ಮೈಸೂರು ದಸರಾ ಕವಿಗೋಷ್ಠಿ ಉದ್ಘಾಟಿಸಲಿರುವ ನಾದಬ್ರಹ್ಮ ಹಂಸಲೇಖ
ಮೈಸೂರು, ಸೆಪ್ಟೆಂಬರ್ 4: ಮೈಸೂರು ದಸರೆಯಲ್ಲಿ ಸಾಹಿತ್ಯಾಭಿಮಾನಿಗಳ ನೆಚ್ಚಿನ ಕಾರ್ಯಕ್ರಮವಾದ ಕವಿಗೋಷ್ಠಿಯನ್ನು ಈ ಬಾರಿ ನಾದಬ್ರಹ್ಮ ಹಂಸಲೇಖ ಅವರು ಉದ್ಘಾಟಿಸುವರು.
ವಿಕಾಸ, ವಿನೋದ, ವಿಶಿಷ್ಟ ಮತ್ತು ಪ್ರಧಾನ ದಸರಾ ಕವಿಗೋಷ್ಠಿ ಎಂಬ 4 ಪ್ರಕಾರಗಳಲ್ಲಿನಡೆಯಲಿರುವ ಕವಿಗೋಷ್ಠಿ, ಸೆಪ್ಟಂಬರ್ 24 ರಿಂದ 27 ರವರೆಗೆ ನಾಲ್ಕು ದಿನ ಜಗನ್ಮೋಹನ ಅರಮನೆಯಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಸರೆ ಕವಿಗೋಷ್ಠಿ ಕುರಿತು ಮಾಹಿತಿ ನೀಡಿದ ಅವರು, ಸೆಪ್ಟಂಬರ್ 24 ರಂದು ಕವಿ, ಗೀತ ರಚನೆಕಾರ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಅವರು ಕವಿಗೋಷ್ಠಿ ಉದ್ಘಾಟಿಸಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಾರೆ. ಖ್ಯಾತ ಕವಿ ಡಾ.ಸಿದ್ದಲಿಂಗಯ್ಯ ವಿಶೇಷ ಆಹ್ವಾನಿತರಾಗಿರುತ್ತಾರೆ. ಚಾಮರಾಜ ಕ್ಷೇತ್ರದ ಶಾಸಕ ವಾಸು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಮೈಸೂರು ಮತ್ತು ನೆರೆ ಹೊರೆ ಜಿಲ್ಲೆಗಳ ಉದಯೋನ್ಮುಖ ಚಿಗುರು, ಯುವ, ಮಹಿಳಾ ಮತ್ತು ಹಿರಿಯ ಕವಿಗಳ ಕವನ ವಾಚನ ವಿಕಾಸ ಕವಿಗೋಷ್ಠಿ ನಡೆಯಲಿದ್ದು. ಖ್ಯಾತ ಕವಯಿತ್ರಿ ಹಾಗೂ ಸಾಹಿತಿ ಡಾ. ಧರಣಿದೇವಿ ಮಾಲಗತ್ತಿ ಅಧ್ಯಕ್ಷತೆ ವಹಿಸಲಿದ್ದಾರೆ. ಕವಿಗಳಾದ ಪ್ರೊ. ಕೆ.ಬಿ.ಸಿದ್ದಯ್ಯ ರವರು ಮುಖ್ಯ ಅತಿಥಿಗಳಾಗಿ ಹಾಗೂ ಉದಯೋನ್ಮುಖ ಗಾಯಕ ಮಾಸ್ಟರ್ ಹೃತ್ವಿಕ್ ಚಿಗುರು ಅತಿಥಿಯಾಗಿ ವೇದಿಕೆ ಹಂಚಿಕೊಳ್ಳಲಿದ್ದಾರೆ ಎಂದರು.
