Varuna: ನಾನು ಹೊರಗಿನವ ಎನ್ನುವ ಸಿದ್ದರಾಮಯ್ಯ, ಬಾದಾಮಿ-ಕೊಪ್ಪಳಕ್ಕೆ ಏಕೆ ಹೋಗಿದ್ರು?; ವಿ. ಸೋಮಣ್ಣ
2023ರ ಸಾರ್ವತ್ರಿಕ ವಿಧಾನಸಭೆ ಚುನಾವಣೆ ಅಖಾಡದಲ್ಲಿ ರಣಕಲಿಗಳು ಸಜ್ಜಾಗಿದ್ದು, ಈಗಾಗಲೇ ನಾಮಪತ್ರ ಸಲ್ಲಿಸಿ ಮತದಾರರ ಬಳಿ ಮತಯಾಚನೆ ಮಾಡುತ್ತಿದ್ದಾರೆ. ರಾಜ್ಯದ ಹೈ-ವೋಲ್ಟೇಜ್ ಕ್ಷೇತ್ರವಾಗಿರುವ ವರುಣಾ ಕ್ಷೇತ್ರದಲ್ಲಿಯೂ ಪ್ರಚಾರದ ಭರಾಟೆ ಜೋರಾಗಿದೆ.
ಕಾಂಗ್ರೆಸ್ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಬಿಜೆಪಿ ಪಕ್ಷದಿಂದ ವಿ. ಸೋಮಣ್ಣ ಪರಸ್ಪರ ಎದುರಾಳಿಯಾಗಿದ್ದಾರೆ. ಮೊದಮೊದಲು ಗೆಲುವು ಸುಲಭವೆಂದು ಭಾವಿಸಿದ್ದ ಸಿದ್ದರಾಮಯ್ಯ ಅವರಿಗೆ ವಿ. ಸೋಮಣ್ಣ ಸ್ಪರ್ಧಿಸುತ್ತಿರುವುದು ನಿದ್ದೆಗಡಿಸಿದೆ.

ಚಾಮರಾಜನಗರ ಮತ್ತು ವರುಣಾದಿಂದ ಸ್ಪರ್ಧಿಸುತ್ತಿರುವ ವಿ. ಸೋಮಣ್ಣ ಅವರು ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ಇದೇ ವೇಳೆ ಭಾನುವಾರ ವರುಣಾ ಕ್ಷೇತ್ರದಲ್ಲಿ ವಿ. ಸೋಮಣ್ಣ ಪ್ರಚಾರ ಮಾಡುತ್ತಿದ್ದಾಗ, ಎದುರಾಳಿ ಅಭ್ಯರ್ಥಿ ಸಿದ್ದರಾಮಯ್ಯನವರ ಬೆಂಬಲಿಗರು ಅಡ್ಡಿಪಡಿಸಿದ ಘಟನೆಯೂ ನಡೆಯಿತು.
ಪ್ರಚಾರದ ವೇಳೆ ಈ ಬಗ್ಗೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ, "ವರುಣಾ ಕ್ಷೇತ್ರದಲ್ಲಿ ನನಗೆ ಶೇ.100ಕ್ಕೆ 100ರಷ್ಟು ಗೆಲ್ಲುವ ಭರವಸೆ ಹೆಚ್ಚಾಗಿದೆ. ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ ನನ್ನ ಮೇಲಿದೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದ ಹಾಗೂ ಮಹದೇಶ್ವರರ ಸಂದೇಶವಿದೆ," ಎಂದು ಹೇಳಿದರು.

ವಿ. ಸೋಮಣ್ಣ ಕ್ಷೇತ್ರದ ಹೊರಗಿನವರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ಇಲ್ಲಿನ ಮತದಾರರು ಈ ಬಾರಿ ನನಗೆ ಆಶೀರ್ವಾದ ಮಾಡುವ ನಂಬಿಕೆಯಿದೆ. ಯಾರು ಹೊರಗಿನವರು, ಯಾರು ಒಳಗಿನವರು ಎನ್ನುವುದಕ್ಕಿಂತ ಹೆಚ್ಚಾಗಿ ಯಾರು ಎಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂಬುದು ಮುಖ್ಯವಾಗುತ್ತದೆ," ಎಂದರು.
"ಮಾಜಿ ಸಿಎಂ ಸಿದ್ದರಾಮಯ್ಯ ಈ ಹಿಂದೆ ಕೊಪ್ಪಳ ಮತ್ತು ಬಾದಾಮಿಗೆ ಏಕೆ ಹೋಗಿದ್ದರು. ಅವರು ಅಲ್ಲಿಗೆ ಹೋಗಿ ಸ್ಪರ್ಧೆ ಮಾಡಿದಾಗ ಹೊರಗಿನವರಾಗಿರಲಿಲ್ಲವೇ?, ಇದರ ಬಗ್ಗೆ ಅವರು ಮಾತನಾಡುವುದಿಲ್ಲ. ಸಿದ್ದರಾಮಯ್ಯ ವಾಸ್ತವಾಂಶ ಅರಿತು ಮಾತನಾಡಿದರೆ ಒಳ್ಳೆಯದು," ಎಂದು ವಿ. ಸೋಮಣ್ಣ ವಾಗ್ದಾಳಿ ನಡೆಸಿದರು.

ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟ ಮುಖ್ಯಮಂತ್ರಿಗಳು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ವಿ. ಸೋಮಣ್ಣ, "ಲಿಂಗಾಯತ ಸಿಎಂ ವಿಚಾರ ನಾನು ಚರ್ಚೆ ಮಾಡಲ್ಲ. ಅದರ ಬಗ್ಗೆ ಬಿಜೆಪಿ ವರಿಷ್ಠರು ಮಾತನಾಡುತ್ತಾರೆ. ಒಂದು ಧರ್ಮವನ್ನು ಮತ್ತೊಂದು ಧರ್ಮಕ್ಕೆ ಹೋಲಿಕೆ ಮಾಡುವುದು ನಮ್ಮ ಕರ್ತವ್ಯ ಅಲ್ಲ. ರಾಜಕಾರಣಿಗಳಾದವರು ತಮ್ಮ ಇತಿಮಿತಿಯಲ್ಲಿ ಮಾತನಾಡಿದರೆ ಒಳ್ಳೆಯದು," ಎಂದು ಸಲಹೆ ನೀಡಿದರು.
"ಮಾಜಿ ಸಿಎಂಗಳಾದ ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ಜೆ.ಎಚ್. ಪಟೇಲ್, ಎಸ್.ಆರ್. ಬೊಮ್ಮಾಯಿ, ಬಿ.ಎಸ್. ಯಡಿಯೂರಪ್ಪನವರು ಏನೇನು ಕೊಡುಗೆ ಕೊಟ್ಟಿದ್ದಾರೆ ಎಂದು ದೇಶಕ್ಕೆ ಗೊತ್ತಿದೆ," ಎಂದು ತಿಳಿಸಿದರು.
"ಒಂದು ಬಾರಿ ಭಾವುಕರಾಗಿ ಮಾತನಾಡಿ ಎರಡೇ ನಿಮಿಷಕ್ಕೆ ಉಲ್ಟಾ ಹೊಡೆಯುವ ವ್ಯವಸ್ಥೆಯನ್ನು ನಾನು ಕಂಡಿದ್ದೇನೆ. ಅದರ ಬಗ್ಗೆ ಹೆಚ್ಚು ಚರ್ಚೆ ಮಾಡಲ್ಲ. ಇದನ್ನು ಸಿದ್ದರಾಮಯ್ಯ ಮನವರಿಕೆ ಮಾಡಿಕೊಳ್ಳಬೇಕು. ರಾಜ್ಯದ ಎಲ್ಲಾ ವರ್ಗದ ಜನರ ಜೊತೆ ಒಡನಾಟ ಇಟ್ಟುಕೊಂಡು ಕೆಲಸ ಮಾಡಬೇಕಿದೆ. ಜಾತಿ ನಿಮಿತ್ತ ಮಾತ್ರ, ಇದನ್ನು ವೈಭವೀಕರಿಸಬಾರದು," ಎಂದು ವಿ. ಸೋಮಣ್ಣ ಅಭಿಪ್ರಾಯಪಟ್ಟರು.
"ಎಲ್ಲಾ ವರ್ಗದ ಜನರು ಸೋಮಣ್ಣನಂತಹ ಕೆಲಸಗಾರ ಬೇಕು ಎಂದು ಕೇಳುತ್ತಿದ್ದಾರೆ. ಚುನಾವಣೆಯಲ್ಲಿ ಮತದಾರರು ಹಲವು ಭಾರಿ ಯೋಚನೆ ಮಾಡಿ ಮತ ಚಲಾಯಿಸುತ್ತಾರೆ. ವಸತಿ ಸಚಿವನಾಗಿ ಸೋಮಣ್ಣ ಏನು ಕೆಲಸ ಮಾಡಿದ್ದಾರೆ ಎಂಬುದು ಸಿದ್ದರಾಮಯ್ಯಗೂ ಗೊತ್ತಿದೆ. ಅಧಿವೇಶನದಲ್ಲಿ ನನ್ನ ಬಗ್ಗೆ ಸಿದ್ದರಾಮಯ್ಯನವರೇ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ," ಎಂದು ವರುಣಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಹೇಳಿದರು.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ಮತ್ತು ಪರಿಶೀಲನೆ ಪ್ರಕ್ರಿಯೆ ಮುಕ್ತಾಯವಾಗಿದೆ. ಇನ್ನು ನಾಮಪತ್ರ ವಾಪಸ್ ಪಡೆಯಲು ನಾಳೆ (ಏಪ್ರಿಲ್ 24) ಕೊನೆಯ ದಿನಾವಾಗಿದೆ. ಮೇ 10ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದರೆ, ಮೇ 13ರಂದು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications