ಉತ್ತರ ಕರ್ನಾಟಕ ಜನತೆಗೆ ಮೈಸೂರಿಗರ ಬೆಂಬಲ
ಮೈಸೂರು, ಜುಲೈ 30 : ಬಿಕೋ ಎನ್ನುತ್ತಿದ್ದ ರಸ್ತೆ, ಬಸ್ ನಿಲ್ದಾಣ.. ಕನ್ನಡ ಬಾವುಟ ಹಿಡಿದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಿದ್ದ ವಿವಿಧ ಸಂಘಟನೆಯ ಕಾರ್ಯಕರ್ತರು.. ಕತ್ತೆಗಳ ಮೆರವಣಿಗೆ.. ಧರಣಿ.. ಇದೆಲ್ಲವೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಂಡು ಬಂದ ಕರ್ನಾಟಕ ಬಂದ್ ನ ದೃಶ್ಯಗಳು.
ಮಹಾದಾಯಿ ಮಧ್ಯಂತರ ತೀರ್ಪು ವಿರೋಧಿಸಿ ಕರೆನೀಡಲಾಗಿದ್ದ ಕರ್ನಾಟಕ ಬಂದ್ಗೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಹೃದಯಭಾಗದಲ್ಲಿ ಅಂಗಡಿ ಮುಂಗಟ್ಟು ಮುಚ್ಚಲಾಗಿತ್ತು. ಖಾಸಗಿ, ಸರ್ಕಾರಿ ಬಸ್ಗಳು ರಸ್ತೆಗೆ ಇಳಿಯಲಿಲ್ಲ. ಶಾಲಾ ಕಾಲೇಜುಗಳು ಮುಚ್ಚಿದ್ದವು. ಒಟ್ಟಾರೆಯಾಗಿ ಬಂದ್ಗೆ ಬೆಂಬಲ ನೀಡುವ ಮೂಲಕ ಉತ್ತರ ಕರ್ನಾಟಕ ಜನರಿಗೆ ಒದಗಿ ಬಂದ ಸಂಕಷ್ಟದಲ್ಲಿ ನಾವು ಭಾಗಿಗಳಾಗಿದ್ದೇವೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ನಗರದ ಮುಖ್ಯ ರಸ್ತೆಯಾದ ಡಿ.ದೇವರಾಜ ಅರಸು ರಸ್ತೆ, ಅಶೋಕ ರಸ್ತೆ, ಇರ್ವಿನ್ ರಸ್ತೆ, ಕೆ.ಆರ್.ಸರ್ಕಲ್ ಸುತ್ತಮುತ್ತ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿದ್ದರಿಂದ ಇಡೀ ನಗರವೇ ಬಿಕೋ ಎನ್ನುತ್ತಿತ್ತು. ಕೆಆರ್ ವೃತ್ತ ಸೇರಿದಂತೆ ಇನ್ನಿತರ ಪ್ರಮುಖ ಸ್ಥಳಗಳಲ್ಲಿನ ಎಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಇದರಿಂದಾಗಿ ಈ ಎಲ್ಲಾ ಸ್ಥಳಗಳಲ್ಲೂ ನೀರವ ಮೌನ ಕಂಡು ಬಂದಿತು. [ಚಿತ್ರಗಳು : ಬೆಂಗಳೂರಿಗೆ ತಟ್ಟಿದ ಕರ್ನಾಟಕ ಬಂದ್ ಬಿಸಿ]

ಬಿಕೋ ಎನ್ನುತ್ತಿದ್ದ ಬಸ್ ನಿಲ್ದಾಣ
ಬಂದ್ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ದೃಷ್ಟಿಯಿಂದ ಇಂದು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಯಾವುದೇ ಬಸ್ಸುಗಳ ಸಂಚಾರವಿರಲಿಲ್ಲ. ಗ್ರಾಮಾಂತರ ಹಾಗೂ ನಗರ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರು ಬಸ್ಸುಗಳಿಗೆ ಕಾಯುತ್ತಿದ್ದು ಬಸ್ಸುಗಳ ಸಂಚಾರ ಇಲ್ಲ ಎಂಬ ವಿಷಯ ತಿಳಿದ ನಂತರ ಕೆಲವರು ತಮ್ಮ ತಮ್ಮ ಮನೆಗಳಿಗೆ ವಾಪಸ್ಸು ತೆರಳಿದರು.

ಬಸ್ಸೂ ಇಲ್ಲ ಹೋಟೆಲೂ ಇಲ್ಲ
ಉಳಿದವರು ಸಂಜೆಯ ನಂತರ ಬಸ್ಸುಗಳ ಸಂಚಾರ ಆರಂಭಗೊಂಡ ನಂತರ ಪಯಣಿಸಬಹುದೆಂದು ತಿಳಿದು ಬಸ್ ನಿಲ್ದಾಣದಲ್ಲಿಯೇ ತಂಗಿದ್ದರು. ಆದರೆ ಅವರುಗಳಿಗೆ ಬಸ್ ನಿಲ್ದಾಣದಲ್ಲಿ ಯಾವುದೇ ಹೋಟೆಲ್ ಗಳು ಹಾಗೂ ತಿಂಡಿ ಅಂಗಡಿಗಳು ತೆರೆಯದೆ ಉಪವಾಸ ಮತ್ತು ಬಾಯಾರಿಕೆಗಳಿಂದ ಬಳಲುವ ಪರಿಸ್ಥಿತಿ ಒದಗಿ ಬಂದಿತ್ತು.

ಶಾಲೆ, ಪೆಟ್ರೋಲ್ ಬಂಕಿಗೆ ರಜಾ
ಸರ್ಕಾರಿ ಶಾಲೆಗಳಿಗೆ ರಜೆ ನೀಡದ ಕಾರಣ ಕೆಲವು ಮಕ್ಕಳು ಶಾಲೆ ತನಕ ಬಂದು ಹಿಂತಿರುಗಿದ ದೃಶ್ಯವೂ ಕಂಡು ಬಂತು. ಆದರೆ ನಗರದ ಕೆಲವು ಖಾಸಗೀ ಶಾಲೆಗಳ ಆಡಳಿತ ಮಂಡಳಿ ಶುಕ್ರವಾರವೇ ರಜೆ ಘೋಷಿಸಿತ್ತು. ಇನ್ನು ಶನಿವಾರವಾದ್ದರಿಂದ ಬ್ಯಾಂಕ್ಗಳು ತೆರೆದಿರಲಿಲ್ಲ. ಪೆಟ್ರೋಲ್ ಬಂಕ್ಗಳು ಕಾರ್ಯನಿರ್ವಹಿದೆ ಬೆಂಬಲ ಸೂಚಿಸಿದವು.

ಸಂಸದರ ವಿರುದ್ಧ ಧಿಕ್ಕಾರ
ಇನ್ನು ಬೇರೆ ಬೇರೆ ಕಡೆಯಿಂದ ಬಂದ ಹಲವು ಸಂಘಟನೆಗಳು ಗಾಂಧಿ ವೃತ್ತದಲ್ಲಿ ಸಮಾವೇಶಗೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರ ಅಲ್ಲದೆ ಸಂಸದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕತ್ತೆ ಮೆರವಣಿಗೆ ನಡೆಸಿ ಆಕ್ರೋಶ
ಬಂದ್ ಕರೆ ನೀಡಿದ್ದರೂ ಕಾಡಾ ಕಚೇರಿ ನಿರ್ವಹಿಸುತ್ತಿದ್ದ ಬಗ್ಗೆ ಆಕ್ರೋಶಗೊಂಡ ಕಾರ್ಯಕರ್ತರು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಟಯರ್ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ನಗರದ ಕೆಲವೆಡೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದರು. ಕನ್ನಡಪರ ಸಂಘಟನೆಯಿಂದ ಕತ್ತೆ ಮೆರವಣಿಗೆ ನಡೆಸಿ ಆಕ್ರೋಶವನ್ನು ಹೊರಹಾಕಲಾಯಿತು.

ತಾಲೂಕುಗಳಲ್ಲಿಯೂ ಬಂದ್ಗೆ ಉತ್ತಮ ಪ್ರತಿಕ್ರಿಯೆ
ಆಟೋ ಸಂಚಾರ, ವಾಹನ ಸಂಚಾರ ಎಂದಿನಂತೆ. ಹೋಟೆಲ್, ಇನ್ನಿತರ ಅಂಗಡಿಗಳು ಮುಚ್ಚಿದ್ದವು. ಇನ್ನು ಮೈಸೂರು ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಬಗ್ಗೆ ವರದಿಯಾಗಿದೆ.












Click it and Unblock the Notifications