ಸೆಪ್ಟಂಬರ್ 25ರಂದು ವಿನೋದ ಕವಿಗೋಷ್ಠಿ ಮತ್ತು ಗೀತಗಾಯನ (ಹಾಸ್ಯ ಕವಿಗೋಷ್ಠಿ) ನಡೆಯಲಿದ್ದು, ಪ್ರಖ್ಯಾತ ಹಾಸ್ಯ ಕವಿಗಳಿಂದ ಹಾಸ್ಯ ಚುಟುಕಗಳ ಜುಗಲ್ಬಂದಿ (ಡಾ.ಚಂ.ಪಾ, ಬಿ.ಆರ್. ಲಕ್ಷ್ಮಣರಾವ್, ದುಂಡಿರಾಜ್ ಮತ್ತು ತಂಡ) ಹಾಗೂ ಸಂಗೀತ ಗೋಷ್ಠಿ (ಪಂಚಮ ಹಳಿಬಂಡಿ ಮತ್ತು ತಂಡ) ಏರ್ಪಡಿಸಲಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಕ್ಕರೆ ಸಚಿವೆ ಗೀತಾ ಮಹದೇವಪ್ರಸಾದ್ ಹಾಗೂ ಚಿತ್ರ ನಟಿ ಮಯೂರಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.

ಸೆಪ್ಟಂಬರ್ 26 ರಂದು, ವಿಶಿಷ್ಟ ಕವಿಗೋಷ್ಠಿ (ವಿಶೇಷ ಕವಿಗೋಷ್ಠಿ)ಸಮಾಜದ ನಿರ್ಲಕ್ಷ್ಯಿತ, ಶೋಷಿತ, ಅಸಹಾಯಕ ಹಾಗೂ ಅನಾಥ ಚೈತನ್ಯಗಳ ಮತ್ತು ವಿಶೇಷ ಚೇತನರ ಸುಪ್ತ ಪ್ರತಿಭೆಯ ಅನಾವರಣ ಇರಲಿದೆ. ವಿಧಾನ ಪರಿಷತ್ ಸದಸ್ಯೆ ಡಾ.ಜಯಮಾಲ ಅಧ್ಯಕ್ಷತೆ ವಹಿಸಲಿದ್ದಾರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮತ್ತು ಖ್ಯಾತ ಸಾಹಿತಿ ಕೆ. ನೀಲಾ ವಿಶೇಷ ಆಹ್ವಾನಿತರಾಗಿರುತ್ತಾರೆ. ಕೇಂದ್ರ ನಾಗರಿಕ ಸೇವಾ ರ್ಯಾಂಕ್ ವಿಜೇತ ಮೈಸೂರಿನ ಪ್ರತಿಭೆ ಕೆಂಪ ಹೊನ್ನಯ್ಯ ಅವರು ಆಶಯ ನುಡಿ ಗಳನ್ನಾಡಲಿದ್ದಾರೆ .
ವಿಖ್ಯಾತರ ಕವಿಗೋಷ್ಠಿ ಅಥವಾ ಪ್ರಧಾನ ಕವಿಗೋಷ್ಠಿ ಸೆಪ್ಟಂಬರ್27ರಂದು ನಡೆಯಲಿದೆ, ರಾಜ್ಯದ ವಿವಿಧ ಜಿಲ್ಲೆಗಳಿಂದ ಪ್ರಮುಖ ಕವಿಗಳು ಭಾಗವಹಿಸಲಿದ್ದಾರೆ. ಸಾಹಿತಿ ಹಾಗೂ ಗೀತ ರಚನಕಾರ ಜಯಂತ್ ಕಾಯ್ಕಿಣಿ ವಿಶೇಷ ಆಹ್ವಾನಿತರಾಗಿರುತ್ತಾರೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಎಸ್.ಜಿ.ಸಿದ್ದಾರಾಮಯ್ಯ ಅಧ್ಯಕ್ಷತೆ ವಹಿಸಲಿದ್ದು, ಹಂಪಿ ಕನ್ನಡವಿಶ್ವವಿದ್ಯಾನಿಲಯದ ಕುಲಪತಿಗಳು ಡಾ ಮಲ್ಲಿಕಾ ಘಂಟಿ ಮುಖ್ಯ ಅತಿಥಿಗಳಾಗಿ ಕವಿಗೋಷ್ಠಿ ಯನ್ನು ನಡೆಸಿಕೊಡಲಿದ್ದಾರೆ ಎಂದು ತಿಳಿಸಿದರು.












Click it and Unblock the Notifications