ಜಂಬೋ ಸರ್ಕಸ್ 'ದಂತದ ಚಂಚಲ್' ಇನ್ನು ನೆನಪು ಮಾತ್ರ
ಮೈಸೂರು, ನವೆಂಬರ್ 20 : ಜಂಬೋ ಸರ್ಕಸ್ನಲ್ಲಿ ಹಲವು ವರ್ಷಗಳ ಕಾಲ ತನ್ನದೇ ಆದ ರೀತಿಯಲ್ಲಿ ಸರ್ಕಸ್ ಮಾಡಿ ಜನರ ಮೆಚ್ಚುಗೆಗಳಿಸಿದ್ದ ಚಂಚಲ್ ಎಂಬ ಹೆಣ್ಣಾನೆ ಮೃತಪಟ್ಟಿದೆ. ಸಮರ್ಪಕವಾದ ಆಹಾರ ಮತ್ತು ಆರೈಕೆಯಿಲ್ಲದೆ ಆನೆ ಚಂಚಲ್ ಸಾವನ್ನಪ್ಪಿದೆ ಎಂದು ಆರೋಪಿಸಲಾಗುತ್ತಿದೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿನ ಪಾಳು ಬಂಗಲೆಯೊಂದರಲ್ಲಿ ಕಳೆದ ಕೆಲವು ಸಮಯಗಳಿಂದ ಸಮರ್ಪಕವಾದ ಆಹಾರ ಮತ್ತು ಆರೈಕೆಯಿಲ್ಲದೆ ಸೆರೆವಾಸ ಅನುಭವಿಸುತ್ತಿದ್ದ ದಂತದ ಚಂಚಲ್ (51) ಹೆಣ್ಣಾನೆ ಗುರುವಾರ ಮೃತಪಟ್ಟಿದೆ. [ಜಂಬೂ ಸವಾರಿಯ ಆನೆ 'ಕಾಂತಿ' ಇನ್ನು ನೆನಪು ಮಾತ್ರ]

ಆನೆಗಳಿಗೆ ನಿರ್ಬಂಧ : ಮೈಸೂರಿನ ಜಂಬೋ ಸರ್ಕಸ್ಗೆ 5 ಹೆಣ್ಣಾನೆಗಳನ್ನು ಕರೆತರಲಾಗಿತ್ತು. ಈ ಆನೆಗಳು ಸರ್ಕಸ್ನಲ್ಲಿ ಪ್ರದರ್ಶನ ನೀಡಿ ಪ್ರೇಕ್ಷಕರ ಮನ ಸೆಳೆಯುತ್ತಿದ್ದವು. ಆದರೆ, ಸರ್ಕಸ್ನಲ್ಲಿ ಆನೆಗಳ ಪ್ರದರ್ಶನಕ್ಕೆ ಅನಿಮಲ್ ವೆಲ್ಫೇರ್ ಬೋರ್ಡ್ ಆಫ್ ಇಂಡಿಯಾ ಮತ್ತು ಸುಪ್ರೀಂಕೋರ್ಟ್ ನಿಷೇಧ ಹೇರಿದ್ದವು. [ಜಂಬೂ ಸವಾರಿ ಆನೆಗಳ ಬಯೋಡೇಟಾ]
ಹೀಗಾಗಿ ಆನೆಗಳನ್ನು ಸಂಸ್ಥೆಯು ಶ್ರೀರಂಗಪಟ್ಟಣ ಹೊರವಲಯದ ಬೊಮ್ಮೂರು ಅಗ್ರಹಾರ ಬಳಿಯ 'ಫನ್ಫೋರ್ಟ್' ರೆಸಾರ್ಟ್ನಲ್ಲಿ ಕಟ್ಟಿಹಾಕಿತ್ತು. ಇವುಗಳ ಆರೈಕೆಯನ್ನು ಸರಿಯಾಗಿ ಮಾಡುತ್ತಿರಲಿಲ್ಲ. ಕಾಲುಗಳಿಗೆ ನೈಲಾನ್ ಹಗ್ಗ ಕಟ್ಟಿ ಕಾಂಕ್ರೀಟ್ ಫಿಲ್ಲರ್ಗಳಿಗೆ ಕಟ್ಟಲಾಗುತ್ತಿತ್ತು. ಹೊಟ್ಟೆ ತುಂಬುವಷ್ಟು ಆಹಾರಗಳನ್ನು ನೀಡಲಾಗುತ್ತಿರಲಿಲ್ಲ. ವೈದ್ಯಕೀಯ ಉಪಚಾರವನ್ನೂ ಮಾಡುತ್ತಿರಲಿಲ್ಲ.

ಇದೇ ಸ್ಥಳದಲ್ಲಿದ್ದ ಹೆಣ್ಣಾನೆ ಚಂಚಲ್ ಅಸ್ವಸ್ಥಗೊಂಡು ಮೃತಪಟ್ಟಿದೆ. ಗುರುವಾರ ಫನ್ಫೋರ್ಟ್ ಆವರಣದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನಡೆಸಲಾಗಿದೆ. ಇಲ್ಲಿರುವ ಇನ್ನುಳಿದ ಆನೆಗಳು ಕೂಡ ಅನಾರೋಗ್ಯದಿಂದ ಬಳಲುತ್ತಿವೆ.. ಚಂಚಲ್ ಆನೆ ಸಾವಿನ ಬಗ್ಗೆ ಅರಣ್ಯ ಇಲಾಖೆಯು ತನಿಖೆ ನಡೆಸಲಿದೆ.
ಚಿಕ್ಕ ದಂತವಿತ್ತು : ಮೃತಪಟ್ಟ ಚಂಚಲ್ ಆನೆ ಹೆಣ್ಣಾನೆ ಆಗಿದ್ದರೂ ಇದಕ್ಕೆ ದಂತವಿತ್ತು. ಹೀಗಾಗಿ ಪ್ರೇಕ್ಷಕರ ಕುತೂಹಲ ಕೆರಳಿಸುತ್ತಿತ್ತು. ಆದ್ದರಿಂದ ಇದನ್ನು ಸರ್ಕಸ್ನಲ್ಲಿ ಬಳಸಿಕೊಳ್ಳಲಾಗುತ್ತಿತ್ತು. ಅಪರೂಪದ ಸಂದರ್ಭಗಳಲ್ಲಿ ಹೆಣ್ಣಾನೆಗಳಿಗೂ ದಂತ ಇರುತ್ತವೆ ಎಂದು ಮೈಸೂರಿನ ಸಿಸಿಎಫ್ ಪರಮೇಶ್ವರ್ ಹೇಳಿದ್ದಾರೆ.













Click it and Unblock the Notifications