ಬಾವಲಿಗಳು ಅಭಿವೃದ್ಧಿಯ ಸಂಕೇತ ಎಂದ ಕಡಜೆಟ್ಟಿ ಗ್ರಾಮಸ್ಥರು!
ಮೈಸೂರು ಮೇ 25 : ನಿಪಾಹ್ ವೈರಸ್ ಹರಡುತ್ತಿರುವ ಸುದ್ದಿ ಇಡೀ ರಾಜ್ಯವನ್ನೇ ಕಂಗೆಡಿಸಿದೆ. ಈ ವೈರಸ್ ಬಾವಲಿಯಿಂದ ಹರಡುತ್ತಿದೆ ಎಂಬ ಸುದ್ದಿ ತಿಳಿದ ಮೇಲಂತೂ ಬಾವಲಿಯನ್ನು ನೋಡಿದರೆ ಬೆಚ್ಚಿ ಬೀಳುತ್ತಿದ್ದಾರೆ ಜನರು.
ತಮ್ಮ ಊರಗಳ ಮರಗಳಲ್ಲಿ ಗುಂಪುಗುಂಪಾಗಿ ಜೋತಾಡುತ್ತಿದ್ದ ಬಾವಲಿಗಳನ್ನು ನೋಡಿ ಖುಷಿ ಪಡುತ್ತಿದ್ದ ಮಂದಿ ಇದೀಗ ಅವುಗಳು ಎಲ್ಲಿ ನಮಗೆ ನಿಪಾಹ್ ಕಾಯಿಲೆ ಹರಡಿ ಬಿಡುತ್ತವೋ ಎಂಬ ಭಯದಿಂದ ಒದ್ದಾಡುತ್ತಿದ್ದಾರೆ.
ಕೆಲವೆಡೆ ತಮ್ಮ ಊರಿನಲ್ಲಿರುವ ಬಾವಲಿಗಳನ್ನು ಓಡಿಸುವ ಯತ್ನಕ್ಕೆ ಕೈಹಾಕಿದರೆ, ನಂಜನಗೂಡು ತಾಲೂಕಿನ ಕಡಜೆಟ್ಟಿ ಗ್ರಾಮಸ್ಥರು ಮಾತ್ರ ತಮ್ಮ ಊರಿನಲ್ಲಿರುವ ಬಾವಲಿಗಳನ್ನು ಯಾವುದೇ ಕಾರಣಕ್ಕೂ ಓಡಿಸುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಇದಕ್ಕೆ ಕಾರಣವೂ ಇದೆ.

ಕಡಜೆಟ್ಟಿ ಗ್ರಾಮದ ಮರಗಳಲ್ಲಿ ತೂಗಾಡುವ ಬಾವಲಿಗಳು ಬರೀ ಶೋಭೆ ಮಾತ್ರವಲ್ಲ. ಇವು ಗ್ರಾಮದ ಅಭಿವೃದ್ಧಿಯ ಸಂಕೇತವಂತೆ. ಹೀಗಾಗಿ ಇವುಗಳನ್ನು ಯಾವುದೇ ಕಾರಣಕ್ಕೂ ಅಲ್ಲಿಂದ ತೆರವುಗೊಳಿಸಲು ನಾವು ಬಿಡುವುದಿಲ್ಲ ಎನ್ನುತ್ತಿದ್ದಾರೆ ಗ್ರಾಮಸ್ಥರು.
ನಮ್ಮ ಗ್ರಾಮದಲ್ಲಿ ಅನಾದಿ ಕಾಲದಿಂದಲೂ ಇವು ವಾಸಿಸುತ್ತಿವೆ. ಹೀಗಿರುವಾಗ ಇದುವರೆಗೆ ಇವುಗಳಿಂದ ಗ್ರಾಮಸ್ಥರಿಗೆ ತೊಂದರೆಯಾಗಿಲ್ಲ. ಈಗ ನಿಪಾಹ್ ವೈರಸ್ ಹರಡಲು ಬಾವಲಿಗಳು ಮತ್ತು ಹಂದಿಗಳು ಕಾರಣ ಎಂದು ಆರೋಗ್ಯಾಧಿಕಾರಿಗಳು ಹೇಳುತ್ತಿದ್ದಾರೆ.
ಹಂದಿಗಳು ನಮ್ಮ ಊರಲ್ಲಿ ಇಲ್ಲ. ಇನ್ನು ಬಾವಲಿಗಳಿಂದ ನಮಗೇನು ತೊಂದರೆಯಾಗಲ್ಲ ಎಂಬುದು ಅವರ ಅಭಿಪ್ರಾಯ. ಹಾಗೆ ನೋಡಿದರೆ ಕಡಜೆಟ್ಟಿ ಗ್ರಾಮದಲ್ಲಿ ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ಬಾವಲಿಗಳಿವೆಯಂತೆ ಅವುಗಳಿಂದ ಇದುವರೆಗೂ ಯಾವುದೇ ತೊಂದರೆಯಾಗಿಲ್ಲವಂತೆ.

ಇನ್ನು ಈ ಕುರಿತು ಅಭಿಪ್ರಾಯ ಹಂಚಿಕೊಂಡಿರುವ ಗ್ರಾಮದ ಶಿವಕುಮಾರಸ್ವಾಮಿ ಎಂಬುವರು ಬಾವಲಿಗಳು ನಮಗೆ ಅದೃಷ್ಟ ತಂದ ಜೀವಿಗಳು. ಗ್ರಾಮದಲ್ಲಿ ಮಳೆ ಬೆಳೆ ಸಕಾಲಕ್ಕೆ ಆಗುತ್ತಿದೆ. ಅಲ್ಲದೇ ಬಾವಲಿಗಳು ನಮ್ಮನ್ನು ಮುಂಜಾನೆ ನಿದ್ದೆಯಿಂದ ಎಚ್ಚರಿಸುವ ಅಲರಾಂನಂತಿವೆ.
ಬಾವಲಿಗಳ ಶಬ್ದ ಶುರುವಾಯಿತೆಂದರೆ ಮುಂಜಾನೆ 5 ಗಂಟೆ ಎಂದು ನಮಗೆ ಎಚ್ಚರವಾಗುತ್ತದೆ. ಬಾವಲಿಯನ್ನು ಹಿಡಿಯಲು, ಕೊಲ್ಲಲು ಹಲವು ಮಂದಿ ಬಂದಿದ್ದಾರೆ ಆದರೆ ನಾವು ಯಾವ ಮುಲಾಜಿಲ್ಲದೇ ವಾಪಸ್ ಕಳುಹಿಸಿದ್ದೇವೆ. ಕೊಲ್ಲಲು ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಒಂದು ವೇಳೆ ನಿಪಾಹ್ ವೈರಸ್ ಗೆ ಹೆದರಿ ಅಮಾಯಕ ಬಾವಲಿಗಳ ಮಾರಣ ಹೋಮಕ್ಕೆ ಜನ ಮುಂದಾದರೆ ಮುಂದಿನ ದಿನಗಳಲ್ಲಿ ಈ ಜೀವಿಯ ಸಂಕುಲವೇ ಅಳಿದು ಹೋದರೂ ಅಚ್ಚರಿ ಪಡಬೇಕಾಗಿಲ್ಲ.












Click it and Unblock the Notifications