ಮೈಸೂರಿನಲ್ಲಿ ಮಕ್ಕಳಿಗಾಗಿ ಜ್ಯೂನಿಯರ್ ಕ್ರೇಜಿ ಬಿಗ್ ಬಾಸ್!
ಮೈಸೂರಿನಲ್ಲಿ ಮಕ್ಕಳಿಗಾಗಿ ಜ್ಯೂನಿಯರ್ ಕ್ರೇಜಿ ಬಿಗ್ ಬಾಸ್ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಆದರೆ ಈಗಾಗಲೇ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಗೂ ಇದಕ್ಕೂ ಯಾವುದೇ ಸಾಮ್ಯವಿಲ್ಲ!
ಮೈಸೂರು, ಏಪ್ರಿಲ್ 28 : ಜ್ಯೂನಿಯರ್ ಕ್ರೇಜಿ ಬಿಗ್ ಬಾಸ್ ರಿಯಾಲಿಟಿ ಶೋವನ್ನು ಮೈಸೂರಿನ ಶ್ರೀಗುರುಮಂತ್ರಾಲಯ ಮೀಡಿಯಾ ಹೌಸ್ ಹಾಗೂ ಸಮರ ಟಿವಿ ಸಹಯೋಗದೊಂದಿಗೆ ಆಯೋಜಿಸಲಾಗಿದೆ ಎಂದು ಸಮರ ಟಿವಿಯ ಬಿ.ಎನ್.ನಟರಾಜ್ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 'ರಿಯಾಲಿಟಿ ಶೋ ಅಡಿಷನ್ ಮೇ.20 ರಿಂದ 22ರವರೆಗೆ ಮೂರು ದಿನಗಳ ಕಾಲ ಬೆಳಿಗ್ಗೆ 8 ರಿಂದ 6ರವರೆಗೆ ಓರಿಯಲ್ ರೆಸಾರ್ಟ್ ನಲ್ಲಿ ನಡೆಯಲಿದ್ದು, 10 ರಿಂದ 16 ವರ್ಷದೊಳಗಿನ ಮಕ್ಕಳು ಪಾಲ್ಗೊಳ್ಳಬಹುದು. ಮಕ್ಕಳಲ್ಲಿರುವ ಅಸಾಮಾನ್ಯ ಪ್ರತಿಭೆಯನ್ನು ಗುರುತಿಸಿ ಆಯ್ಕೆ ಮಾಡಲಾಗುವುದು ಎಂದವರು ಹೇಳಿದ್ದಾರೆ.[ಮೈಸೂರು ವಿವಿ ಪ್ರಕರಣ: ಟಾಪರ್ ವಿದ್ಯಾರ್ಥಿಯಿಂದಲೇ ಕೃತ್ಯ!]

'ಇದೊಂದು ವಿನೂತನ ಕಾರ್ಯಕ್ರಮವಾಗಿದ್ದು, ರಾಷ್ಟ್ರೀಯ ವಾಹಿನಿಗಳಲ್ಲಿ ಪ್ರಸಾರವಾಗುವ ಬಿಗ್ ಬಾಸ್ ಗೂ ಇದಕ್ಕೂ ಯಾವುದೇ ಸಾಮ್ಯವಿಲ್ಲ, ಶೋ ಕೇವಲ 20 ದಿನಗಳ ಕಾಲ ನಡೆಯಲಿದೆ. ಸುಮಾರು 15 ಜನ ಸ್ಪರ್ಧಿಗಳನ್ನು ಆಯ್ಕೆ ಮಾಡಿ, ಅಕ್ಟೋಬರ್ ದಸರಾ ರಜೆ ಸಮಯದಲ್ಲಿ ಚಿತ್ರೀಕರಣ ನಡೆಸಲಾಗುವುದು ಎಂದರು.
ಅರ್ಜಿ ಶುಲ್ಕ 200 ರೂಪಾಯಿಯಾಗಿದ್ದು, ರಿಯಾಲಿಟಿ ಶೋನಲ್ಲಿ ಆಯ್ಕೆಯಾದ ಸ್ಪರ್ಧಿಗಳ ಪೋಷಕರಿಗೂ ವಸತಿ ವ್ಯವಸ್ಥೆ ಮಾಡಲಾಗುತ್ತದೆ. ವಿಜೇತರಿಗೆ 10 ಲಕ್ಷ ರೂಪಾಯಿ ಬಹುಮಾನವಿದ್ದು, ಭಾರತದ ಯಾವುದೇ ಮೂಲೆಯ ಮಕ್ಕಳೂ ಭಾಗವಹಿಸಬಹುದು.
ಶೋನಲ್ಲಿ ಭಾಗವಹಿಸುವವರು ಮೆಡಿಕಲ್ ಹಾಗೂ ಶಾಲಾ ದೃಢೀಕರಣ ಪತ್ರ ಕಡ್ಡಾಯವಾಗಿ ನೀಡಬೇಕಿದೆ. ವ್ಯಕ್ತಿತ್ವ ವಿಕಸನ ಸೇರಿದಂತೆ ಪ್ರತಿ ದಿನ ವಿನೂತನ ವಿಷಯಾಧಾರಿತ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಮಾರೋಪ ಸಮಾರಂಭದಲ್ಲಿ ಖ್ಯಾತ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸುವರು ಎಂದು ತಿಳಿಸಿದರು.
ಅರ್ಜಿಗಳು ಸಮರ ಟಿವಿ ಕಾರ್ಯಾಲಯದಲ್ಲಿ, ಶ್ರೀಗಣೇಶ ಫೋಟೋ ಪ್ಯಾಲೇಸ್, ಪೂಜಾ ಟೆಂಟ್ ಹೌಸ್, ದೇವರಾಜ್ ಅರಸ್ ಹಾಗೂ ಕಾಳಿಕಾದೇವಿ ರಸ್ತೆಯ ಮೈಸೂರು ಟಾರ್ಪಾಲಿನ್ಸ್,ಎಸ್.ಎಂಪಿ ಡೆವಲಪರ್ಸ್ ಹಾಗೂ ಆನ್ ಲೈನ್ ವೆಬ್ ಸೈಟ್ ನಲ್ಲಿಯೂ ಲಭ್ಯವಿವೆ.












Click it and Unblock the Notifications