ಪ್ರವಾಹ ಉಕ್ಕುತ್ತಿದ್ದರೆ ಪುಂಡರಿಗೆ ಸೆಲ್ಫಿ ಚಿಂತೆ! ಅವ್ರಿಗೆಂತ ಮರ್ಲ್ ಅಂಬ್ರ..!
Recommended Video
ಮೈಸೂರು, ಆಗಸ್ಟ್ 11: ಅದೇನೋ ಗಾದೆ ಇದ್ಯಲ್ಲ... ಅಜ್ಜಿಗೆ ಅರಿವೆ ಚಿಂತೆ ಆದ್ರೆ ಇನ್ಯಾರಿಗೋ, ಇನ್ನೇನೋ ಚಿಂತೆ ಅಂತ. ಹಾಗಾಯ್ತು ಪರಿಸ್ಥಿತಿ. ಕಬಿನಿ ಜಲಾಶಯದಿಂದ ಸುಮಾರು 80ಸಾವಿರ ಕ್ಯೂಸೆಕ್ ನೀರು ಹರಿದು ಬಂದು ಪ್ರವಾಹದಂಥ ಪರಿಸ್ಥಿತಿ ಎದುರಾಗಿದ್ದರೆ ಕೆಲವು ಪುಂಡರು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ! ಅವ್ರಿಗೆಂತ ಮರ್ಲ್ ಅಂಬ್ರ..?!
ಕಬಿನಿ ಜಲಾಶಯದಿಂದ ನೀರು ಹೊರಬಂದು ಹೆಚ್.ಡಿ.ಕೋಟೆ ತಾಲೂಕಿನ ನದಿ, ರಸ್ತೆ, ನಾಲೆಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಜಮೀನುಗಳಲ್ಲಿ ನೀರು ತುಂಬಿ ನಿಂತಿದೆ. ಇದನ್ನು ನೋಡಿ ರೈತರು ಮಮ್ಮಲ ಮರುಗುತ್ತಿದ್ದರೆ, ಕೆಲ ಯುವಕರು ಮಾತ್ರ ಪುಂಡಾಟ ನಡೆಸುತ್ತಾ ಅಪಾಯವನ್ನು ತಾವೇ ಮೈಮೇಲೆ ಎಳೆದುಕೊಳ್ಳುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ.
ಕಪಿಲೆಯ ಪ್ರವಾಹಕ್ಕೆ ನಂಜನಗೂಡು ಭಾಗಶಃ ಜಲಾವೃತ
ಪರಿಸ್ಥಿತಿಯ ಗಂಭೀರತೆಯ ಅರಿವಿಲ್ಲದೆ, ಯುವಕರು ಹೀಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿರುವುದುದ ರೈತರಲ್ಲಿ ಇರಿಸುಮುರಿಸುಂಟುಮಾಡಿದೆ.
ಸೇತುವೆ ಮೇಲೆ ಸರ್ಕಸ್!
ಕೆಲವರು ಜಲಾವೃತ ಪ್ರದೇಶಗಳನ್ನು ನೋಡಲು ಮುಗಿಬೀಳುತ್ತಿದ್ದರೆ, ಮತ್ತೆ ಕೆಲವರು ಸೇತುವೆ ಮೇಲೆ ಕುಳಿತುಕೊಂಡು, ಹರಿಯುವ ನೀರಿನಲ್ಲಿ ದಾಟುವುದು, ನಾಲೆಯ ದಡದ ಮೇಲೆ ಬೈಕ್ ಗಳಲ್ಲಿ ತೆರಳುವುದು ಹೀಗೆ ಅಪಾಯಕಾರಿ ಚಟುವಟಿಕೆ ಮಾಡುತ್ತಾ ನೋಡುಗರ ಮೈಜುಮ್ಮೆನ್ನುವಂತೆ ಮಾಡುತ್ತಿದ್ದಾರೆ. ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ನೀರು ಪಾಲಾಗುವ ಸಾಧ್ಯತೆ ಹೆಚ್ಚಿರುತ್ತದೆ.
ಕಬಿನಿ ವ್ಯಾಪ್ತಿಯ ಗ್ರಾಮಗಳ ರೈತರದು ಸಂಕಷ್ಟದ ಬದುಕು!
