾಕೇಜ್ ಘೋಷಿಸುವ ನಿರೀಕ್ಷೆ ಇದೆ. ಇದರಿಂದ ಮೈಸೂರಿನ ಆರ್ಥಿಕತೆಗೂ ಬೂಸ್ಟರ್ ಸಿಗಲಿದೆ. ಟೂರಿಸಂ ಸರ್ಕಿಟ್ಗೂ ಚಾಲನೆ ಸಿಗುವ ನಿರೀಕ್ಷೆ ಇದೆ.
ಮೈಸೂರಿನಲ್ಲಿ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪನೆ ಆಗುತ್ತಿದೆ. ದಶಪಥ ಕಾಮಗಾರಿ ಇನ್ನೇನು ಮುಗಿಯುವ ಹಂತದಲ್ಲಿದೆ. ಹೀಗಾಗಿ ಹೆಚ್ಚು ಹೆಚ್ಚು ಉದ್ಯಮಗಳು ಮೈಸೂರಿನಲ್ಲಿ ಸ್ಥಾಪನೆ ಆಗುವ ನಿರೀಕ್ಷೆ ಇದೆ. ಹಾಗಾಗಿ ಬೃಹತ್ ಮೈಸೂರು ಮಹಾನಗರ ಪಾಲಿಕೆ ಮಾಡುವ ಕಾಲ ಸನ್ನಿಹಿತವಾಗಿದೆ. ಈ ನಿಟ್ಟಿನಲ್ಲಿ ಸದ್ಯ ರಿಂಗ್ ರಸ್ತೆಗೆ ಚಾಲನೆ ನೀಡಲಾಗಿದೆ. ಜೊತೆಗೆ ಬೃಹತ್ ಮೈಸೂರು ರಚನೆಯೂ ಆಗಬಹುದು ಎನ್ನಲಾಗುತ್ತಿದೆ.
ಮೈಸೂರು ಏರ್ಪೋರ್ಟ್ಗೆ ಮೂಲಸೌಲಭ್ಯ ಅವಶ್ಯಕವಾಗಿ ಬೇಕಿದೆ. ಕಳೆದ ಬಾರಿ ಬಜೆಟ್ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮೈಸೂರು ಏರ್ಪೋರ್ಟ್ ರನ್ ವೇ ವಿಸ್ತರಣೆಗೆ ಅನುದಾನ ಘೋಷಣೆ ಮಾಡಿದ್ದರು. ಆದರೆ, ಅನುದಾನ ಇನ್ನೂ ಬಿಡುಗಡೆ ಆಗಿಲ್ಲ. ಜೊತೆಗೆ ಸ್ವಾಧೀನ ತೊಡಕಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಬಜೆಟ್ನಲ್ಲಿ ಮೈಸೂರಿಗೆ ಸಿಹಿಸುದ್ದಿ ಸಿಗುವ ನಿರೀಕ್ಷೆ ಇದೆ.
ಮೈಸೂರಿನ ಮಹಾತ್ವಕಾಂಕ್ಷೆ ಯೋಜನೆಯಲ್ಲಿ ಚಿತ್ರನಗರಿ ನಿರ್ಮಾಣವೂ ಒಂದು. ಯಾವ ಜಿಲ್ಲೆಯಲ್ಲಿ ಸ್ಥಾಪನೆಯಾಗಬೇಕೆಂಬ ವಿವಾದ ಸದ್ಯ ಬಗೆಹರಿದಿದೆ. ಮೈಸೂರಿನಲ್ಲಿ ಚಿತ್ರನಗರಿ ಸ್ಥಾಪನೆ ಆಗಲು ನಂಜನಗೂಡಿನ ಹಿಮ್ಮಾವು ಬಳಿ ಜಾಗ ಗುರುತು ಮಾಡಲಾಗಿದೆ. ರಾಜ್ಯ ಸರಕಾರ ಅಧಿಕೃತ ಘೋಷಣೆ ಜೊತೆಗೆ ಅನುದಾನ ಬಿಡುಗಡೆ ಮಾಡಿದರೆ ಚಿತ್ರನಗರಿ ತಲೆ ಎತ್ತುತ್ತದೆ. ಇದರಿಂದ ಸಾಕಷ್ಟು ಯುವಜನರಿಗೆ ಉದ್ಯೋಗಾವಕಾಶಗಳು ಲಭಿಸಲಿದೆ.
ರಾಜ್ಯ ಬಜೆಟ್ನಲ್ಲಿ ಮೈಸೂರಿನ ಇತರೆ ನಿರೀಕ್ಷೆಗಳೇನು?
1. ಬೆಳೆಯುತ್ತಿರುವ ಮೈಸೂರಿಗೆ ಪ್ರತ್ಯೇಕ ಜಲಮಂಡಳಿ ಸ್ಥಾಪನೆ ಅವಶ್ಯಕವಾಗಿದೆ.
2. ದಶಕದಿಂದ ದಸರಾ ಪ್ರಾಧಿಕಾರ ರಚನೆ ಮರೀಚಿಕೆ ಆಗಿದೆ.
3. ಟೂರಿಸಂ ಹಬ್ಗೆ ವಿಶೇಷ ಅನುದಾನ ನಿರೀಕ್ಷೆ.
4. ರೈಲ್ವೆ ಟರ್ಮಿನಲ್ ಹಾಗೂ ಕಬಿನಿ ಹಿನ್ನೀರಿನ ಯೋಜನೆ ಅನುದಾನದ ನಿರೀಕ್ಷೆ.
5. ನಗರದ ಹೊರವಲಯದಲ್ಲಿ ಕೈಗಾರಿಕೋದ್ಯಮಕ್ಕೆ ಆದ್ಯತೆ ನೀಡುವ ನಿರೀಕ್ಷೆ ಇದೆ.












Click it and Unblock the Notifications