ರಸ್ತೆಗಳಿಲ್ಲದೆ ಜನರ ಪರದಾಟ
ನೀರು ತುಂಬಿ ಹರಿಯುತ್ತಿರುವುದರಿಂದ ಈಗಾಗಲೇ ಸರಗೂರು ಸಮೀಪದ ಸಾಗರೆ, ಅಗತ್ತೂರು, ಬಿದರಹಳ್ಳಿ, ಇನ್ನಿತರ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ. ಇಲ್ಲಿನ ರಸ್ತೆಗಳ ಮೇಲೆ ನೀರು ತುಂಬಿ ಹರಿಯುತ್ತಿದ್ದು, ಈ ರಸ್ತೆ ಸಂಪರ್ಕ ಕಡಿತಗೊಂಡಿರುವುದರಿಂದ ಜನ ಸಾಗರೆ ಗ್ರಾಮದ ಸಂಪರ್ಕ ರಸ್ತೆಗೆ ಹಂಚಿಪುರ ಮಾರ್ಗವಾಗಿ ಹೆಗ್ಗನೂರು ಕಂದೆಗಾಲವಾಗಿ ಸುಮಾರು 20 ಕಿ.ಮೀ. ಬಳಸಿ ಬರಬೇಕಾಗಿದೆ. ಇದನ್ನು ತಪ್ಪಿಸುವ ಸಲುವಾಗಿ ತುಂಬಿ ಹರಿಯುವ ರಸ್ತೆ ಮೇಲೆಯೇ ಜನ ಬೈಕ್ ಹಾಗೂ ಸೈಕಲ್, ಕಾಲು ನಡಿಗೆ ಮುಖಾಂತರ ಜೀವವನ್ನು ಲೆಕ್ಕಿಸದೆ ದಾಟುತ್ತಿರುವುದು ಕಂಡು ಬರುತ್ತಿದೆ.
ಶಾಲಾ ಮಕ್ಕಳ ಗೋಳು ದೇವರಿಗೇ ಪ್ರೀತಿ!
ಎನ್.ಬೇಗೂರು, ಬಿರಂಬಳ್ಳಿ, ಬಿದರಹಳ್ಳಿ, ಭೀಮನಕೋಲ್ಲಿ, ತೆರಣಿಮುಂಟಿ, ಆಗತ್ತೂರು, ಚನ್ನಿಪುರ, ಹೆಗ್ಗನೊರು, ಕಾಟವಾಳು, ನೆಮನಹಳ್ಳಿ, ನಡಾಡಿ, ಬಂಕವಾಡಿ ಸೇರಿದಂತೆ ನೂರಾರು ಗ್ರಾಮಗಳು ಸಂಪರ್ಕ ಕಡಿದುಕೊಂಡಿದ್ದು ಶಾಲಾ ಮಕ್ಕಳು, ಕೆಲಸಕ್ಕೆ ತೆರಳುವ ಕೆಲಸಗಾರರಿಗೆ ತೊಂದರೆಯುಂಟಾಗಿದೆ. ಆದರೂ ಅನಿವಾರ್ಯವಾಗಿ ತೆರಳೇ ಬೇಕಾಗಿರುವುದರಿಂದ ಜೀವದ ಹಂಗು ತೊರೆದು, ಸಾಹಸ ಮಾಡಿ ಶಾಲೆ, ಕೆಲಸಗಳಗೆ ತೆರಳುವ ಪರಿಸ್ಥಿತಿ ಬಂದೊದಗಿದೆ.
ಸೆಲ್ಫಿ ತೆಗೆಯಲು ಮುಗಿಬಿದ್ದ ಜನ
ಸರಗೂರು ಬಳಿಯ ಸೋಮೇಶ್ವರ ದೇವಸ್ಥಾನದ ರಸ್ತೆ ಹಾಗೂ ದೇವಾಲಯದ ಈಶ್ವರನ ಪ್ರತಿಮೆ ನೀರಿನಿಂದ ಜಲಾವೃತಗೊಂಡಿವೆ ಮತ್ತೊಂದೆಡೆ ಸರಗೂರು ಹಾಗೂ ಹ್ಯಾಂಡ್ ಪೋಸ್ಟ್ ಸಂಪರ್ಕ ಸೇತುವೆ ಜಲಾವೃತಗೊಂಡಿದ್ದು ಇದನ್ನು ನೋಡಲು ಜನ ಸಾಗರ ಹರಿದು ಬರುತ್ತಿದ್ದಾರೆ. ಪೊಲೀಸರು ಸೇತುವೆ ಬಳಿಗೆ ಜನರನ್ನು ಬಿಡುತ್ತಿಲ್ಲವಾದರೂ ಕೆಲವರು ನಿಂತಲ್ಲೇ ಸೆಲ್ಫಿ ಫೋಟೋ ತೆಗೆಯುವ ಪ್ರಯತ್ನ ಮಾಡುತ್ತಿದ್ದಾರೆ. ಕೆಲವರು, ಸೇತುವೆ ಮೇಲೆ, ನಾಲೆಯ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಮುಗಿ ಬೀಳುತ್ತಿದ್ದು ಸ್ವಲ್ಪ ಎಚ್ಚರ ತಪ್ಪಿದರೂ ಜೀವಕ್ಕೆ ಕುತ್ತು ಸಂಭವಿಸುವ ಸಾಧ್ಯತೆಯಿದೆ. ಆದ್ದರಿಂದ ಜನ ಎಚ್ಚೆತ್ತುಕೊಳ್ಳುವುದು ಅಗತ್ಯವಿದೆ.